ಪದ್ಯ ೧೦: ಅಶ್ವತ್ಥಾಮನು ದುರ್ಯೋಧನನನ್ನು ಎಲ್ಲಿಗೆ ತೆರಳಲು ಹೇಳಿದನು?

ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೈಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು (ಗದಾ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ನಿಮ್ಮ ಕೆಲಸವು ಆಯಿತೇ? ಪಾಂಡವರು ಬದುಕಿ ಉಳಿದಿರಲಿ. ನೀವು ಹಸ್ತಿನಾಪುರಕ್ಕೆ ಬಿಜಯಂಗೈಸಿರಿ. ನಿಮ್ಮ ತ್ರಾಣ ಹೇಗಿದೆ? ಪಾಂಡವರ ಪ್ರಾಣವು ಉಳಿದಿರಬಹುದು. ನಾನು ಬದುಕಿದ್ದರೆ ಅವರ ತಲೆಗಳನ್ನು ಕಡಿದು ಸಿಂಹಾಸನಕ್ಕೆ ಹಾರವಾಗಿ ಪೋಣಿಸಿ ಕಟ್ಟುತ್ತೇನೆ ಎಂದನು.

ಅರ್ಥ:
ಹರಿಬ: ಕಾರ್ಯ, ಕೆಲಸ; ಬಂದು: ಆಗಮಿಸು; ಸುತ: ಮಕ್ಕಳು; ಉಳಿದಿರಲಿ: ಜೀವಿಸಲಿ; ಸಾಕು: ನಿಲ್ಲು; ನಿಮ್ಮಡಿ: ನಿಮ್ಮ ಪಾದ; ಪುರ: ಊರು; ಬಿಜಯಂಗೈ: ದಯಮಾಡಿಸಿ, ಹೊರಡಿ; ಚೈತನ್ಯ: ಜೀವದ ಲಕ್ಷಣ, ಜೀವಂತಿಕೆ; ಗತಿ: ವೇಗ; ಹರಣ: ಜೀವ, ಪ್ರಾಣ; ತನುಜ: ಮಕ್ಕಳು; ಶಿರ: ತಲೆ; ಕೇವಣಿ: ಕೀಲಿಸುವಿಕೆ; ಕೇಸರಿ: ಸಿಂಹ; ಪೀಠ: ಆಸನ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹರಿಬ+ ಬಂದುದೆ +ಪಾಂಡುಸುತರ್+ಉಳಿ
ದಿರಲಿ +ಸಾಕಂತಿರಲಿ +ನಿಮ್ಮಡಿ
ಪುರಕೆ +ಬಿಜಯಂಗೈಯ್ಯಿರೇ +ಚೈತನ್ಯ+ಗತಿಯೆಂತು
ಹರಣವುಳಿದಡೆ+ ಪಾಂಡು+ತನುಜರ
ಶಿರವ +ಕೇವಣಿಸುವೆನಲೈ +ಕೇ
ಸರಿಯ ಪೀಠದೊಳ್+ಎಂದನ್+ಅಶ್ವತ್ಥಾಮ +ಕೈಮುಗಿದು

ಅಚ್ಚರಿ:
(೧) ಅಶ್ವತ್ಥಾಮನ ಧೀರ ನುಡಿ – ಪಾಂಡುತನುಜರ ಶಿರವ ಕೇವಣಿಸುವೆನಲೈ ಕೇಸರಿಯ ಪೀಠದೊಳೆಂದನಶ್ವತ್ಥಾಮ
(೨) ಸುತ, ತನುಜ – ಸಮಾನಾರ್ಥಕ ಪದ

ಪದ್ಯ ೫೬: ಧರ್ಮರಾಯನ ಸ್ಥಿತಿ ಹೇಗಿತ್ತು?

ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ (ಸಭಾ ಪರ್ವ, ೧೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಮುಖವು ಬಾಡಿತು, ಗಂಟಲು ಒಣಗಿತು, ದೃಷ್ಟಿಯು ಭೂಮಿಯ ಕಡೆಗೇ ಇತ್ತು. ಅವನ ಆಲೋಚನೆ ತಲೆಕೆಳಗಾಗಿತ್ತು. ಅವನ ಹಿರಿಮೆಯು ಮುರಿದು ಬಿದ್ದಿತ್ತು. ದುರ್ದೆಸೆಯು ಆವರಿಸಿತ್ತು. ಉತ್ಸಾಹವು ಜಾರಿಹೋಗಿತ್ತು. ಸತ್ಯಪಾಲನೆಯಲ್ಲಿಯೇ ನಟ್ಟ ಮನಸ್ಸಿನ ಪಾಪಕರ್ಮದ ಕುಣಿಕೆಗೆ ಸಿಕ್ಕು ಅತ್ತಿತ್ತ ಓಲಾಡುತ್ತಿದ್ದ ಅವನು ದುಃಖವನ್ನು ಹೊತ್ತು ಕುಳಿತಿದ್ದನು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಅರಸ: ರಾಜ; ವದನ: ಮುಖ; ತಾಳಿಗೆ: ಗಂಟಲು; ಒಣಗು: ಬಾಡು, ನೀರಿಲ್ಲದ ಸ್ಥಿತಿ; ನಟ್ಟ: ನಡು, ಒಳಹೊಕು; ದಿಟ್ಟಿ: ಲಕ್ಷ್ಯ, ಗಮನ, ಕಣ್ಣು; ಮಣಿ: ಬಾಗು; ನೆನಹು: ಯೋಚನೆ; ಮುರಿ: ಸೀಳು; ಮಹಿಮೆ: ಹಿರಿಮೆ; ತಾಗು: ಸೋಕು; ಅಪದೆಸೆ: ದುರ್ದಸೆ; ಜುಣುಗು: ನುಣುಚಿಕೊಳ್ಳುವಿಕೆ, ಜಾರಿಕೊಳು; ಉಬ್ಬು: ಹಿಗ್ಗು; ಸತ್ಯ: ನಿಜ, ದಿಟ; ಕೇವಣಿ: ಮೆಟ್ಟುವುದು; ಅರಿವು: ತಿಳಿವು; ವಿಕೃತ: ಮನಸ್ಸಿನ ವಿಕಾರ, ವಿಚಿತ್ರ; ಕರ್ಮ: ಕಾರ್ಯ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ಒಲೆ: ತೂಗಾಡು; ಅರಸ: ರಾಜ; ಹೊತ್ತು: ಬೆಂದು ಹೋಗು; ದುಗುಡ: ದುಃಖ;

ಪದವಿಂಗಡಣೆ:
ಹಣುಗಿತ್+ಅರಸನ +ವದನ +ತಾಳಿಗೆ
ಒಣಗಿತ್+ಅವನಿಗೆ +ನಟ್ಟ+ದಿಟ್ಟಿಯ
ಮಣಿದ +ನೆನಹಿನ +ಮುರಿದ+ ಮಹಿಮೆಯ +ತಾಗಿದ್+ಅಪದೆಸೆಯ
ಜುಣುಗಿದ್+ಉಬ್ಬಿನ +ಸತ್ಯದಲಿ+ ಕೇ
ವಣಿಸಿದ್+ಅರಿವಿನ +ವಿಕೃತ +ಕರ್ಮದ
ಕುಣಿಕೆಗ್+ಒಲೆದೊಲೆದ್+ಅರಸನಿದ್ದನು +ಹೊತ್ತ +ದುಗುಡದಲಿ

ಅಚ್ಚರಿ:
(೧) ಧರ್ಮರಾಯನ ಸ್ಥಿತಿ – ಕೇವಣಿಸಿದರಿವಿನ ವಿಕೃತ ಕರ್ಮದ ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ

ಪದ್ಯ ೧೬: ಶಕುನಿಯು ದುರ್ಯೋಧನನನ್ನು ಹೇಗೆ ಸಂತೈಸಿದನು?

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ಗಾಂಧಾರಿ ಸಂತೋಷಿಸಲಿ ಬಳಿಕೆಂದ (ಸಭಾ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನನ್ನು ಮೇಲಕೆತ್ತಿದನು. ಕೌರವನ ಕಣ್ಣುಗಳಲ್ಲಿ ಕಣ್ಣೀರಿನ ಹನಿಗಳು ಮುತ್ತಿನಂತೆ ಒಸರುತ್ತಿರುವುದನ್ನು ಕಂಡನು. ರಾಜಶ್ರೇಷ್ಠನೇ, ಮಗೂ ಬಾ ಕಂಡಾ ಬಾ ಎಂದವನನ್ನು ಅಪ್ಪಿಕೊಂಡು ಶತ್ರುಗಳನ್ನು ಕಿತ್ತುಬಿಸುಡುತ್ತೇನೆ, ಇದೋ ನಿನಗೆ ಇಂದ್ರಪ್ರಸ್ಥಪುರವನ್ನು ಕೊಟ್ಟುಬಿಟ್ಟೆ. ನಿನ್ನ ತಾಯಿ ಗಾಂಧಾರಿಯು ಇದರಿಂದ ಸಂತೋಷಿಸಲಿ ಎಂದುನು.

ಅರ್ಥ:
ಎತ್ತು: ಮೇಲಕ್ಕೆ ತರು; ಕಣ್ಣೆವೆ: ಕಣ್ಣಿನ ರೆಪ್ಪೆ; ಕಿರುವನಿ: ಚಿಕ್ಕ ಚಿಕ್ಕ ಹನಿ; ಮುತ್ತು: ಮೌಕ್ತಿಕ; ಕೇವಣಿ: ಕೀಲಿಸುವಿಕೆ; ನೃಪ: ರಾಜ; ಉತ್ತಮ: ಶ್ರೇಷ್ಠ; ಮನೆ: ಆಲಯ; ಬಾ: ಆಗಮಿಸು; ಕಂದ: ಮಗು; ಅಪ್ಪಿ: ತಬ್ಬಿಕೊ; ಕಿತ್ತು: ಹರಿದು, ಸೀಳು; ಬಿಸುಡು: ಬಿಸಾಡು; ಅಹಿತ: ವೈರಿ; ಪುರ: ಊರು; ಹೆತ್ತು: ಹುಟ್ಟು; ತಾಯಿ: ಮಾತೆ; ಸಂತೋಷ: ಸಂತಸ; ಬಳಿಕ: ಹತ್ತಿರ;

ಪದವಿಂಗಡಣೆ:
ಎತ್ತಿದನು+ ಕಣ್ಣೆವೆಯ +ಕಿರುವನಿ
ಮುತ್ತುಗಳ +ಕೇವಣಿಯ +ಶಕುನಿ +ನೃ
ಪೋತ್ತಮನೆ+ ಬಾ +ಕಂದ +ಬಾಯೆಂದಪ್ಪಿ+ ಕೌರವನ
ಕಿತ್ತು+ ಬಿಸುಡುವೆನ್+ಅಹಿತರನು +ನಿನಗ್
ಇತ್ತೆನ್+ಇಂದ್ರಪ್ರಸ್ಥ+ಪುರವನು
ಹೆತ್ತ+ ತಾಯ್+ಗಾಂಧಾರಿ +ಸಂತೋಷಿಸಲಿ +ಬಳಿಕೆಂದ

ಅಚ್ಚರಿ:
(೧) ದುರ್ಯೋಧನನ ಕಣ್ಣೀರಿನ ವರ್ಣನೆ – ಕಣ್ಣೆವೆಯ ಕಿರುವನಿ ಮುತ್ತುಗಳ ಕೇವಣಿಯ
(೨) ಶಕುನಿಯ ಪ್ರೀತಿಯ ತೋರಿಕೆ – ನೃಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
(೩) ಶಕುನಿಯ ಸಂತೈಸುವ ಬಗೆ – ಕಿತ್ತು ಬಿಸುಡುವೆನಹಿತರನು ನಿನಗಿತ್ತೆನಿಂದ್ರಪ್ರಸ್ಥಪುರವನು