ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ (ದ್ರೋಣ ಪರ್ವ, ೧ ಸಂಧಿ, ೬ ಪದ್ಯ)
ತಾತ್ಪರ್ಯ:
ಯಾರು ದುರ್ಜನರೋ, ಯಾರು ನೀಚರೋ, ನೀತಿಬಿಟ್ಟವರಾರೋ, ಯಾರು ದುರ್ಬಲರೋ, ಅವರೇ ನಿನ್ನ ಅರಮನೆಯ ಮಂತ್ರಿಗಳು, ಹಿತವರು, ನೀತಿಯನ್ನು ಚೆನ್ನಾಗಿ ಬಲ್ಲವರು, ಸುಜನರು, ಮಹಾಪರಾಕ್ರಮಿಗಳು ಯಾರಿರುವರೋ ಅವರನ್ನು ಹೊರಗಿಡಬೇಕು ಎನ್ನುವುದೇ ನಿನ್ನ ನಿರ್ಧಾರ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಅರ್ಥ:
ಕುಹಕ: ಮೋಸ, ವಂಚನೆ; ದುರ್ಜನ: ದುಷ್ಟ; ಖುಲ್ಲ: ದುಷ್ಟ, ನೀಚ; ಬಾಹಿರ: ಹೊರಗಿನವ; ದುರ್ಬಲ: ಬಲಹೀನವಾದ, ಶಕ್ತಿಹೀನ; ಅರಮನೆ: ರಾಜರ ಆಲಯ; ಮಂತ್ರಿ: ಸಚಿವ; ಹಿತ: ಒಳ್ಳೆಯದು, ಪ್ರಿಯಕರವಾದ; ನೀತಿ: ನಿಯಮ; ಕೋವಿದ: ಪಂಡಿತ; ಸುಜನ: ಒಳ್ಳೆಯ ಜನ,ಸಜ್ಜನ; ಪರಾಕ್ರಮ: ಕಲಿತನ, ಶೌರ್ಯ; ಕಾಬುದು: ಕಾಣಬೇಕು; ಮತ: ಅಭಿಪ್ರಾಯ, ಆಶಯ;
ಪದವಿಂಗಡಣೆ:
ಆರು +ಕುಹಕಿಗಳ್+ಆರು +ದುರ್ಜನರ್
ಆರು +ಖುಲ್ಲರು +ನೀತಿ +ಬಾಹಿರರ್
ಆರು +ದುರ್ಬಲರ್+ಅವರು +ನಿನ್ನ್+ಅರಮನೆಯ +ಮಂತ್ರಿಗಳು
ಆರು +ಹಿತವರು +ನೀತಿ +ಕೋವಿದರ್
ಆರು +ಸುಜನರು +ಬಹು +ಪರಾಕ್ರಮರ್
ಆರ್+ಅವರ+ ಹೊರಬೀಸಿ +ಕಾಬುದು +ನಿನ್ನ +ಮತವೆಂದ
ಅಚ್ಚರಿ:
(೧) ಆರು ಪದದ ಬಳಕೆ – ೧-೬ ಸಾಲಿನ ಮೊದಲ ಪದ
(೨) ದುಷ್ಟರನ್ನು ಹೇಳಲು ಬಳಸಿದ ಪದ – ಕುಹಕಿ, ದುರ್ಜನ, ಖುಲ್ಲ