ಪದ್ಯ ೧೪: ದುರ್ಯೋಧನನ ಕಿವಿಗೆ ಪಾಂಡವರ ಮಾತು ಹೇಗಿರುತ್ತದೆ?

ಬೆರಳ ಮೀಸೆಯೊಳಿಡುತೆ ಕಿರುನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತೆ ಹರಿಯ ನುಡಿಗಳ ಕಿವುಡುಗೇಳುತ್ತೆ
ಮರುಳುತನದಾಳಾಪವೇತಕೆ
ಮುರಮಥನ ಪಾಂಡವರ ಕಥನವ
ನೊರೆಯದಿರು ಕರ್ಣಕ್ಕೆ ಶೂಲವಿದೆಂದನಾ ಭೂಪ (ಉದ್ಯೋಗ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಬೆರಳಿನಿಂದ ಮೀಸೆಯನ್ನು ತಿರುವಿ, ಕರ್ಣಾದಿಗಳ ಮುಖವನ್ನು ಕಿರುನಗೆಯಿಂದ ನೋಡಿದನು. ಶ್ರೀಕೃಷ್ಣನ ಮಾತುಗಳು ಅವನ ಕಿವಿಗೆ ಹೋಗಲೇ ಇಲ್ಲ. ಅವನು ಕೃಷ್ಣನಿಗೆ, ಈ ನಿನ್ನ ಹುಚ್ಚು ಮಾತುಗಳನ್ನೇಕೆ ಆಡುತ್ತಿರುವೆ, ಪಾಂದವರ ಕಥೆ ನನಗೆ ಬೇಕಿಲ್ಲ. ಅವರ ಮಾತು ಕಿವಿಗೆ ಶೂಲದಂತೆ ವ್ಯಥೆಯನ್ನುಂಟು ಮಾದುತ್ತದೆ ಎಂದನು.

ಅರ್ಥ:
ಬೆರಳು: ಅಂಗುಲಿ; ಮೀಸೆ: ಗಂಡಸರಿಗೆ ಮೂಗಿನ ಕೆಳಭಾಗದಲ್ಲಿ ತೋರುವ ಕೂದಲು; ಇಡು: ಮುಟ್ಟು; ಕಿರುನಗೆ: ಮುಗುಳ್ನಗೆ; ನಗೆ: ಸಂತೋಷ; ಆದಿ: ಮುಂತಾದ; ವದನ: ಮುಖ; ತಿರುಗು: ಸುತ್ತು; ನೋಡು: ವೀಕ್ಷಿಸು; ಹರಿ: ಕೃಷ್ಣ; ನುಡಿ: ಮಾತು; ಕಿವುಡು: ಕೇಳಿಸದಿರುವ ಸ್ಥಿತಿ; ಕೇಳು: ಆಲಿಸು; ಮರುಳು: ಬುದ್ಧಿಭ್ರಮೆ, ಹುಚ್ಚು; ಆಲಾಪ: ವಿಸ್ತಾರ; ಮುರಮಥ: ಕೃಷ್ಣ; ಕಥನ: ಹೇಳುವುದು, ಹೊಗಳುವುದು; ನೊರೆ: ಎಳೆಯದು; ಶೂಲ: ತ್ರಿಶೂಲ; ಕರ್ಣ: ಕಿವಿ;

ಪದವಿಂಗಡಣೆ:
ಬೆರಳ+ ಮೀಸೆಯೊಳಿಡುತೆ+ ಕಿರುನಗೆ
ವೆರಸಿ +ಕರ್ಣಾದಿಗಳ +ವದನವ
ತಿರುಗಿ+ ನೋಡುತೆ +ಹರಿಯ +ನುಡಿಗಳ+ ಕಿವುಡು+ಕೇಳುತ್ತೆ
ಮರುಳುತನದ್+ಆಳಾಪವ್+ಏತಕೆ
ಮುರಮಥನ+ ಪಾಂಡವರ+ ಕಥನವ
ನೊರೆಯದಿರು +ಕರ್ಣಕ್ಕೆ +ಶೂಲವಿದೆಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪರ್ಯೋಗ – ಕರ್ಣಕ್ಕೆ ಶೂಲವಿದೆಂದನಾ ಭೂಪ
(೨) ದುರ್ಯೋಧನನ ಭಂಗಿಯ ವಿವರಣೆ – ಬೆರಳ ಮೀಸೆಯೊಳಿಡುತೆ ಕಿರುನಗೆ
ವೆರಸಿ ಕರ್ಣಾದಿಗಳ ವದನವ ತಿರುಗಿ ನೋಡುತೆ ಹರಿಯ ನುಡಿಗಳ ಕಿವುಡುಗೇಳುತ್ತೆ
(೩) ನುಡಿಯು ಕೇಳಿಸದಿರುವ ಬಗೆ – ಹರಿಯ ನುಡಿಗಳ ಕಿವುಡುಗೇಳುತ್ತೆ