ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯಕಲ್ಮಷ ಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ (ಆದಿ ಪರ್ವ, ೨ ಸಂಧಿ, ೧೫ ಪದ್ಯ)
ತಾತ್ಪರ್ಯ:
ವೈಶಂಪಾಯನ ಮುನಿಯು ರಾಜನೇ ಕೇಳು ಎಂದು ಸರ್ವಪಾಪಹರವಾದ ಶ್ರೀಕೃಷ್ಣನ ಬಾಲಲೀಲೆಗಳನ್ನು ಹೇಳಿದನು. ಈ ವಿಷಯವನ್ನು ಸೂತರು ಶೌನಕಾದಿ ಋಷಿಗಳಿಗೆ ಹೇಳಿದರು. ಮನುಷ್ಯನು ಮಾಡುವ ಸಮಸ್ತಪಾಪಗಲನ್ನು ನಾಶಮಾಡಿ ಆತ್ಮ ಸ್ವರೂಪವನ್ನು ಉಂಟುಮಾಡುವ ಮೋಕ್ಷದಾಯಕವಾದ ಮಹಾಭಾರತದ ಕಥೆಯನ್ನು ಹೇಳಿದರು.
ಅರ್ಥ:
ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ; ಹೇಳು: ತಿಳಿಯಪಡಿಸು; ಕಮಲದಳಾಯತಾಕ್ಷ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಾಲ: ಚಿಕ್ಕವ; ಕೇಳಿ: ಕ್ರೀಡೆ, ವಿನೋದ; ವಿಧೂತ: ಅಲುಗಾಡುವ, ತೊರೆದ; ಕಿಲ್ಬಿಷ: ಪಾಪ; ಕಾಯ: ದೇಹ; ಕಲ್ಮಷ: ಕೊಳೆ, ಮಾಲಿನ್ಯ; ಹರ: ಹೋಗಲಾಡಿಸು; ಅಖಿಳ: ಎಲ್ಲಾ; ನಿಶ್ರೇಯಸ: ಮೋಕ್ಷ; ಸದ್ರೂಪ: ಶುದ್ಧ ಇರವಿನ ರೂಪ, ಆತ್ಮಸ್ವರೂಪ; ಸಂದಾಯಕ: ಕೊಡುವಂತಹುದು; ನಿರ್ಮಲ: ಶುದ್ಧ; ಅಮೃತ: ಸುಧೆ;
ಪದವಿಂಗಡಣೆ:
ರಾಯ +ಚಿತ್ತೈಸೆಂದು +ವೈಶಂ
ಪಾಯ+ಮುನಿ +ಹೇಳಿದನು +ಕಮಲದ
ಳಾಯತಾಕ್ಷನ+ ಬಾಲ+ಕೇಳಿ +ವಿಧೂತ +ಕಿಲ್ಬಿಷವ
ಕಾಯ+ಕಲ್ಮಷ+ ಹರವ್+ಅಖಿಳ +ನಿ
ಶ್ರೇಯಸದ +ಸದ್ರೂಪುವಿನ +ಸಂ
ದಾಯಕವ+ ನಿರ್ಮಲ +ಮಹಾಭಾರತ+ ಕಥಾಮೃತವ
ಅಚ್ಚರಿ:
(೧) ಕೃಷ್ಣನನ್ನು ಕಮಲದಳಾಯತಾಕ್ಷ ಎಂದು ಕರೆದಿರುವ ಪರಿ
(೨) ಮಹಾಭಾರತದ ಹಿರಿಮೆ: ಕಾಯಕಲ್ಮಷ ಹರವಖಿಳ ನಿಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ