ಬಳಿಕ ಫಲುಗುಣ ರಥದ ಮೇಲಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ (ಗದಾ ಪರ್ವ, ೮ ಸಂಧಿ, ೪೯ ಪದ್ಯ)
ತಾತ್ಪರ್ಯ:
ಬಳಿಕ ಅರ್ಜುನನು ರಥದ ಮೇಲಿಂದ ಭೂಮಿಗೆ ಹಾರಿದನು. ಕೃಷ್ಣ, ಇನ್ನು ನೀನಿಳಿ ಎನ್ನಲು, ಶ್ರೀಕೃಷ್ಣನು ಬಾರುಕೋಲು, ಲಗಾಮು, ಹಗ್ಗಗಲನ್ನು ರಥದೊಳಗಿಟ್ಟು ಕೆಳಗಿಳಿದನು. ಆ ಕ್ಷಣವೇ ಛಿಟಿಛಿಟಿಲೆಂಬ ಸದ್ದಿನೊಡನೆ ಕಿಡಿಗಳು ಹಾರಿ, ತೇರು ಉರಿಯಲು ಕೆಂಪಾದ ಉರಿಗಳು ಆಕಾಶಕ್ಕಡರಿತು.
ಅರ್ಥ:
ಬಳಿಕ: ನಂತರ; ರಥ: ಬಂಡಿ; ಇಳೆ: ಭೂಮಿ; ಹಾಯ್ದು: ಹಾರು, ನೆಗಿ; ಚಮ್ಮಟಿಗೆ: ಚಾವಟಿ; ವಾಘೆ: ಲಗಾಮು; ನೇಣ: ಹಗ್ಗ; ನಗು: ಹರ್ಷ; ಛಟಛತಿಲು: ಶಬ್ದವನ್ನು ಸೂಚಿಸುವ ಪದ; ಕಿಡಿ: ಬೆಂಕಿ; ಉಚ್ಚಳಿಸು: ಹೊರಹೊಮ್ಮು; ಉರಿ: ಸುಡು; ಕೇಸುರಿ: ಕೆಂಪಾದ ಉರಿ; ನಭ: ಆಗಸ; ಅಪ್ಪಳಿಸು: ತಟ್ಟು, ತಾಗು;
ಪದವಿಂಗಡಣೆ:
ಬಳಿಕ +ಫಲುಗುಣ +ರಥದ +ಮೇಲಿಂದ್
ಇಳೆಗೆ +ಹಾಯ್ದನು +ಕೃಷ್ಣ+ ನೀನಿನ್
ಇಳಿ+ಎನಲು +ಚಮ್ಮಟಿಗೆ +ವಾಘೆಯ +ನೇಣ +ರಥದೊಳಗೆ
ಇಳುಹಿ +ನಗುತ +ಮುಕುಂದ +ರಥದಿಂದ್
ಇಳಿಯೆ +ಛಟಛಟಿಲೆಂದು+ ಕಿಡಿ+
ಉಚ್ಚಳಿಸಲ್+ಉರಿದುದು +ತೇರು +ಕೇಸುರಿ +ನಭವನ್+ಅಪ್ಪಳಿಸೆ
ಅಚ್ಚರಿ:
(೧) ಸುಡುವ ಶಬ್ದವನ್ನು ವಿವರಿಸುವ ಪರಿ – ಛಟಛಟಿ
(೨) ಇಳೆ, ಇಳಿ, ಇಳುಹಿ – ಪದಗಳ ಬಳಕೆ