ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ (ದ್ರೋಣ ಪರ್ವ, ೧೫ ಸಂಧಿ, ೧೬ ಪದ್ಯ)
ತಾತ್ಪರ್ಯ:
ದ್ರೋಣನು ತನ್ನ ಮಾತನ್ನು ಮುಂದುವರೆಸುತ್ತಾ, ರಾಜ ನಿನಗೇನು ಹುಚ್ಚೇ! ಎಲ್ಲ ದೈವಗಳ ದೊರೆಯಾದ ಶಿವನು ದೇವತೆಗಳನ್ನು ಲೆಕ್ಕಿಸುವುದಿಲ್ಲ. ಅರ್ಜುನನ ಬಳಿ ಇನ್ನು ಪಾಶುಪತಾಸ್ತ್ರವಿಲ್ಲ. ಈಗ ರಾತ್ರಿಯುದ್ಧದಲ್ಲಿ ವೈರಿಗಳನ್ನು ಹಿಂಡುತ್ತೇನೆ ಕೈದೀವಿಗೆಗಳನ್ನು ಸಿದ್ಧಗೊಳಿಸು ಎಂದು ದ್ರೋಣರು ಹೇಳಿದರು.
ಅರ್ಥ:
ಅರಸ: ರಾಜ; ಮರುಳೆ: ಮೂಢ; ಸುರ: ದೇವತೆ; ಸರಕು: ಸಾಮಾನು, ಸಾಮಗ್ರಿ; ಸಕಲ: ಎಲ್ಲಾ; ದೈವ: ಭಗವಂತ; ದೊರೆ: ಒಡೆಯ; ಹರ: ಶಿವ; ಅಸ್ತ್ರ: ಶಸ್ತ್ರ, ಆಯುಧ; ತರುಬು: ತಡೆ, ನಿಲ್ಲಿಸು; ಶರ: ಬಾಣ; ಹಗೆ: ವೈರಿ; ಇರುಳು: ರಾತ್ರಿ; ರಣ: ಯುದ್ಧ; ಹಿಂಡು: ಹಿಸುಕು, ಅದುಮು; ಸಂವರಿಸು: ಸಮಾಧಾನಗೊಳಿಸು, ಸಜ್ಜು ಮಾಡು; ಕೈದೀವಿಗೆ: ಪಂಜು; ಉಬ್ಬು: ಹಿಗ್ಗು;
ಪದವಿಂಗಡಣೆ:
ಅರಸ +ಮರುಳೈ +ನೀನು +ಸುರರನು
ಸರಕು+ಮಾಡನು +ಸಕಲ +ದೈವದ
ದೊರೆಯಲೇ +ಹರನ್+ಆತನ್+ಅಸ್ತ್ರವನ್+ಆರು +ತರುಬುವರು
ಹರನ +ಶರವಿಲ್ಲ್+ಇನ್ನು +ಹಗೆಗಳನ್
ಇರುಳು +ರಣದಲಿ +ಹಿಂಡುವೆನು +ಸಂ
ವರಿಸು +ಕೈದೀವಿಗೆಯನ್+ಎಂದನು +ದ್ರೋಣನ್+ಉಬ್ಬಿನಲಿ
ಅಚ್ಚರಿ:
(೧) ಶಿವನ ಹಿರಿಮೆ – ಸುರರನು ಸರಕುಮಾಡನು ಸಕಲ ದೈವದ ದೊರೆ
(೨) ದ್ರೋಣನ ಉಪಾಯ – ಹಗೆಗಳನಿರುಳು ರಣದಲಿ ಹಿಂಡುವೆನು