ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು (ದ್ರೋಣ ಪರ್ವ, ೧೯ ಸಂಧಿ, ೧೭ ಪದ್ಯ)
ತಾತ್ಪರ್ಯ:
ನಾರಾಯಣಾಸ್ತ್ರದ ಕಾವಿಗೆ ಸಮುದ್ರವು ಕುದಿದು ಜಲಚರಗಳು ನೋವಿನಿಂದ ಒದರಿದವು. ಭೂಮಿ ಅರಣ್ಯಗಳು ಸೀದುಹೋದವು. ಕುಲಪರ್ವತಗಳು ಸಿಡಿದವು. ಅಷ್ಟ ದಿಗ್ಗಜಗಳು ತಾಪವನ್ನು ತಾಳಲಾರದೆ ನೆತ್ತಿಯನ್ನು ತಗ್ಗಿಸಿ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದವು. ಆದಿಶೇಷನು ಹೆಡೆಬಾಗಿ ಮಣಿಗಳಿಂದಲೇ ಭೂಮಿಯನ್ನು ಹೊತ್ತನು.
ಅರ್ಥ:
ಒಳಗೆ: ಆಂತರ್ಯ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ಕುದಿ: ಮರಳು; ಜಲಧಿ: ಸಾಗರ; ಕಾದು: ಬಿಸಿಯಾಗು; ಧರಣಿ: ಭೂಮಿ; ಸೀದು: ಕರಕಲಾಗು; ಕುಲಗಿರಿ: ದೊಡ್ಡ ಬೆಟ್ಟ; ಉರೆ: ಹೆಚ್ಚು; ಸಿಡಿ: ಸೀಳು; ಸೀಕರಿ: ಸೀಕಲು, ಕರಿಕು; ವನ: ಕಾಡು; ನಿಕರ: ಗುಂಪು; ನೆಲ: ಭೂಮಿ; ದಾಡೆ: ದವಡೆ, ಒಸಡು; ಕೊಟ್ಟು: ನೀದು; ಕುಂಭಸ್ಥಳ: ಆನೆಯ ನೆತ್ತಿ; ತೆಗೆ: ಹೊರತರು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ತತಿ: ಗುಂಪು; ಹೆಡೆ: ಹಾವಿನ ಬಿಚ್ಚಿದ ತಲೆ, ಫಣಿ; ನಳಿ: ಬಾಗು; ಮಣಿ: ಬೆಲೆಬಾಳುವ ರತ್ನ; ಅವನಿ: ಭೂಮಿ; ಉರಗಪತಿ: ಆದಿಶೇಷ;
ಪದವಿಂಗಡಣೆ:
ಒಳಗೆ +ಜಲಚರವೊದರೆ +ಕುದಿದುದು
ಜಲಧಿ +ಕಾದುದು +ಧರಣಿ+ ಸೀದುದು
ಕುಲಗಿರಿಗಳ್+ಉರೆ +ಸಿಡಿದು +ಸೀಕರಿವೋಯ್ತು +ವನ+ನಿಕರ
ನೆಲಕೆ +ದಾಡೆಯ +ಕೊಟ್ಟು +ಕುಂಭ
ಸ್ಥಳವ +ತೆಗೆದವು +ದಿಗಿಭತತಿ+ ಹೆಡೆ
ನಳಿಯೆ +ಮಣಿಗಳಲಾಂತನ್+ಅವನಿಯನ್+ಉರಗಪತಿ+ಅಂದು
ಅಚ್ಚರಿ:
(೧) ಕುದಿದುದು, ಕಾದುದು, ಸೀದುದು, ಸಿಡಿದು – ಪದಗಳ ಬಳಕೆ
(೨) ಒಂದೇ ಪದದ ಪ್ರಯೋಗ – ಮಣಿಗಳಲಾಂತನವನಿಯನುರಗಪತಿಯಂದು