ಪದ್ಯ ೩: ಅಭಿಮನ್ಯುವಿನ ಮಕ್ಕಳಾಟ ಹೇಗಿತ್ತು?

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ (ದ್ರೋಣ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ದಾಳಿಯಿಟ್ಟ ರಾವುತರು ತೆಕ್ಕೆ ತೆಕ್ಕೆಯಾಗಿ ಸತ್ತುಬಿದ್ದರು. ಯುದ್ಧಕ್ಕೆ ಬಂದ ಆನೆಗಳು ಕಾಣಿಸಲೇ ಇಲ್ಲ. ವೇಗವಾಗಿ ಬಂದ ರಥಗಳನ್ನು ಹೊಡೆದೋಡಿಸಿದನು. ಬಾಲಕ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.

ಅರ್ಥ:
ಮಿಕ್ಕು: ಉಳಿದ; ನೂಕು: ತಳ್ಳು; ಕುದುರೆ: ಅಶ್ವ; ಕುದುರೆಕಾರ: ರಾವುತ; ತೆಕ್ಕೆ: ಸುತ್ತಿಕೊಂಡಿರುವಿಕೆ; ಕೆಡೆ: ಬೀಳು, ಕುಸಿ; ಸಂದಣಿಸು: ಗುಂಪುಗೂಡು; ಆನೆ: ಗಜ; ಕಾಣು: ತೋರು; ಅಳವಿ: ಯುದ್ಧ; ಹೊಕ್ಕು: ಸೇರು; ಹರಿಸು: ಚಲಿಸು; ರಥ: ಬಂಡಿ; ಪದಾತಿ: ಕಾಲಾಳು; ಒಕ್ಕಲಿಕ್ಕು: ಬಡಿ, ಹೊಡೆ; ಅಮಮ: ಆಶ್ಚರ್ಯ ಸೂಚಕ ಪದ; ಮಗು: ಚಿಕ್ಕವ, ಕುಮಾರ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಮಾರಿ: ಕ್ಷುದ್ರದೇವತೆ; ವೈರಿ: ಶತ್ರು; ರಾಯ: ರಾಜ;

ಪದವಿಂಗಡಣೆ:
ಮಿಕ್ಕು +ನೂಕುವ +ಕುದುರೆಕಾರರು
ತೆಕ್ಕೆ+ಕೆಡೆದರು +ಸಂದಣಿಸಿ+ ಕೈ
ಯಿಕ್ಕಿದ್+ಆನೆಯನೇನನ್+ಎಂಬೆನು +ಕಾಣೆನ್+ಅಳವಿಯಲಿ
ಹೊಕ್ಕು +ಹರಿಸುವ +ರಥ +ಪದಾತಿಯನ್
ಒಕ್ಕಲಿಕ್ಕಿದನ್+ಅಮಮ +ಮಗುವಿನ
ಮಕ್ಕಳಾಟಿಕೆ +ಮಾರಿಯಾಯಿತು +ವೈರಿ+ರಾಯರಿಗೆ

ಅಚ್ಚರಿ:
(೧) ಅಭಿಮನ್ಯುವಿನ ಸಾಹಸ – ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ