ಪದ್ಯ ೫೧: ಭೀಮನು ಯಾವುದರಲ್ಲಿ ಬಂಧಿತನಾಗಿದ್ದನು?

ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿದೆನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಹೆಂಡತಿಯ ಮಾತು ಕೇಳಿ ಭೀಮನು ಅಣ್ಣನಾಜ್ಞೆಯನ್ನು ಮೀರಿದ ಎಂದು ಕುಜನರು ನಾಳೆ ಮಾತನಾದುತ್ತಾರೆ, ಅಣ್ಣನ ಬಳಿಗೆ ಹೋಗಿ ದೂರು ಕೊಡು, ಇದು ನಾವು ನುಂಗಲಾಗದ ಕೆಂಡ. ಅಣ್ಣನಾಜ್ಞೆಯೆಂಬ ಹಗ್ಗವು ನನ್ನ ಕಾಲನ್ನು ಕಟ್ಟಿಹಾಕಿದ್ದು ನಾನದರಲ್ಲಿ ಬಿದ್ದಿದ್ದೇನೆ ಎಂದು ಭೀಮನು ಹೇಳಿದನು.

ಅರ್ಥ:
ಹೆಣ್ಣು: ಸ್ತ್ರೀ; ಹರಿಬ: ಕೆಲಸ, ಕಾರ್ಯ; ಆಜ್ಞೆ: ಅಪ್ಪಣೆ; ಮೀರು: ದಾಟು; ಅಣ್ಣ: ಹಿರಿಯ ಸಹೋದರ; ದೂರು: ಮೊರೆ, ಅಹವಾಲು; ಉರಿ: ಜ್ವಾಲೆ, ಸಂಕಟ; ಉಣ್ಣು: ಊಟಮಾದು; ರಾಯ: ರಾಜ; ಕಣ್ಣಿ: ಹಗ್ಗ, ರಜ್ಜು; ಬಿಗಿ: ಬಂಧಿಸು; ಕೆಡೆ: ಬೀಳು, ಕುಸಿ; ಕಾಂತೆ: ಪ್ರಿಯತಮೆ; ಕೇಳು: ಆಲಿಸು; ಚಿಣ್ಣ: ಎಳೆಯವನು;

ಪದವಿಂಗಡಣೆ:
ಹೆಣ್ಣ +ಹರಿಬಕ್ಕೋಸುಗವೆ+ ತ
ಮ್ಮಣ್ಣನ್+ಆಜ್ಞೆಯ +ಮೀರಿ +ಕುಂತಿಯ
ಚಿಣ್ಣ+ ಬದುಕಿದೆನೆಂದು +ನುಡಿವರು+ ಕುಜನರಾದವರು
ಅಣ್ಣನವರಿಗೆ+ ದೂರುವುದು +ನಾ
ವುಣ್ಣದ್+ಉರಿಯಿವು +ರಾಯನಾಜ್ಞೆಯ
ಕಣ್ಣಿಯಲಿ +ಬಿಗಿವಡೆದು+ ಕೆಡೆದೆವು +ಕಾಂತೆ +ಕೇಳೆಂದ

ಅಚ್ಚರಿ:
(೧) ಕುಜನರ ಮಾತು – ಹೆಣ್ಣ ಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದ

ಪದ್ಯ ೨೭: ಧರ್ಮಜನು ಅರ್ಜುನನಿಗೆ ಯಾವ ಪ್ರಶ್ನೆಗಳನ್ನು ಕೇಳಿದನು?

ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರಸಮಾಧಿ ಶಿವಪದ
ರಜವ ಬೆರಸಿತೆ ಬಗೆಯಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ (ಅರಣ್ಯ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಜನು ಅರ್ಜುನನ್ನು ವಿಚಾರಿಸುತ್ತಾ, ಅರ್ಜುನ ಶಿವನನ್ನು ಭಜಿಸಿದ್ದಿಯಾ? ಶೈವಾಗಮೋಕ್ತ ಸಮಾಧಿಯು ಶಿವನ ಪಾದದ ಧೂಳನ್ನು ತೋರಿಸಿತೇ? ಮನಸ್ಸಿನ ಆಳದಲ್ಲಿದ್ದ ಬಯಕೆಯು ಮೇಲಕ್ಕೆ ಬಂದು ಫಲಿಸಿತೇ? ವಿಜಯವೆಂಬ ನಿನ್ನ ಹೆಸರು ಜಡವಾಗದೇ ಚೇತನಾತ್ಮಕವಾಗಿ ಸಾರ್ಥಕವಾಯಿತೇ? ಶತ್ರುರಾಜರ ಕುಜನತೆಯನ್ನು ಕತ್ತರಿಸಿ ಹಾಕಲು ಸಮರ್ಥರಾದವೇ? ಎಂದು ಹೇಳುತ್ತಾ ಧರ್ಮಜನ ಹರ್ಷಿಸಿದನು.

ಅರ್ಥ:
ಭಜಿಸು: ಆರಾಧಿಸು; ಭರ್ಗ: ಶಿವ; ಶಾಂಭವ: ಶಿವ; ಯಜನ: ಯಜ್ಞ, ಪೂಜೆ; ಸಾರ: ಶ್ರೇಷ್ಠ; ಸಮಾಧಿ: ಏಕಾಗ್ರತೆ, ತನ್ಮಯತೆ; ಶಿವ: ಶಂಕರ; ಪದ: ಪಾದ, ಚರಣ; ರಜ: ಧೂಳು; ಬೆರಸು: ಕೂಡಿಸು; ಬಗೆ: ಯೋಚಿಸು, ಎಣಿಸು; ಕುಣಿ: ಗುಂಡಿ, ಹಳ್ಳ; ತೆವರು: ಅಟ್ಟು, ಓಡಿಸು, ಹೆದರು; ತಡಿ: ಎಲ್ಲೆ, ಮಿತಿ, ಹತ್ತಿರ; ತೆಗೆ: ಈಚೆಗೆ ತರು; ವಿಜಯ: ಗೆಲುವು; ಶಬ್ದ: ಸದ್ದು, ಸಪ್ಪಳ; ಕೃತಿ: ರಚನೆ, ಕೆಲಸ; ಜಡ: ಅಚೇತನ; ವೈರಿ: ಶತ್ರು; ರಾಯ: ರಾಜ; ಕುಜನತೆ: ಕೆಟ್ಟ ಜನ; ವಿಚ್ಛೇದ: ಕಡಿ; ಸಾಧ್ಯ: ಕಾರ್ಯ ರೂಪಕ್ಕೆ ತರಬಹುದಾದುದು; ಭೂಪ: ರಾಜ;

ಪದವಿಂಗಡಣೆ:
ಭಜಿಸಿದೈ +ಭರ್ಗನನು +ಶಾಂಭವ
ಯಜನ+ ಸಾರ+ಸಮಾಧಿ +ಶಿವ+ಪದ
ರಜವ +ಬೆರಸಿತೆ+ ಬಗೆಯ+ಕುಣಿ +ತೆವರಾಯ್ತೆ ತ+ಡಿದೆಗೆದು
ವಿಜಯ +ಶಬ್ದವು +ಪಾರ್ಥ+ಕೃತಿಯಲಿ
ಅಜಡವಲ್ಲಲೆ +ವೈರಿ+ ರಾಯರ
ಕುಜನತಾ +ವಿಚ್ಛೇದ +ಸಾಧ್ಯವೆ+ಎಂದನಾ +ಭೂಪ

ಅಚ್ಚರಿ:
(೧) ಯಜನ ಕುಜನ; ರಜ, ಅಜ – ಪ್ರಾಸ ಪದಗಳು

ಪದ್ಯ ೩೫: ಕಲಿಯುಗದ ಮನುಜರ ಸ್ವಭಾವ ಎಂತಹುದು?

ಹೀನಸತ್ವರು ಸತ್ಯಧರ್ಮವಿ
ಹೀನರರ್ಥಪರಾಯಣರು ಕುಜ
ನಾನುರಕ್ತರು ವರ್ಣಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ (ಅರಣ್ಯ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕಲಿಯುಗದ ಮನುಷ್ಯರ ಗುಣಗಳನ್ನು ಹೇಳುತ್ತಾ, ಕಲಿಯುಗದ ಮನುಷ್ಯರು ಹೀನವಾದ ಸತ್ವವುಳ್ಳವರು. ಸತ್ಯ ಧರ್ಮಗಳಿಲ್ಲದವರು, ಐಶ್ವರ್ಯ ಗಳಿಕೆಯೇ ಅವರ ಮುಖ್ಯವಾದ ಉದ್ದೇಶವಾಗಿರುತ್ತದೆ, ಅವರು ಕೆಟ್ಟಜನರನ್ನು ಪ್ರೀತಿಸುತ್ತಾರೆ. ವರ್ಣ ಧರ್ಮಗಳನ್ನು, ಆಶ್ರಮ ಧರ್ಮಗಳನ್ನೂ ವಿಶೇಷವಾಗಿ ದೂಷಿಸುತ್ತಾರೆ. ದುಷ್ಪಾತ್ರರಿಗೆ ದಾನ ಮಾಡುತ್ತಾರೆ, ಗುಣಗಳನ್ನು ಗುರುತಿಸಿದರೂ ಹೇಳುವುದಿಲ್ಲ. ಗರ್ವಿಗಳು, ಮಿಥ್ಯಾಜ್ಞಾನಿಗಳೂ ಆಗಿರುತ್ತಾರೆ ಎಂದು ಹನುಮನು ಭೀಮನಿಗೆ ತಿಳಿಸಿದನು.

ಅರ್ಥ:
ಹೀನ:ಕೀಳಾದ, ಕೆಟ್ಟ; ಸತ್ವ: ಶಕ್ತಿ, ಬಲ; ಸತ್ಯ: ದಿಟ; ಧರ್ಮ: ಧಾರಣೆ ಮಾಡಿದುದು; ವಿಹೀನ: ತೊರೆದ, ತ್ಯಜಿಸಿದ; ಅರ್ಥ: ಐಶ್ವರ್ಯ; ಪರಾಯಣ: ಪ್ರಮುಖವಾದ ಉದ್ದೇಶ, ಪರಮಗುರಿ; ಕುಜನ: ಕೆಟ್ಟಜನ, ದುಷ್ಟ; ಅನುರಕ್ತ: ಮೋಹಗೊಂಡ; ವರ್ಣ: ಬಣ, ಪಂಗಡ; ಆಶ್ರಮ: ಜೀವನದ ನಾಲ್ಕು ಘಟ್ಟಗಳು (ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ); ವಿದೂಷಕ: ಹಾಸ್ಯದ, ತಮಾಷೆಯ, ದೂಷಣೆ ಮಾಡುವವನು; ದಾನಿ: ದಾನ ಮಾಡುವವನು; ದುಷ್ಪಾತ್ರ: ಕೆಟ್ಟಜನ; ಮೌನಿ: ಮಾತನ್ನಾಡದೆ ಇರುವವನು; ಗರ್ವ: ಸೊಕ್ಕು, ಹೆಮ್ಮೆ; ಮಿಥ್ಯ: ಸುಳ್ಳು; ಜ್ಞಾನಿ: ತಿಳಿದವನು, ವಿದ್ವಾಂಸ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಕೇಳು: ಆಲಿಸು;

ಪದವಿಂಗಡಣೆ:
ಹೀನಸತ್ವರು +ಸತ್ಯಧರ್ಮ+ವಿ
ಹೀನರ್+ಅರ್ಥ+ಪರಾಯಣರು +ಕುಜನ
ಅನುರಕ್ತರು+ ವರ್ಣಧರ್ಮಾಶ್ರಮ+ ವಿದೂಷಕರು
ದಾನಿಗಳು +ದುಷ್ಪಾತ್ರದಲಿ +ಗುಣ
ಮೌನಿಗಳು +ಗರ್ವಿತರು+ ಮಿಥ್ಯಾ
ಜ್ಞಾನಿಗಳು +ಕಲಿಯುಗದ +ಮನುಜರು +ಭೀಮ +ಕೇಳೆಂದ

ಅಚ್ಚರಿ:
(೧) ದಾನಿಗಳು, ಮೌನಿಗಳು, ಜ್ಞಾನಿಗಳು – ಪ್ರಾಸ ಪದಗಳು
(೨) ವಿಹೀಣ, ವಿದೂಷಕ – ವಿ ಕಾರದ ಪದಗಳ ಬಳಕೆ
(೩) ಜೋಡಿ ಪದಗಳು – ದಾನಿಗಳು ದುಷ್ಪಾತ್ರದಲಿ; ಗುಣಮೌನಿಗಳು ಗರ್ವಿತರು