ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ (ದ್ರೋಣ ಪರ್ವ, ೧೫ ಸಂಧಿ, ೬೮ ಪದ್ಯ)
ತಾತ್ಪರ್ಯ:
ಘಟೋತ್ಕಚನ ಯುದ್ಧದಲ್ಲಿ ಹಿಡಿಂಬ, ಶಿಶುಪಾಲ, ಜರಾಸಂಧ, ನರಕ, ಕಿಮ್ಮೀರ, ಜಟಾಸುರರ ಮಕ್ಕಳು ಅವರ ವಂಶದವರನ್ನು ನಾಶ ಮಾಡಿದನು. ಈ ಬಲಹೀನರನ್ನೇಕೆ ನನ್ನ ಮೇಲೆ ನುಗ್ಗಿಸುವಿರಿ, ಬರುವಂತಿದ್ದರೆ ಕರ್ಣ ದ್ರೋಣರು ಬರಲಿ, ಭೀಮಾರ್ಜುನರ ಮೇಲೆ ಯುದ್ಧಮಾಡ ಬಯಸುವವರು ನನ್ನ ಮೇಲೆ ಕೈಮಾಡಲಿ ಎಂದನು.
ಅರ್ಥ:
ಒರಸು: ನಾಶ; ರಣ: ಯುದ್ಧ; ಅಸುರ: ರಾಕ್ಷಸ; ಮಕ್ಕಳು: ಸುತ; ಸೂನು: ಮಗ; ಸಂತತಿ: ವಂಶ; ಬರಲಿ: ಆಗಮಿಸು; ಉಳಿದ: ಮಿಕ್ಕ; ಜರಡು: ಹುರುಳಿಲ್ಲದುದು; ಜೋಡಿಸು: ಕೂಡಿಸು; ನರ: ಅರ್ಜುನ; ಬಯಸು: ಇಚ್ಛಿಸು; ಕೈಮಾಡು: ಯುದ್ಧಮಾಡು;
ಪದವಿಂಗಡಣೆ:
ಒರಸಿದನು+ ರಣದಲಿ +ಹಿಡಿಂಬ
ಅಸುರನ +ಮಕ್ಕಳ +ಚೈದ್ಯ +ಮಾಗಧ
ನರಕ +ಕಿಮ್ಮೀರಕ +ಜಟಾಸುರ+ಸೂನು +ಸಂತತಿಯ
ಬರಲಿ+ ಕರ್ಣ+ ದ್ರೋಣರ್+ಉಳಿದೀ
ಜರಡ +ಜೋಡಿಸಬೇಡ +ಭೀಮನ
ನರನ +ಬಯಸುವರ್+ಎನ್ನೊಡನೆ +ಕೈಮಾಡ+ಹೇಳೆಂದ
ಅಚ್ಚರಿ:
(೧) ಮಕ್ಕಳು, ಸೂನು – ಸಮಾನಾರ್ಥಕ ಪದ
(೨) ಘಟೋತ್ಕಚನ ಬಲವನ್ನು ಹೇಳುವ ಪರಿ – ಬರಲಿ ಕರ್ಣ ದ್ರೋಣರುಳಿದೀಜರಡ ಜೋಡಿಸಬೇಡ