ಪದ್ಯ ೫೨: ದ್ರೌಪದಿಯು ಪ್ರಾತಿಕಾಮಿಕನನ್ನು ಏನು ಕೇಳಿದಳು?

ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತ ಕಿಲ್ಬಿಷನರಸನೆಂದಳು ದ್ರೌಪದಾದೇವಿ (ಸಭಾ ಪರ್ವ, ೧೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಪ್ಪ ಪ್ರಾತಿಕಾಮಿಕ, ಜೂಜನ್ನು ಶತ್ರುವೇ ಇಲ್ಲದವನಾದ ಧರ್ಮರಾಯನು ಆಡಿದನೇ, ಆಡಿ ಸೋತನೇ? ಮೋಸದ ಬಲೆಬೀಸುವಲ್ಲಿ ಶಕುನಿ, ದುರ್ಯೋಧನರು ನಿಪುಣರು. ದೊರೆಯು ಜೂಜಿನಲ್ಲಿ ಮೊದಲು ಏನನೊಡ್ಡಿ ಸೋತನು, ಶಿವ ಶಿವಾ ಕಲ್ಮಷ ರಹಿತನಾದ ಧರ್ಮರಾಯನಿಗೆ ಈ ಸ್ಥಿತಿಯೇ ಎಂದು ನೊಂದಳು ದ್ರೌಪದಿ.

ಅರ್ಥ:
ದೂತ: ಚರ, ಸೇವಕ; ಹೇಳು: ತಿಳಿಸು; ತಂದೆ: ಅಪ್ಪ, ಪಿತ; ಜೂಜು: ದ್ಯೂತ; ಅಜಾತರಿಪು: ವೈರಿಯಿಲ್ಲದವ; ರಿಪು: ವೈರಿ; ಅಜಾತ: ಹುಟ್ಟು ಇಲ್ಲದ; ಆಡು: ಕ್ರೀಡಿಸು; ಸೋಲು: ಪರಾಭವ; ಕೈತ: ಮೋಸ, ಕೆಲಸ; ಬಲೆ: ಮೋಸ, ಜಾಲ; ಮುನ್ನ: ಮೊದಲು; ಒಡ್ಡು: ಪಣವಾಗಿಡು; ನಿರ್ಧೂತ: ತೊಡೆದು ಹಾಕುವುದು; ಕಿಲ್ಭಿಷ: ಕಲ್ಮಷ ರಹಿತನಾದ; ಅರಸ: ರಾಜ;

ಪದವಿಂಗಡಣೆ:
ದೂತ +ಹೇಳೈ +ತಂದೆ +ಜೂಜನ್
ಅಜಾತರಿಪುವ್+ಆಡಿದನೆ +ಸೋತನೆ
ಕೈತವದ +ಬಲೆಗಾರರ್+ಅವದಿರು +ಶಕುನಿ +ಕೌರವರು
ದ್ಯೂತದಲಿ +ಮುನ್+ಏನನ್+ಒಡ್ಡಿದ
ಸೋತನ್+ಏನನು +ಶಿವ +ಶಿವಾ+ ನಿ
ರ್ಧೂತ +ಕಿಲ್ಬಿಷನ್+ಅರಸನ್+ಎಂದಳು +ದ್ರೌಪದಾದೇವಿ

ಅಚ್ಚರಿ:
(೧) ಧರ್ಮರಾಯನನ್ನು ದ್ರೌಪದಿ ಕರೆಯುವ ಪರಿ – ಅಜಾತರಿಪು, ನಿರ್ಧೂತ ಕಿಲ್ಬಿಷನರಸ
(೨) ಕೌರವರ ಬಗ್ಗೆ ದ್ರೌಪದಿಗಿದ್ದ ಅಭಿಪ್ರಾಯ – ಕೈತವದ ಬಲೆಗಾರರವದಿರು ಶಕುನಿ ಕೌರವರು