ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋಧ್ಯೋಗಪರನಾದ (ದ್ರೋಣ ಪರ್ವ, ೧೦ ಸಂಧಿ, ೪೦ ಪದ್ಯ)
ತಾತ್ಪರ್ಯ:
ಇದು ಯಮನ ಸೀಮೆಯಾಯಿತು, ಸುಯೋಧನನ ಅಭ್ಯುದಯವು ಕುಸಿಯಿತು ಎಂದು ಕರ್ಣನೇ ಮೊದಲಾದವರು ಕಳವಳಿಸಿದರು. ಮಹಾವೀರರು ಬೆದರಿ ಕೆಂಗೆಡಲು ಕೌರವನು ಕಡುಗೋಪಗೊಂಡು ಯುದ್ಧಕ್ಕೆ ಸಜ್ಜಾದನು.
ಅರ್ಥ:
ಕೃತಾಂತ: ಯಮ; ಸೀಮೆ: ಎಲ್ಲೆ, ಗಡಿ, ಮೇರೆ; ನೃಪತಿ: ರಾಜ; ವಿಗತ: ಹಾಳು, ಕುಸಿ; ಅಭ್ಯುದಯ: ಏಳಿಗೆ; ಆದಿ: ಮುಂತಾದ; ಕಳವಳ: ಗೊಂದಲ; ಹೆದರು: ಅಂಜು; ಹೇರಾಳ: ಬಹಳ ವೀರ: ಶೂರ; ಕದನ: ಯುದ್ಧ; ಅನುವು: ಆಸ್ಪದ, ಅನುಕೂಲ; ಕಂಡು: ನೋಡು; ಕೋಪ: ಸಿಟ್ಟು, ಮುಳಿ; ರಾಯ: ರಾಜ; ಸಮರ: ಯುದ್ಧ; ಉದ್ಯೋಗ: ಕೆಲಸ;
ಪದವಿಂಗಡಣೆ:
ಇದು +ಕೃತಾಂತನ +ಸೀಮೆಗಳವ್
ಅಟ್ಟುದು +ಸುಯೋಧನ+ನೃಪತಿ +ವಿಗತ
ಅಭ್ಯುದಯನ್+ಆದನ್+ಎನುತ್+ಅತ್ತ +ಕರ್ಣಾದಿಗಳು +ಕಳವಳಿಸೆ
ಹೆದರೆದೆಯ +ಹೇರಾಳ +ವೀರರ
ಕದನದ್+ಅನುವನು +ಕಂಡು +ಕಡುಗೋ
ಪದಲಿ +ಕೌರವರಾಯ +ಸಮರ+ಉದ್ಯೋಗ+ಪರನಾದ
ಅಚ್ಚರಿ:
(೧) ಸೋಲು ಎಂದು ತಿಳಿಸಲು – ವಿಗತಾಭ್ಯುದಯನಾದನ್ ಪದದ ಬಳಕೆ
(೨) ಉಪಮಾನದ ಪ್ರಯೋಗ – ಇದು ಕೃತಾಂತನ ಸೀಮೆಗಳವಟ್ಟುದು