ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯರಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವೆನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ (ದ್ರೋಣ ಪರ್ವ, ೨ ಸಂಧಿ, ೩೬ ಪದ್ಯ)
ತಾತ್ಪರ್ಯ:
ಪಾಂಡವ ಭಟರು ಕುಶಲರು, ಸಮರ್ಥರು, ಶ್ರೇಷ್ಠರು. ವಂಚನೆಯಿಂದ ಯುಧಿಷ್ಠಿರನು ಈ ಕೆಲಸಕ್ಕೆ ಬಾರದವರನ್ನು ಬಲಿಕೊಡುತ್ತಿದ್ದಾನೆ. ಇಂಥವರಿಂದ ಮೋಸದಿಂದ ತಪ್ಪಿಸಿಕೊಳ್ಳುವುದಿಲ್ಲ. ಹುಲ್ಲುತಿನ್ನುವ ಇವರನ್ನು ಬಿಟ್ಟರೆ ನನ್ನಿಂದ ಧರ್ಮಜನು ತಪ್ಪಿಸಿಕೊಂಡನೇ? ಶಿವನೇ ಅಡ್ಡಬಂದರೂ ಅವನನ್ನು ಹಿಡಿಯುತ್ತೇನೆ ಎಂದು ದ್ರೋಣನು ಬಾಣ ಪ್ರಯೋಗ ಮಾಡಿದನು.
ಅರ್ಥ:
ಪಟು: ಸಮರ್ಥನಾದವನು, ಕುಶಲನಾದವನು; ಮಝ: ಭಲೇ; ಪೂತು: ಕೊಂಡಾಟದ ಮಾತು; ಭಟ: ಸೈನಿಕ; ಖರೆ: ನಿಜ, ಸತ್ಯ; ಅಟಮಟಿಸು: ಮೋಸ ಮಾಡು; ಚುಕ್ಕಿಗಿಕ್ಕು: ಗುರಿಗೆ ಹೊಡೆ; ಲೆಕ್ಕ: ಎಣಿಕೆ; ಲೇಸು: ಒಳ್ಳಿತು; ಕುಟಿಲ: ಮೋಸ; ಗೆಲುವು: ಜಯ; ಹುಲು: ಕ್ಷುಲ್ಲಕ; ಇವದಿರ: ಇಷ್ಟುಜನ; ಹೊಯ್ದು: ಹೊಡೆ; ನಿಟಿಲ: ಹಣೆ, ಫಾಲ; ಲೋಚನ: ಕಣ್ಣು; ನಿಟಿಲಲೋಚನ: ಶಿವ; ಹಾಯಿ: ಮೇಲೆಬೀಳು; ಹಿಡಿ: ಬಂಧಿಸು; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಪಟುಗಳೋ +ಮಝ +ಪೂತು +ಪಾಂಡವ
ಭಟರು +ಖರೆಯರಲ್+ಆ+ ಯುಧಿಷ್ಠಿರನ್
ಅಟಮಟಿಸಿ+ ತಾ +ಚುಕ್ಕಿಗಿಕ್ಕುವ +ಲೆಕ್ಕ +ಲೇಸಾಯ್ತು
ಕುಟಿಲತನದಲಿ +ಗೆಲುವೆನೇ +ಹುಲು
ಕುಟಿಗರ್+ಇವದಿರ +ಹೊಯ್ದು +ತನ್ನನು
ನಿಟಿಲಲೋಚನನ್+ಅಡ್ಡ+ ಹಾಯ್ದರೆ +ಹಿಡಿವೆನ್+ಎನುತ್+ಎಚ್ಚ
ಅಚ್ಚರಿ:
(೧) ಪಾಂಡವರನ್ನು ಹೊಗಳುವ ಪರಿ – ಪಟುಗಳೋ ಮಝ ಪೂತು ಪಾಂಡವಭಟರು