ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿ ವಚನದಲಿ
ಬಂದು ಕುಂತಿಗೆ ಸಾರನಗೆ ನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯಭಾವದಲಿ (ಸಭಾ ಪರ್ವ, ೧೨ ಸಂಧಿ, ೨೦ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ದ್ರೌಪದಿಗೆ ಬುದ್ಧಿಯ ಮಾತುಗಳನ್ನು ಹೇಳಿ, ಸುಭದ್ರೆ ಮತ್ತು ಅಭಿಮನ್ಯುರನ್ನು ಕರೆಸಿ ಪ್ರೀತಿಯ ಮಾತುಗಳನ್ನಾಡಿದನು. ನಂತರ ಕುಂತಿಯ ಬಳಿಗೆ ಹೋಗಿ ಸಂತೋಷದಿಂದ ವಿನಯ, ಪ್ರೀತಿ ಭರಿತವಾದ ಮಾತುಗಳನ್ನಾಡಿ, ಪಾಂಡವರನ್ನು ಕರುಣೆಯಿಂದ ಅನುಗ್ರಹಿಸಿದನು.
ಅರ್ಥ:
ಬುದ್ಧಿ: ತಿಳಿವು, ಅರಿವು; ಹೇಳು: ತಿಳಿಸು; ನಂದನ: ಮಗ; ಕರೆಸು: ಬರೆಮಾಡು; ತಾಯಿ: ಮಾತೆ; ಸಹಿತ; ಜೊತೆ; ನಯ: ನುಣುಪು, ಮೃದುತ್ವ; ಉಚಿತ: ಸರಿಯಾದ; ಪ್ರೀತಿ: ಒಲವು; ವಚನ: ನುಡಿ; ಬಂದು: ಆಗಮಿಸು; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ; ನಗೆ: ಸಂತಸ; ನುಡಿ: ಮಾತು; ವಿನಯ: ಸೌಜನ್ಯ; ಮನ್ನಿಸು: ಗೌರವಿಸು, ಅನುಗ್ರಹಿಸು; ಅತಿ: ಬಹಳ; ಕಾರುಣ್ಯ: ದಯೆ; ಭಾವ: ಭಾವನೆ, ಸಂವೇದನೆ;
ಪದವಿಂಗಡಣೆ:
ಎಂದು+ ಬುದ್ಧಿಯ +ಹೇಳಿ +ಪಾರ್ಥನ
ನಂದನನ+ ಕರೆಸಿದನು+ ತಾಯ್+ಸಹಿತ್
ಎಂದನ್+ಅವರಿಗೆ +ನಯದಲ್+ಉಚಿತ +ಪ್ರೀತಿ +ವಚನದಲಿ
ಬಂದು +ಕುಂತಿಗೆ +ಸಾರ+ನಗೆ +ನುಡಿ
ಯಿಂದ +ವಿನಯವ+ ಮಾಡಿ +ಪಾಂಡವ
ನಂದನರ+ ಮನ್ನಿಸಿದನ್+ಅತಿ+ ಕಾರುಣ್ಯ+ಭಾವದಲಿ
ಅಚ್ಚರಿ:
(೧) ನಂದನ – ೨, ೬ ಸಾಲಿನ ಮೊದಲ ಪದ
(೨) ವಚನ, ನುಡಿ – ಸಮನಾರ್ಥಕ ಪದ