ಪದ್ಯ ೮: ಸಾತ್ಯಕಿಯ ಸುತ್ತಲು ಯಾರು ಬಿದ್ದಿದ್ದರು?

ಕೆಣಕಿದರೆ ಭುಗಿಲೆಂದುದೀತನ
ರಣಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೊ ನಿನ್ನಾಳು ಕುದುರೆಯನರಿಯೆ ನಾನೆಂದ (ಕರ್ಣ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಶತ್ರುಗಳು ಮೇಲೆ ಬೀಳಲು ಸಾತ್ಯಕಿಯ ಪರಾಕ್ರಮದ ಬೆಂಕಿ ಭುಗಿಲೆಂದು ಉಬ್ಬಿತು. ಕಾಡುಕಿಚ್ಚಿನ ಬಾಯಿಗೆ ಒಣಗಿದ ಹುಲ್ಲಿನ ಬಣವೆ ಸಿಕ್ಕ ಹಾಗಾಯಿತು. ಸಾತ್ಯಕಿಯ ಬಾಣಗಳೇ ಕಾಣಲಿಲ್ಲ. ಅವನ ಸುತ್ತಲೂ ಹೆಣದ ಬಣವೆ ಹಾಣಿಸಿತು. ನಿನ್ನ ಸೈನಿಕರು, ಕುದುರೆಗಳು ಬಾಳೆಯ ಗಿಡದಂತೆ ಸುಲಭವಾಗಿ ಕಡಿತಗೊಂಡು ಬಿದ್ದರು.

ಅರ್ಥ:
ಕೆಣಕು: ಪ್ರಚೋದಿಸು, ರೇಗಿಸು; ಭುಗಿಲ್: ಶಬ್ದವನ್ನು ವರ್ಣಿಸುವ ಪದ; ರಣ: ಯುದ್ಧ; ಪರಾಕ್ರಮ: ಶೌರ್ಯ; ವಹ್ನಿ: ಬೆಂಕಿ; ಕರಡ:ಕಾಡಿನಲ್ಲಿ ಬೆಳೆದು ಒಣಗಿದ ಹುಲ್ಲು; ಬಣಬೆ: ಮೆದೆ; ಸಿಕ್ಕು: ದೊರೆತು; ಕಾಳುಗಿಚ್ಚು: ಅಡವಿ ಬೆಂಕಿ; ಬಾಯ: ತಿನ್ನಲು ಬಳಸುವ ಅಂಗ; ಬಗರೆಗೆ: ಓಡು; ಕಣೆ: ಬಾಣ; ಕಾಣು: ನೋಡು; ಸುತ್ತ: ಎಲ್ಲಾಕಡೆ; ಒಟ್ಟು: ಎಲ್ಲಾ; ಹೆಣ: ಶವ; ಕಂಡು: ನೋಡು; ಬಾಳೆ: ಕದಳಿ; ಹಣಿ: ಬಾಗು, ಮಣಿ; ಆಳು: ಸೈನ್ಯ; ಕುದುರೆ: ತುರಗ, ಅಶ್ವ; ಅರಿ: ತಿಳಿ;

ಪದವಿಂಗಡಣೆ:
ಕೆಣಕಿದರೆ +ಭುಗಿಲೆಂದುದ್+ಈತನ
ರಣಪರಾಕ್ರಮ+ವಹ್ನಿ +ಕರಡದ
ಬಣಬೆ+ ಸಿಕ್ಕಿತು +ಕಾಳುಗಿಚ್ಚಿನ +ಬಾಯ +ಬಗರಗೆಗೆ
ಕಣೆಯ +ಕಾಣೆನು +ಸುತ್ತಲೊಟ್ಟುವ
ಹೆಣನ+ ಕಂಡೆನ್+ಇದಾವ +ಬಾಳೆಯ
ಹಣಿದವೊ +ನಿನ್ನಾಳು +ಕುದುರೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಹ್ನಿ ಕರಡದ ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
(೨) ಉಪಮಾನದ ಪ್ರಯೋಗ – ಒಟ್ಟುವ ಹೆಣನ ಕಂಡೆನಿದಾವ ಬಾಳೆಯ ಹಣಿದವೊ ನಿನ್ನಾಳು