ಪದ್ಯ ೪೮: ಧರ್ಮಜನ ಶಕುನಿಗೆ ಏನು ಹೇಳಿದ?

ಲಲಿತರಾಗದ ರಸದ ಗೋರಿಯ
ಬಲುಗುಡಿಯ ಮೃಗದಂತೆ ವಿಷಯದ
ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ
ಕಲಿತ ವಿಕಳಾವೇಶದಲಿ ವಿ
ಹ್ವಲಿತ ವಿವಿಧ ಶ್ರೋತ್ರನಯ ಸಂ
ಚಲಿತನೆಂದನು ಶಕುನಿ ನೀನುಡಿಯೊಡ್ಡವೇನೆಂದು (ಸಭಾ ಪರ್ವ, ೧೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇಂಪಾದ ರಾಗದ ಆಕರ್ಷಣೆಗೆ ಸಿಕ್ಕು ಬಲೆಗೆ ಬಿದ್ದ ಜಿಂಕೆಯಂತೆ, ವಿಷಯಗಳ ಗುಂಡಿಯೊಳಗೆ ಎಡವಿ ಬಿದ್ದ ಯೋಗಿನಿಯಂತೆ, ಧರ್ಮಜನು ವಿಚಾರವಿಲ್ಲದ ಆವೇಶದಿಂದ ಹಲವು ಮಾತುಗಳ ಸವಿಗೆ, ಆವೇಶಕ್ಕೆ ಸೋತು, ಶಕುನಿ ಏನು ಪಡ ನೀನೇ ಹೇಳು ಎಂದನು.

ಅರ್ಥ:
ಲಲಿತ: ಚೆಲುವು; ರಾಗ: ಸಂಗೀತದಲ್ಲಿ ಹೊಂದಿಸಿದ ಸ್ವರಗಳ ಮೇಳೈಕೆ; ರಸ: ಸಾರ; ಗೋರಿ: ಆಕರ್ಷಣೆ, ಸೆಳೆತ; ಬಲುಗುಡಿ: ದೊಡ್ಡಬಾವುಟ; ಮೃಗ: ಜಿಂಕೆ; ವಿಷಯ: ಭೋಗಾಭಿಲಾಷೆ; ಕುಳಿ:ಗುಂಡಿ; ಕಾಲ್ದೊಡಕಿ: ಎಡವಿ ಬೀಳು; ಬಿದ್ದ: ಕುಸಿದ; ಯೋಗಿ: ಋಷಿ; ಕಲಿತ: ತಿಳಿದ, ಅಭ್ಯಾಸಮಾಡಿದ; ವಿಕಳ: ಭ್ರಮೆ, ಭ್ರಾಂತಿ, ಚಂಚಲ; ಆವೇಶ: ರೋಷ; ವಿಹ್ವಲ: ಹತಾಶ; ವಿವಿಧ: ಹಲವಾರು; ಶ್ರೋತ್ರ: ಕೇಳು; ನಯ: ನುಣುಪು, ಮೃದುತ್ವ; ಸಂಚಲ: ಚಲನೆ ಚಾಂಚಲ್ಯ; ನುಡಿ: ಮಾತಾಡು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ;

ಪದವಿಂಗಡಣೆ:
ಲಲಿತರಾಗದ +ರಸದ +ಗೋರಿಯ
ಬಲುಗುಡಿಯ +ಮೃಗದಂತೆ +ವಿಷಯದ
ಕುಳಿಯೊಳಗೆ+ ಕಾಲ್ದೊಡಕಿ+ ಬಿದ್ದ+ ಸುಯೋಗಿಯಂದದಲಿ
ಕಲಿತ +ವಿಕಳ+ಆವೇಶದಲಿ +ವಿ
ಹ್ವಲಿತ +ವಿವಿಧ +ಶ್ರೋತ್ರನಯ +ಸಂ
ಚಲಿತನೆಂದನು +ಶಕುನಿ+ ನೀ+ನುಡಿ+ಒಡ್ಡವೇನೆಂದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಲಿತರಾಗದ ರಸದ ಗೋರಿಯ ಬಲುಗುಡಿಯ ಮೃಗದಂತೆ; ವಿಷಯದ ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ