ಪದ್ಯ ೪೩: ದುರ್ಯೋಧನನು ಎಲ್ಲಿ ಮಲಗಿದನು?

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ (ಗದಾ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸೂರ್ಯನೇ ಮೊದಲಾದ ಸಮಸ್ತ ದೇವತೆಗಳಿಗೂ ನಮಸ್ಕರಿಸಿ, ಹೃದಯದಲ್ಲಿ ವರುಣನನ್ನು ಧ್ಯಾನಿಸುತ್ತಾ, ಸುತ್ತನಾಲ್ಕು ದಿಕ್ಕುಗಳನ್ನೂ ನೋಡಿ ಯಾರಿಗೂ ಕಾಣಿಸುತ್ತಿಲ್ಲವೆಂಬುದನ್ನು ನಿರ್ಧರಿಸಿಕೊಂಡು, ದುಷ್ಟಬುದ್ಧಿಯಾದ ಕೌರವನು ಪಾದ, ಮೊಣಕಾಲು, ಸೊಂಟ, ಹೃದಯ ಮುಖ ತಲೆಗಳ ಪರ್ಯಂತ ನೀರಲ್ಲಿ ಮುಳುಗಿ ಕೊಳದ ಮಧ್ಯದಲ್ಲಿ ಮಲಗಿದನು.

ಅರ್ಥ:
ದ್ಯುಮಣಿ: ಸೂರ್ಯ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಸುರರು: ದೇವತೆ; ನಮಿಸು: ವಂದಿಸು; ವರುಣ: ನೀರಿನ ಅಧಿದೇವತೆ; ಧ್ಯಾನ: ಮನನ; ಹೃತ್ಕಮಲ: ಹೃದಯ ಕಮಲ; ನೆಲೆಗೊಳಿಸು: ಸ್ಥಾಪಿಸು; ದೆಸೆ: ದಿಕ್ಕು; ಕುಮತಿ: ಕೆಟ್ಟ ಬುದ್ಧಿಯುಳ್ಳವ; ಇಳಿ: ಜಾರು; ಜಾನು: ಮಂಡಿ, ಮೊಳಕಾಲು; ಕಟಿ: ಸೊಂಟ, ನಡು; ಮುಖ: ಆನನ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಪರಿಯಂತ: ವರೆಗೆ, ತನಕ; ಜಲ: ನೀರು; ಕೊಳ: ಸರಸಿ; ಮಧ್ಯ: ನಡುವೆ; ಅರಸ: ರಾಜ; ಪವಡಿಸು: ಮಲಗು; ಅಮರಿ: ನೆಲತಂಗಡಿ;

ಪದವಿಂಗಡಣೆ:
ದ್ಯುಮಣಿ +ಮೊದಲಾದ್+ಅಖಿಳ+ ಸುರರಿಗೆ
ನಮಿಸಿ+ ವರುಣ+ಧ್ಯಾನವನು +ಹೃ
ತ್ಕಮಲದಲಿ +ನೆಲೆಗೊಳಿಸಿ+ ನಾಲುಕು +ದೆಸೆಯನ್+ಆರೈದು
ಕುಮತಿ+ಇಳಿದನು +ಜಾನು +ಕಟಿ +ಹೃ
ತ್ಕಮಲಗಳ +ಮುಖ +ಮೂರ್ಧ +ಪರಿಯಂತ್
ಅಮರಿದುದು +ಜಲ +ಕೊಳನ +ಮಧ್ಯದಲ್+ಅರಸ +ಪವಡಿಸಿದ

ಅಚ್ಚರಿ:
(೧) ಹೃತ್ಕಮಲ – ೩, ೫ ಸಾಲಿನ ಮೊದಲ ಪದ
(೨) ದುರ್ಯೋಧನನನ್ನು ಕುಮತಿ, ಅರಸ ಎಂದು ಕರೆದಿರುವುದು

ಪದ್ಯ ೫೦: ಭೀಷ್ಮರು ಶಿಶುಪಾಲನಿಗೆ ಹೇಗೆ ಉತ್ತರಿಸಿದರು?

ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳ ಚಿತ್ತ
ಸ್ಥಿಮಿತ ಭೂಪರ ಬಗೆವೆನೇ ತಾನೆಂದನಾ ಭೀಷ್ಮ (ಸಭಾ ಪರ್ವ, ೧೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತುಗಳನ್ನು ಕೇಳಿದ ಭೀಷ್ಮರು, ಎಲವೋ ಶಿಶುಪಾಲ, ದುರ್ಬುದ್ಧಿಯುಳ್ಳವನೇ, ಹೆಬ್ಬುಲಿಯ ವನದಲ್ಲಿ ಹಂಸ ಪಕ್ಷಿಗಳು ಆನಂದವಾಗಿ ವಿಹರಿಸಬಹುದೇ? ಮಾಯೆಯಿಂದ ಭ್ರಾಂತಿಗೊಳಗಾದವರ ಬಳಿ ಯೋಗಿಯು ಜೀವನ್ಮುಕ್ತಿಯನ್ನು ಬೇಡುವನೇ? ಯುದ್ಧದಲ್ಲಿ ವೀರರೆಂಬ ದರ್ಪದ ಆವೇಶವು ತಲೆಗೇರಿ, ಚಂಚಲವಾದ ಬುದ್ಧಿಯುಳ್ಳ ಚಪಲಚಿತ್ತರಾದ ರಾಜರನ್ನು ನಾನು ಲೆಕ್ಕಿಸುವೆನೇ? ಎಂದು ಭೀಷ್ಮರು ಕಟುವಾಗಿ ಉತ್ತರಿಸಿದರು.

ಅರ್ಥ:
ಕುಮತಿ: ದುಷ್ಟಬುದ್ಧಿ; ಬೊಬ್ಬುಲಿ: ಹೆಬ್ಬುಲಿ, ವ್ಯಾಘ್ರ; ಬನ: ಕಾಡು; ರಮಿಸು: ಆನಂದಿಸು; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ; ಮಾಯ: ಗಾರುಡಿ, ಇಂದ್ರಜಾಲ; ಭ್ರಮಿತ: ಭ್ರಾಂತಿ; ಯಾಚಿಸು: ಕೇಳು, ಬೇಡು; ವರ: ಶ್ರೇಷ್ಠ; ಯೋಗಿ: ಮುನಿ; ಪದ: ಮೋಕ್ಷ; ನಿಜ: ದಿಟ; ಸಮರ: ಯುದ್ಧ; ಪಟುಭಟ: ಪರಾಕ್ರಮಿ; ದರ್ಪ: ಅಹಂಕಾರ; ಪಿತ್ತ: ಕೋಪ, ಸಿಟ್ಟು; ಭ್ರಮ: ಭ್ರಾಂತು; ವಿಸಂಸ್ಥುಲ: ಅತಿ ಚಂಚಲವಾದ; ಚಪಳ: ಚಂಚಲ ಸ್ವಭಾವದವನು; ಚಿತ್ತ: ಬುದ್ಧಿ; ಸ್ಥಿಮಿತ: ಸ್ಥಿರ; ಭೂಪ: ರಾಜ; ಬಗೆ:ಆಲೋಚನೆ;

ಪದವಿಂಗಡಣೆ:
ಕುಮತಿ +ಕೇಳ್ +ಬೊಬ್ಬುಲಿಯ +ಬನದಲಿ
ರಮಿಸುವುದೆ +ಕಳಹಂಸ +ಮಾಯಾ
ಭ್ರಮಿತರಲಿ+ ಯಾಚಿಸುವನೇ +ವರಯೋಗಿ +ನಿಜಪದವ
ಸಮರ +ಪಟುಭಟ+ ದರ್ಪ+ಪಿತ್ತ
ಭ್ರಮ +ವಿಸಂಸ್ಥುಲ+ ಚಪಳ +ಚಿತ್ತ
ಸ್ಥಿಮಿತ +ಭೂಪರ+ ಬಗೆವೆನೇ +ತಾನ್+ಎಂದನಾ +ಭೀಷ್ಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೊಬ್ಬುಲಿಯ ಬನದಲಿ ರಮಿಸುವುದೆ ಕಳಹಂಸ, ಮಾಯಾ ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
(೨) ಶಿಶುಪಾಲನನ್ನು ಬಯ್ಯುವ ಪರಿ – ಕುಮತಿ

ಪದ್ಯ ೧೧: ಭೀಷ್ಮನು ಶಿಶುಪಾಲನನ್ನು ಹೇಗೆ ಬಯ್ದನು?

ಭ್ರಮೆಯ ಭುಜಗನೆ ರಜ್ಜುವೋ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೋ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಗ್ಗವು ಭ್ರಮೆಯಿಂದ ಹಾವಾಗಿ ಕಂಡಮಾತ್ರಕ್ಕೆ ಅದು ಚಲಿಸುತ್ತದೆಯೇ? ಕಲ್ಪಿತ ಶರೀರವು ಆತ್ಮವೋ? ಅನುಭವಕ್ಕೆ ಗಮ್ಯವಾದ ಶುದ್ಧ ಅರಿವು ಆತ್ಮವೋ? ಜೀವಾತ್ಮ ಪರಮಾತ್ಮ ಎಂಬುವರಲ್ಲಿ ಶ್ರೀಕೃಷ್ಣನೇ ಸತ್ಯವೋ? ಬದಲಾಗುವ ಈ ಮಿಥ್ಯ ಪ್ರಪಂಚವೇ ನಿಜವೋ? ಶಿಶುಪಾಲ, ದುರ್ಬುದ್ಧಿಯವನೇ, ಮಂಗನಿಗೇಕೆ ಮಾಣಿಕ್ಯ ಎಂದು ಭೀಷ್ಮನು ಪ್ರಶ್ನಿಸಿದನು.

ಅರ್ಥ:
ಭ್ರಮೆ: ಭ್ರಾಂತಿ, ಹುಚ್ಚು, ಉನ್ಮಾದ; ಭುಜಗ: ಹಾವು; ರಜ್ಜು: ಹಗ್ಗ, ಪಾಶ; ಜಂಗಮ: ಚಲನೆಯುಳ್ಳದ್ದು; ಕಲ್ಪಿತ: ಸಂಕಲ್ಪ, ಊಹಿಸಿದ; ಪುರುಷ: ಮನುಷ್ಯ, ಮಾನವ; ವಿಮಲ: ನಿರ್ಮಲ; ಸಂವಿದ್ರೂಪ: ಪರಮಜ್ಞಾನಿ, ಸರ್ವಜ್ಞ; ಜೀವ: ಉಸಿರು; ಪರಮ: ಶ್ರೇಷ್ಠವಾದುದು, ಉತ್ಕೃಷ್ಟವಾದುದು; ಕಮಲನಾಭ: ವಿಷ್ಣು; ನಿಜ: ದಿಟ; ವಿಶ್ವ: ಜಗತ್ತು; ಕ್ರಮ: ನಡೆಯುವಿಕೆ, ಅಡಿ; ಭೂಪತಿ: ರಾಜ; ಕುಮತಿ: ದುರ್ಬುದ್ಧಿ; ಕಪಿ: ಮಂಗ; ಕಮಲ: ತಾವರೆ; ಮಾಣಿಕ: ಬೆಲೆಬಾಳುವ ರತ್ನ;

ಪದವಿಂಗಡಣೆ:
ಭ್ರಮೆಯ+ ಭುಜಗನೆ +ರಜ್ಜುವೋ +ಜಂ
ಗಮವೊ +ಕಲ್ಪಿತ +ಪುರುಷನ್+ಆತ್ಮನೊ
ವಿಮಲ +ಸಂವಿದ್ರೂಪನ್+ಆತ್ಮನೊ+ ಜೀವ +ಪರಮನಲಿ
ಕಮಲನಾಭನೆ+ ನಿಜವೊ+ ವಿಶ್ವ
ಕ್ರಮವೆ+ ನಿಜವೋ +ಚೈದ್ಯ +ಭೂಪತಿ
ಕುಮತಿ +ಕಪಿಗೇಕ್+ಅಮಲ +ಮಾಣಿಕವೆಂದನಾ +ಭೀಷ್ಮ

ಅಚ್ಚರಿ:
(೧) ಗಾದೆಯ ಮಾತಿನ ಬಳಕೆ – ಕುಮತಿ ಕಪಿಗೇಕಮಲ ಮಾಣಿಕ
(೨) ಉಪಮಾನದ ಪ್ರಯೋಗ – ಭ್ರಮೆಯ ಭುಜಗನೆ ರಜ್ಜುವೋ ಜಂಗಮವೊ

ಪದ್ಯ ೪೧: ಸಹದೇವನು ಮುಕುಂದನ ಗುಣಗಾನ ಹೇಗೆ ಮಾಡಿದ?

ಧರಣಿಪತಿಯೇ ಸಕಲ ಧರ್ಮದ
ಪರಮ ಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ (ಸಭಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಹದೇವನು ತನ್ನ ಮಾತನ್ನು ಮುಂದುವರಿಸುತ್ತಾ, ಯುಧಿಷ್ಠಿರನು ಸಕಲ ಧರ್ಮದ ಎಲ್ಲೆಯನ್ನು ಬಲ್ಲವನು, ಶ್ರೀಕೃಷ್ಣನು ಮಾನ್ಯರಿಗೆ ಮಾನ್ಯನು, ಪೂಜ್ಯಗೊಳ್ಳುವವರಲ್ಲಿ ಅಗ್ರಗಣ್ಯನು, ದೇವರಲ್ಲಿ ಆದಿ ದೇವನು, ಗಂಗಾಪುತ್ರ ಭೀಷ್ಮರು ಸಾಕ್ಷಾತ್ ಪರಮಶಿವ, ಇಂತಹ ಯಜ್ಞ ಲೋಕದಲ್ಲಿ ಎಂದು ಆಗಿರಲಿಲ್ಲ ಇದು ಲೋಕಕಲ್ಯಾಣಕ್ಕಾಗಿದೆ. ಜರಾಸಂಧ, ನಿನ್ನಂತಹ ದುರ್ಬುದ್ಧಿಯುಳ್ಳವರಿಗೆ ಇದು ತಿಳಿಯಲಾಗುವುದಿಲ್ಲ ಎಂದು ಹೇಳಿದನು.

ಅರ್ಥ:
ಧರಣಿ: ಭೂಮಿ; ಧರಣೀಪತಿ: ರಾಜ; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು, ಆಚಾರ; ಪರಮ: ಶ್ರೇಷ್ಠ; ಸೀಮೆ: ಎಲ್ಲೆ; ಮಾನ್ಯ: ಮನ್ನಣೆ, ಪೂಜ್ಯ; ಗುರು: ಆಚಾರ್ಯ; ವಂದ್ಯ: ಪೂಜನೀಯ; ದೈವ: ಭಗವಂತ; ಅಧಿದೈವ: ಶ್ರೇಷ್ಠವಾದ, ಮುಖ್ಯವಾದ ದೈವ; ಸುರನದಿ: ಗಂಗೆ; ನಂದನ: ಮಗ; ಸಾಕ್ಷಾತ್: ಪ್ರತ್ಯಕ್ಷವಾಗಿ; ಪರಮಶಿವ: ಶಂಕರ; ಯಜ್ಞ: ಯಾಗ; ಲೋಕ: ಜಗತ್ತು; ಲೋಕೋತ್ತರ: ಜಗತ್ತಿನ್ನು ಅಭಿವೃದ್ಧಿಯತ್ತ ಒಯ್ಯುವ, ಒಳಿತಾದ; ಉತ್ತರ: ಅಭಿವೃದ್ಧಿ, ಉತ್ತಮ; ಮಖ: ಯಜ್ಞ; ಕುಮತಿ: ದುಷ್ಟಬುದ್ಧಿ; ಸಾಧ್ಯ: ಲಭ್ಯವಾಗುವ;

ಪದವಿಂಗಡಣೆ:
ಧರಣಿಪತಿಯೇ+ ಸಕಲ+ ಧರ್ಮದ
ಪರಮ +ಸೀಮೆ +ಮುಕುಂದನೇ+ ಮಾ
ನ್ಯರಿಗೆ+ ಗುರು +ವಂದ್ಯರಿಗೆ+ ವಂದ್ಯನು +ದೈವಕ್+ಅಧಿದೈವ
ಸುರನದೀನಂದನನು+ ಸಾಕ್ಷಾತ್
ಪರಮಶಿವನ್+ಈ+ ಯಜ್ಞ+ಲೋಕೋ
ತ್ತರದ+ ಮಖವಿದು+ ನಿನ್ನ +ಕುಮತಿಗೆ+ ಸಾಧ್ಯವಲ್ಲೆಂದ

ಅಚ್ಚರಿ:
(೧) ಯಜ್ಞ, ಮಖ – ಸಮನಾರ್ಥಕ ಪದ
(೨) ಕೃಷ್ಣನ ಗುಣಗಾನ – ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ