ಪದ್ಯ ೭೩: ಧೃತರಾಷ್ಟ್ರನು ಯಾರ ಅಭಿಮತವನ್ನು ಸಮರ್ಥಿಸಿದನು?

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತಭವನದಲಿ
ಕೂಡಿಕೊಂಡು ಕುಲಪಘಾತದ
ಕೇಡಿಗರ ಕಲ್ಪನೆಯ ಕಲುಪದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ (ಸಭಾ ಪರ್ವ, ೧೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಆಜ್ಞೆಯ ಮೇರೆಗೆ ರತ್ನಾಭರಣಗಳಿಂದ ಕಂಗೊಳಿಸುವ ಉತ್ತಮ ಸಭಾಭವನವು ನಿರ್ಮಾಣವಾಯಿತು, ಇದು ಇಂದ್ರನ ಸುಧರ್ಮವನ್ನು ಅಣುಕಿಸುವಂತಿತ್ತು. ಧೃತರಾಷ್ಟ್ರನು ಏಕಾಂತಭವನದಲ್ಲಿ ಕುಳಿತು ವಿದುರನಿಗೆ ಹೇಳಿಕಳುಹಿಸಿದನು. ಕುಲನಾಶವನ್ನೇ ಮಾಡಲು ನಿರ್ಧರಿಸಿದ ಕೇಡಿಗರಾದ ಕೌರವರ ಸಂಕಲ್ಪವನ್ನೇ ಬೆಂಬಲಿಸಿದನು.

ಅರ್ಥ:
ಮಾಡು: ನಿರ್ಮಿಸು; ಅಗ್ಗ: ಶ್ರೇಷ್ಠ; ಸಭೆ: ಓಲಗ; ಏಡಿಸು: ಅವಹೇಳನ ಮಾಡು, ನಿಂದಿಸು; ಚೆಲುವು: ಸುಂದರ; ಪುರ: ಊರು; ರೂಢಿಸು: ನೆಲಸು, ಇರು; ಬಳಿಕ: ನಂತರ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ); ಏಕಾಂತ: ಒಬ್ಬನೆ; ಭವನ: ಆಲಯ; ಕೂಡಿ: ಸೇರು; ಕುಲ: ವಂಶ; ಕುಲಪ: ಮನೆಯ ಯಜಮಾನ; ಘಾತ: ಹೊಡೆತ, ಪೆಟ್ಟು; ತೊಂದರೆ; ಕೇಡಿಗ: ದುಷ್ಟ; ಕಲ್ಪನೆ: ಯೋಚನೆ; ನಿಶ್ಚೈಸು: ನಿರ್ಧರಿಸು; ಅರುಹು: ತಿಳಿಸು; ಕರೆಸು: ಬರಹೇಳು;

ಪದವಿಂಗಡಣೆ:
ಮಾಡಿತ್+ಅಗ್ಗದ +ಸಭೆ +ಸುಧರ್ಮೆಯನ್
ಏಡಿಸುವ +ಚೆಲುವಿನಲಿ +ಪುರದಲಿ
ರೂಢಿಸಿತು +ಬಳಿಕ್+ಅಂಧ+ನೃಪನ್+ಏಕಾಂತ+ಭವನದಲಿ
ಕೂಡಿಕೊಂಡು +ಕುಲಪ+ಘಾತದ
ಕೇಡಿಗರ+ ಕಲ್ಪನೆಯ+ ಕಲುಪದ
ಜೋಡಿಯನೆ+ ನಿಶ್ಚೈಸಿ +ವಿದುರಂಗ್+ಅರುಹಿದನು +ಕರೆಸಿ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೂಡಿಕೊಂಡು ಕುಲಪಘಾತದ ಕೇಡಿಗರ ಕಲ್ಪನೆಯ ಕಲುಪದ