ಪದ್ಯ ೩೧: ದುರ್ಯೋಧನನು ಸಂಜಯನನ್ನು ಅಳಿಮನವೆಂದು ಏಕೆ ಕರೆದನು?

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಈ ಹೀನನೈ ನೀನಕಟ ಸಂಜಯ ಎಂದನಾ ಭೂಪ (ಗದಾ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಡನ್ನು ಸುಡಲು ಅಗ್ನಿಯು ಗಾಳಿಯ ಸಹಾವನ್ನು ಬಯಸುತ್ತಾನೆ, ನಿಜ ಆದರೆ ಕತ್ತಲನ್ನು ತೊಲಗಿಸಲು ಸೂರ್ಯನು ಯಾರ ಸಹಾಯವನ್ನು ಬಯಸುತ್ತಾನೆ? ಈ ಸಮರ್ಥವಾದ ಗದೆಯಿರಲು, ಕುಂತಿಯ ಮಕ್ಕಳನ್ನು ಲೆಕ್ಕುಸುವೆನೇ? ಸಂಜಯ ನಿನ್ನ ಮನ ಸಣ್ಣದ್ದು ಎಂದು ಹೇಳಿದನು.

ಅರ್ಥ:
ಕಾನನ: ಕಾಡು; ಕೈಯಿಕ್ಕು: ಮುಟ್ಟು; ಪವಮಾನ: ವಾಯು; ಪಾವಕ: ಬೆಂಕಿ; ಬಯಸು: ಆಸೆ ಪಡು, ಇಚ್ಛಿಸು; ಭಾನು: ಸೂರ್ಯ; ಭಾರಿ: ದೊಡ್ಡ; ತಮ: ಅಂಧಕಾರ; ನೆರವು: ಸಹಾಯ; ನಿಭೃತ: ಗುಟ್ಟು, ರಹಸ್ಯ; ಗದೆ: ಮುದ್ಗರ; ಸೂನು: ಮಕ್ಕಳು; ಕೈಕೊಂಬು: ಹಿಡಿ, ಲೆಕ್ಕಿಸು; ಮನ:ಮನಸ್ಸು; ಹೀನ: ಕೆಟ್ಟದು; ಅಕಟ: ಅಯ್ಯೋ; ಭೂಪ: ರಾಜ;

ಪದವಿಂಗಡಣೆ:
ಕಾನನಕೆ +ಕೈಯಿಕ್ಕುವರೆ +ಪವ
ಮಾನನನು +ಪಾವಕನು+ ಬಯಸುವ
ಭಾನು +ಭಾರಿಯ +ತಮವ್+ಅತಿವ್+ಇವನ್+ಅದಾರ+ ನೆರವಿಯಲಿ
ಈ +ನಿಭೃತ +ಗದೆಯಿರಲು +ಕುಂತೀ
ಸೂನುಗಳ +ಕೈಕೊಂಬೆನೇ +ಮನ
ಈ +ಹೀನನೈ +ನೀನಕಟ +ಸಂಜಯ +ಎಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು ಬಯಸುವ, ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
(೨) ಕೈಯಿಕ್ಕು, ಕೈಕೊಂಬು – ಪದಗಳ ಬಳಕೆ
(೩) ಜೋಡಿ ಪದಗಳು (ಕ, ಪ) – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು