ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನ ಮಗನನೀಶನ ಪದವ ಕಾಣಿಸಿದ (ದ್ರೋಣ ಪರ್ವ, ೯ ಸಂಧಿ, ೫ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಯೋಚಿಸುತ್ತಾ, ನಾಳಿನ ವ್ಯೂಹರಚನೆಯನನ್ನು ಭೇದಿಸಲು ದೇವತೆಗಳಿಗೂ ಕಿಂಪುರುಷರಿಗೂ ಅಸಾಧ್ಯ. ಅರ್ಜುನನು ಅಸಮಾನ ಬಲಶಾಲಿಯಾದರೂ ಅವನಿಗೆ ಗೆಲುವು ಅಸಾಧ್ಯ. ಅರ್ಜುನನ ಜೀವವನ್ನು ಆಕರ್ಷಿಸಿ ರುದ್ರನ ಬಳಿಗೆ ಹೋಗಿ ಅವನೇನು ಹೆಳುವನೋ ಕೇಳಿ ತಿಳಿದುಕೊಳ್ಳೋಣ ಎಂದುಕೊಂಡು ಶ್ರೀಕೃಷ್ಣನು ಅರ್ಜುನನ ಜೀವದೊಂದಿಗೆ ಹೋಗಿ ಶಿವನ ಪಾದದರ್ಶನವನ್ನು ಮಾಡಿಸಿದನು.
ಅರ್ಥ:
ರಚನೆ: ನಿರ್ಮಿಸು; ಚೆಲುವು: ಅಂದ; ನಾಳೆ: ಮರುದಿನ; ಆಹವ: ಯುದ್ಧ; ಖಚರ: ಗಂಧರ್ವ; ಅಸದಳ: ಅಸಾಧ್ಯ; ಅಚಲ: ಸ್ಥಿರವಾದ; ಬಲ: ಶಕ್ತಿ; ಗಾಂಡಿವಿ: ಅರ್ಜುನ; ಹರಿ: ಕತ್ತರಿಸು; ಸುಪ್ತಿ: ನಿದ್ರೆ, ನಿದ್ರಾವಸ್ಥೆ; ಉಚಿತ: ಸರಿಯಾದ; ಕೋಂಡೊಯ್ದು: ತೆರಳು; ರುದ್ರ: ಶಿವ; ವಚನ: ಮಾತು; ಅನುವು: ರೀತಿ, ಅವಕಾಶ; ತಿಳಿ: ಅರ್ಥೈಸು; ಶಚಿ: ಇಂದ್ರನ ಹೆಂಡತಿ; ಗಂಡ: ಯಜಮಾನ; ಮಗ: ಸುತ; ಈಶ: ಶಂಕರ; ಪದ: ಚರಣ; ಕಾಣಿಸು: ತೋರು;
ಪದವಿಂಗಡಣೆ:
ರಚನೆ +ಚೆಲುವಿದು +ನಾಳಿನ+ಆಹವ
ಖಚರ +ಕಿಂಪುರುಷರಿಗೆ +ಅಸದಳವ್
ಅಚಲಬಲ+ಗಾಂಡಿವಿಗೆ +ಹರಿಯದು +ಸುಪ್ತಿಯೊಳಗ್+ಅವನ
ಉಚಿತದಲಿ +ಕೊಂಡೊಯ್ದು +ರುದ್ರನ
ವಚನದ್+ಅನುವನು +ತಿಳಿವೆನೆಂದ್+ಆ
ಶಚಿಯಗಂಡನ +ಮಗನನ್+ಈಶನ +ಪದವ +ಕಾಣಿಸಿದ
ಅಚ್ಚರಿ:
(೧) ಅರ್ಜುನನನ್ನು ಶಚಿಯಗಂಡನ ಮಗ ಎಂದು ಕರೆದಿರುವುದು