ಪದ್ಯ ೧೧: ಗಣಿಕೆಯರು ಹೇಗೆ ವಾದಿಸಿದರು?

ಹೇಳಿದರೆ ಕುಂತೀಕುಮಾರರು
ಕೇಳಿ ಮಾಡುವುದಾವುದೋ ವನ
ಪಾಲಕರು ತಾವಿಂದು ಪೃಥ್ವೀಪಾಲ ನಮ್ಮೊಡೆಯ
ಹೇಳಿ ಬಳಿಕರ್ಜುನನ ಭೀಮನ
ದಾಳಿಯನು ತರಲಹಿರೆನುತ ಘಾ
ತಾಳಿಯರು ಮುನಿಜನವ ಬೈದರು ಬಹುವಿಕಾರದಲಿ (ಅರಣ್ಯ ಪರ್ವ, ೧೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಋಷಿಮುನಿಗಳ ಮಾತನ್ನು ಕೇಳಿ ಆ ಗಣಿಕೆಯರು, ನೀವು ಹೇಳಿದರೆ ಏನು ಮಾಡಿದ ಹಾಗಾಯಿತು? ನಮ್ಮ ಒಡೆಯನೇ ರಾಜ. ಆದುದರಿಂದ ಈ ವನಕ್ಕೆ ನಾವೇ ಒಡೆಯರು ನೀವು ದೂರು ಕೊಟ್ಟು ಭೀಮಾರ್ಜುನರ ದಾಳಿಯನ್ನು ತರುತ್ತೀರೋ ತನ್ನಿ, ಎಂದು ಆ ಗಟ್ಟಿಗಿತ್ತಿಯರು ವಾದಿಸಿದರು.

ಅರ್ಥ:
ಹೇಳು: ತಿಳಿಸು; ಕೇಳು: ಆಲಿಸು; ವನ: ಕಾಡು; ಪಾಲಕ: ಒಡೆಯ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಒಡೆಯ: ನಾಯಕ; ದಾಳಿ: ಆಕ್ರಮಣ; ತರಲು: ಬರೆಮಾಡು; ಘಾತಾಳಿ: ಗಟ್ಟಿಗಿತ್ತಿ; ಮುನಿ: ಋಷಿ; ಬೈದು: ಜರೆದು; ವಿಕಾರ: ಮನಸ್ಸಿನ ವಿಕೃತಿ;

ಪದವಿಂಗಡಣೆ:
ಹೇಳಿದರೆ +ಕುಂತೀಕುಮಾರರು
ಕೇಳಿ +ಮಾಡುವುದಾವುದೋ +ವನ
ಪಾಲಕರು+ ತಾವಿಂದು +ಪೃಥ್ವೀಪಾಲ+ ನಮ್ಮೊಡೆಯ
ಹೇಳಿ +ಬಳಿಕ್+ಅರ್ಜುನನ +ಭೀಮನ
ದಾಳಿಯನು +ತರಲಹಿರೆನುತ+ ಘಾ
ತಾಳಿಯರು +ಮುನಿಜನವ+ ಬೈದರು +ಬಹು+ವಿಕಾರದಲಿ

ಅಚ್ಚರಿ:
(೧) ಗಣಿಕೆಯರನು ಕರೆದ ಪರಿ – ಘಾತಾಳಿಯರು ಮುನಿಜನವ ಬೈದರು ಬಹುವಿಕಾರದಲಿ
(೨) ಪಾಲಕ, ಒಡೆಯ, ಪಾಲ – ಸಾಮ್ಯಾರ್ಥ ಪದಗಳು