ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಯಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಧರ್ಮ ತಾಗಿದನರಸ ಕೇಳೆಂದ (ಭೀಷ್ಮ ಪರ್ವ, ೮ ಸಂಧಿ, ೨೬ ಪದ್ಯ)
ತಾತ್ಪರ್ಯ:
ಅಭಿಮನ್ಯುವು ಭೀಷ್ಮನೊಡನೆ ದುಶ್ಯಾಸನನು ಅರ್ಜುನನೊಡನೆ, ಘಟೋತ್ಕಚನು ಭಗದತ್ತನೊಡನೆ, ಯಾದವ ಬಲದೊಡನೆ ಸಹದೇವ, ವಿರಾಟನೊಡನೆ ಸುಶರ್ಮರು ಯುದ್ಧವನ್ನು ಮಾಡಿದರು.
ಅರ್ಥ:
ಸೆಣಸು: ಹೋರಾಡು; ಮಿಗಲು: ಹೆಚ್ಚು; ಕೆಣಕು: ರೇಗಿಸು, ಪ್ರಚೋದಿಸು; ತರುಬು: ತಡೆ, ನಿಲ್ಲಿಸು; ಕಣೆ: ಬಾಣ; ಕೆದರು: ಹರಡು; ಬಲ: ಶಕ್ತಿ; ನಾರಾಯಣಬಲ: ಯಾದವರ ಬಲದೊಡನೆ; ಬೆರಸು: ಜೋಡಿಸು; ಹೋಣಕೆ: ಯುದ್ಧ, ಕಾಳಗ; ತಾಗು: ಎದುರಿಸು; ಅರಸ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಸೆಣಸು +ಮಿಗಲ್+ಅಭಿಮನ್ಯು +ಭೀಷ್ಮನ
ಕೆಣಕಿದನು +ದುಶ್ಯಾಸನನು +ಫಲು
ಗುಣನ +ತರುಬಿದನಾ+ ಘಟೋತ್ಕಚನೊಡನೆ +ಭಗದತ್ತ
ಕಣೆಗೆದರಿ +ಸಹದೇವ+ ನಾರಾ
ಯಣ+ಬಲವ +ಬೆರಸಿದನು +ಮತ್ಸ್ಯನ
ಹೊಣಕೆಯಿಂದ +ಸುಶರ್ಮ +ತಾಗಿದನ್+ಅರಸ +ಕೇಳೆಂದ
ಅಚ್ಚರಿ:
(೧) ಹೋರಾಟವನ್ನು ವಿವರಿಸಲು ಬಳಸಿದ ಪದಗಳು – ಸೆಣಸು, ಕೆಣಕು, ತರುಬು, ಬೆರಸು