ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ
ದುಗುಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ (ಗದಾ ಪರ್ವ, ೧೧ ಸಂಧಿ, ೪೦ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು ಭೀಮನ ವಿಗ್ರಹವನ್ನು ಅಪ್ಪಿ ಅದು ಪುಡಿಯಾದುದನ್ನು ತಿಳಿದು, ಮಗನೇ ನನ್ನ ಅಪ್ಪುಗೆಯಿಂದ ನಿನಗೆ ನೋವಾಯಿತೇ? ಅಯ್ಯೋ ನಾನು ಕೆಟ್ಟೆ ಎಂದು ಮರುಗಲು, ಶ್ರೀಕೃಷ್ಣನು ದುಃಖಿಸಬೇಡ, ನಿಮ್ಮ ಮಗನು ಉಳಿದಿದ್ದಾನೆ, ನಿನ್ನ ವೈರಿ ಹೋಯಿತು ಎಂದು ನಗುತ್ತಾ ಹೇಳಿದನು.
ಅರ್ಥ:
ಮಗ: ಪುತ್ರ; ನೊಂದು: ನೋವುಂಡು; ನೋವು: ಬೇನೆ, ಅಳಲು; ಅಕಟ: ಅಯ್ಯೋ; ಒಗುಮಿಗೆ: ಹೆಚ್ಚಾಗಿ, ಅಧಿಕವಾಗಿ; ಶೋಕ: ದುಃಖ; ನೆರೆ: ಗುಂಪು; ಮರುಗು: ತಳಮಳ, ಸಂಕಟ; ದುಗುಡ: ದುಃಖ; ಬೇಡ: ತ್ಯಜಿಸು; ಉಳಿದು: ಜೀವಿಸು; ಅಧಿಕ: ಹೆಚ್ಚು; ರೋಷ: ಕೋಪ; ಹಗರಣ: ಗೊಂದಲ, ನಟನೆ; ಹಗೆ: ವೈರಿ; ಹೋಯಿತು: ತ್ಯಜಿಸು, ತೆರಳು; ನಗು: ಹರ್ಷ; ಮುರವೈರಿ: ಕೃಷ್ಣ;
ಪದವಿಂಗಡಣೆ:
ಮಗನೆ +ಹಾ +ಹಾ +ಭೀಮ +ನೊಂದೈ
ಮಗನೆ+ ಕೆಟ್ಟೆನು+ ಕೆಟ್ಟೆನ್+ಅಕಟೆಂದ್
ಒಗುಮಿಗೆಯ +ಶೋಕದಲಿ +ನೆರೆ +ಮರುಗಿದನು +ಧೃತರಾಷ್ಟ್ರ
ದುಗುಡ +ಬೇಡೊಮ್ಮಿಂಗೆ +ನಿಮ್ಮಯ
ಮಗನ್+ಉಳಿದ +ನಿಮ್ಮಧಿಕ+ರೋಷದ
ಹಗರಣದ +ಹಗೆ +ಹೋಯಿತೆಂದನು +ನಗುತ +ಮುರವೈರಿ
ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಗರಣದ ಹಗೆ ಹೋಯಿತೆಂದನು
(೨) ಮಗನೆ – ೧, ೨ ಸಾಲಿನ ಮೊದಲ ಪದ