ಪದ್ಯ ೨೨: ಶಿವನು ಅರ್ಜುನನಿಗೆ ಏನು ಹೇಳಿದನು?

ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾಜಲಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳರೆ ಕೊಂಡುಬಾಯೆಂದ (ಅರಣ್ಯ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮರದ ದೊಡ್ಡಕೊಂಬೆಗಳಿಂದ, ಕಲ್ಲುಗುಂಡುಗಳಿಂದ ಅರ್ಜುನನು ಶಿವನನ್ನು ಹೊಡೆದನು, ಕಿರಾತನು ಬಾಣಗಳಿಂದ ಅವೆಲ್ಲವನ್ನೂ ಕತ್ತರಿಸಿ, ಅಯ್ಯೋ ಹುಚ್ಚ ತಪಸ್ವಿ, ನಿನ್ನ ಬಳಿ ಬೇರೆ ಆಯುಧಗಳಿದ್ದರೆ ತೆಗೆದುಕೊಂಡು ಬಾ ಎಂದು ಹೇಳಿದನು.

ಅರ್ಥ:
ಮರ: ತರು; ಹೆಗ್ಗೊಂಬು: ದೊಡ್ಡ ಕೊಂಬೆಗಳು; ಇಟ್ಟನು: ಹೊಡೆದನು; ತಿರುಹಿ: ಮತ್ತೆ; ಕಲ್ಲು: ಶಿಲ; ಮಳೆ: ವರ್ಷಿಸು, ಧಾರೆ; ಹರ: ಶಿವ; ನಾದು: ತೋಯಿಸು; ಉರವಣೆ: ಆತುರ, ಅವಸರ; ಸರಳ: ಬಾಣ; ಸಾರು: ಬಳಿ ಸೇರು; ಕತ್ತರಿಸು: ಕಡಿ; ಕರುಣ: ದಯೆ; ಜಲಧಿ: ಸಾಗರ; ನುಡಿ: ಹೇಳು, ಮಾತಾಡು; ಮರುಳೆ: ಮೂಢ; ತಮ್ಮಡಿ: ನಿಮ್ಮ ಪಾದ; ಕೈದು: ಆಯುಧ, ಶಸ್ತ್ರ; ಕೊಂಡು: ತರು;

ಪದವಿಂಗಡಣೆ:
ಮರನ +ಹೆಗ್ಗೊಂಬುಗಳಲ್+ಇಟ್ಟನು
ತಿರುಹಿ +ಕಲ್ಗುಂಡುಗಳ+ ಮಳೆಯಲಿ
ಹರನ+ ನಾದಿದನ್+ಏನನೆಂಬೆನು +ಪಾರ್ಥನ್+ಉರವಣೆಯ
ಸರಳ +ಸಾರದಲ್+ಇನಿತುವನು +ಕ
ತ್ತರಿಸಿ+ ಕರುಣಾಜಲಧಿ +ನುಡಿದನು
ಮರುಳೆ +ತಮ್ಮಡಿ+ ಕೈದುವುಳ್ಳರೆ +ಕೊಂಡುಬಾಯೆಂದ

ಅಚ್ಚರಿ:
(೧) ಹೆಗ್ಗೊಂಬುಗಳ, ಕಲ್ಗುಂಡುಗಳ – ಪದಗಳ ಬಯಕೆ
(೨) ಕರುಣಾಜಲಧಿ – ಶಿವನನ್ನು ಕರೆದಬಗೆ

ಪದ್ಯ ೧೧೨: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧?

ಸುಲಿವರೊರೊಳಗುಟ್ಟ ಸೀರೆಯ
ನೆಲೆ ಮುರಾಂತಕ ರಕ್ಷಿಸೈ ಶಶಿ
ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
ಸೆಳೆವರಸುವನು ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ಈ ಸಭೆಯ ನಡುವೆ ನಾನುಟ್ಟ ಸೀರೆಯನ್ನು ಸೆಳೆಯುತ್ತಿದ್ದಾರೆ. ಹೇ ಮುರಾಂತಕ ನೀನೇ ನನ್ನನ್ನು ರಕ್ಷಿಸು, ನುಂಗಲು ಬಂದ ರಾಹುವಿನ ತುಟಿಗಳೊಡನೆ ಚಂದ್ರನ ಕಾಂತಿಗೆ ಸಲಿಗೆಯುಂಟೇ? ಈ ರಾಕ್ಷಸರು ನನ್ನ ಪ್ರಾಣವನ್ನೇ ಹೀರುತ್ತಿದ್ದಾರೆ. ಸೀರೆಯು ಬಿಚ್ಚಿದರೆ ನಾನು ಬದುಕಿರುವುದಿಲ್ಲ. ಹೇ ಕರುಣಾಸಮುದ್ರನೇ ಶ್ರೀಕೃಷ್ಣ ಕಾಪಾಡು ಎಂದು ಮೊರೆಯಿಟ್ಟಳು.

ಅರ್ಥ:
ಸುಲಿ: ತೆಗೆ, ಕಳಚು; ಊರು: ಸಭೆ, ಪುರ; ಉಟ್ಟ: ತೊಟ್ಟ; ಸೀರೆ: ಬಟ್ಟೆ; ನೆಲೆ: ಆಶ್ರಯ, ವಾಸಸ್ಥಾನ; ಮುರಾಂತಕ: ಕೃಷ್ಣ; ರಕ್ಷಿಸು: ಕಾಪಾಡು; ಶಶಿ: ಚಂದ್ರ; ಕಳೆ: ಪ್ರಕಾಶ, ಕಾಂತಿ; ಸದರ: ಸಲಿಗೆ, ಸುಲಭ; ರಾಹು: ನವಗ್ರಹಗಳಲ್ಲಿ ಒಂದು; ರಚಿಸು: ನಿರ್ಮಿಸು; ತುಟಿ: ಅಧರ; ತೋಟಿ: ಕಲಹ, ಜಗಳ; ಅಸು: ಪ್ರಾಣ; ಖಳ: ದುಷ್ಟ; ಸೆಳೆ: ಎಳೆತ, ಜಗ್ಗು; ಕರುಣಾಜಲಧಿ: ಕರೂಣೆಯ ಸಾಗರ; ಕಾಯು: ಕಾಪಾಡು; ಒರಳು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಸುಲಿವರ್+ಊರೊಳಗ್+ಉಟ್ಟ +ಸೀರೆಯನ್
ಎಲೆ+ ಮುರಾಂತಕ +ರಕ್ಷಿಸೈ +ಶಶಿ
ಕಳೆಗೆ+ ಸದರವೆ+ ರಾಹು +ರಚಿಸಿದ +ತುಟಿಯ +ತೋಟಿಯದು
ಸೆಳೆವರ್+ಅಸುವನು +ಖಳರು +ಸೀರೆಯ
ಸುಲಿದರ್+ಉಳಿಯೆನು +ಕೃಷ್ಣ +ಕರುಣಾ
ಜಲಧಿಯೇ +ಕೈ+ಕಾಯಬೇಕೆಂದ್+ ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶಶಿ ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು
(೨) ಕೃಷ್ಣನಿಗೆ ಮೊರೆಯಿಡುವ ಪರಿ – ಮುರಾಂತಕ ರಕ್ಷಿಸೈ, ಸೀರೆಯ ಸುಲಿದರುಳಿಯೆನು ಕೃಷ್ಣ ಕರುಣಾಜಲಧಿಯೇ ಕೈಗಾಯಬೇಕೆಂದೊರಲಿದಳು

ಪದ್ಯ ೩೩: ವೇದವ್ಯಾಸರು ಏನು ಹೇಳಿ ತಮ್ಮ ಆಶ್ರಮಕ್ಕೆ ತೆರಳಿದರು?

ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನಯ ಮರೆಯದಿರು ಕೊಂ
ಕೊದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ (ಸಭಾ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾನು ನಿಮಗೆ ತಿಳಿಸಿರುವುದು ಒಂದು ಗೆರೆಯಷ್ಟು ಮಾತ್ರ, ನಿನ್ನನ್ನು ಸರ್ವಾಂಗದಲ್ಲೂ ಮರೆಯದೆ ಎಚ್ಚರವಾಗಿಟ್ಟುಕೊಳ್ಳಬೇಕು. ಅಲ್ಪ ಮಾತ್ರವಾದರೂ ತಪ್ಪಿತೆಂದು ಹೆದರಬೇಡ, ನಿನ್ನ ಒಳ್ಳೆಯ ನಡತೆಯಿಂದ ನೀನು ಶ್ರೀಕೃಷ್ಣನ ಕೃಪಾಪಾತ್ರನಾಗಿ ಕಷ್ಟವನ್ನು ಜಯಿಸುವೆ. ನಿನಗೆ ವಿರುದ್ಧವಾಗಿ ಬರುವ ವಿಷಯಗಳಿಗೆ ಹೆದರಬೇಡ ಎಂದು ಹೇಳಿ ವ್ಯಾಸರು ಪಾಂಡವರಿಗೂ ದ್ರೌಪದಿಗೂ ಬುದ್ಧಿಯನ್ನು ಹೇಳಿ ತೆರಳಿದರು.

ಅರ್ಥ:
ರೇಖ: ಗೆರೆ; ಸರ್ವಾಂಗ: ಎಲ್ಲಾ ಅಂಗ/ದೇಹದ ಭಾಗ; ಮರೆ: ನೆನಪಿನಿಂದ ದೂರಮಾದು; ಕೊಂಕು: ವಕ್ರೋಕ್ತಿ, ವ್ಯಂಗ್ಯ; ಕರುಣ: ದಯೆ; ಜಲಧಿ: ಸಾಗರ; ಜೈಸಲು: ಗೆಲ್ಲಲು; ಹರಿ: ಕೃಷ್ಣ; ಬೆದರು: ಹೆದರು; ವಿಗಡ: ಶೌರ್ಯ, ಪರಾಕ್ರಮ; ವಿಷಯ: ಇಂದ್ರಿಯ ಗೋಚರವಾಗುವ; ಆಸ್ಪದ: ನೆಲೆ, ಅಶ್ರಯ; ಮುನಿ: ಋಷಿ; ಸುದತಿ: ಸುಂದರಿ, ಹೆಣ್ಣು; ಸಹಿತ: ಜೊತೆ;ಆನಿಬರಿಗೆ: ಅಷ್ಟು ಮಂದಿಗೆ; ಬುದ್ಧಿ: ತಿಳಿವು, ಅರಿವು; ಹೊರವಂಟ: ಹೊರಡು;

ಪದವಿಂಗಡಣೆ:
ಇದುವೆ +ರೇಖಾಮಾತ್ರ+ ಸರ್ವಾಂ
ಗದಲಿ+ ನಿನ್ನಯ +ಮರೆಯದಿರು +ಕೊಂ
ಕಿದರೆ+ ಕರುಣಾಜಲಧಿ+ ಜೈಸಲುವುಂಟು +ಹರಿ +ನಿನಗೆ
ಬೆದರದಿರು +ವಿಗಡಿಸುವ +ವಿಷಯ
ಆಸ್ಪದದೊಳ್+ಎಂದು +ಮುನೀಂದ್ರನ್+ಐವರು
ಸುದತಿ+ ಸಹಿತ್+ಅನಿಬರಿಗೆ+ ಬುದ್ಧಿಯ +ಹೇಳಿ+ ಹೊರವಂಟ

ಅಚ್ಚರಿ:
(೧) ದ್ರೌಪದಿಯನ್ನು ಸುದತಿ ಎಂದು ಕರೆದಿರುವುದು
(೨) ವ್ಯಾಸರ ಬುದ್ಧಿ ಮಾತು: ಬೆದರದಿರು ವಿಗಡಿಸುವ ವಿಷಯಾಸ್ಪದದೊಳೆಂದು; ಸರ್ವಾಂ
ಗದಲಿ ನಿನ್ನಯ ಮರೆಯದಿರು

ಪದ್ಯ ೪೦: ಸ್ವರ್ಗದ ಪರಿಕಲ್ಪನೆ ಏನು?

ಸುಲಭನತಿ ಸಾಹಿತ್ಯ ಮಂಗಳ
ನಿಲಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ (ಉದ್ಯೋಗ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರನ್ನು ಈ ಭೂಮಿಯಲ್ಲಿ ಇವನು ಸುಲಭ, ಸಹಿತ್ಯಾಸಕ್ತನು, ಮಂಗಳ ಕಾರ್ಯ ನಿರತ, ಅಪಾರಮಹಿಮನು, ವಂಶಕ್ಕೆ ತಿಲಕದಂತಿರುವವನು; ಇವನ ನಡೆ ನುಡಿಗಳಿಗೆ ಯಾವ ಹೋಲಿಕೆಯೂ ಇಲ್ಲ; ದೈವ ನಿಷ್ಠನು, ಪುಣ್ಯಕಾರ್ಯಗಳ ಸಾಗರ, ಸತ್ಕುಲವಂತನು, ವಿದ್ಯಾವಂತನು, ಕರುಣಾಸಾಗರನು, ಆಶ್ಚರ್ಯಕರವಾದ ಯುಕ್ತಿಯುಳ್ಳವನು ಎಂದು ಜಗತ್ತು ಹೊಗಳುತ್ತಿದ್ದರೆ ಅದೇ ಸ್ವರ್ಗ.

ಅರ್ಥ:
ಸುಲಭ: ಷ್ಟವಲ್ಲದುದು, ಸಲೀಸು; ಸಾಹಿತ್ಯ: ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆ; ಮಂಗಳ: ಶುಭ; ನಿಲಯ: ಆವಾಸ, ಸ್ಥಾನ; ಅಗಣಿತ: ಎಣಿಕೆಗೆ ಸಿಲುಕದ; ಮಹಿಮ: ಹಿರಿಮೆ ಯುಳ್ಳವನು; ಅನ್ವಯ:ವಂಶ; ತಿಲಕ: ಶ್ರೇಷ್ಠ; ಅನುಪಮ: ಉತ್ಕೃಷ್ಟವಾದುದು; ಚರಿತ: ಇತಿಹಾಸ; ದೈವಾಪರ: ದೇವರ ಬಗ್ಗೆ ನಿಷ್ಠೆಯುಳ್ಳವನು; ಪುಣ್ಯ: ಸದಾಚಾರ, ಸದ್ವರ್ತನೆ; ನಿಧಿ: ಸಂಪತ್ತು, ಹುದುಗಿಟ್ಟ ಧನ; ಕುಲ:ವಂಶ; ಕೋವಿದ: ವಿದ್ವಾಂಸ; ಕರುಣ: ದಯೆ; ಜಲಧಿ: ಸಾಗರ; ಕೌತುಕ: ಆಶ್ಚರ್ಯಕರವಾದ ಸಂಗತಿ; ಯುಕ್ತಿ: ಬುದ್ಧಿ; ಇಳೆ: ಭೂಮಿ; ಹೊಗಳು: ಪ್ರಶಂಶಿಸು; ಸ್ವರ್ಗ: ನಾಕ;

ಪದವಿಂಗಡಣೆ:
ಸುಲಭನ್+ಅತಿ +ಸಾಹಿತ್ಯ+ ಮಂಗಳ
ನಿಲಯನ್+ಅಗಣಿತ+ ಮಹಿಮನ್+ಅನ್ವಯ
ತಿಲಕನ್+ಅನುಪಮಚರಿತ+ ದೈವಾಪರನು+ ಪುಣ್ಯನಿಧಿ
ಕುಲಯುತನು +ಕೋವಿದನು +ಕರುಣಾ
ಜಲಧಿ +ಕೌತುಕ+ ಯುಕ್ತಿವಿದನ್+ಎಂದ್
ಇಳೆ+ಹೊಗಳುತಿರಲ್+ಅದುವೆ +ಕೇಳೈ +ಸ್ವರ್ಗ +ತಾನೆಂದ

ಅಚ್ಚರಿ:
(೧) ಜಲಧಿ, ನಿಧಿ – ಪ್ರಾಸ ಪದ
(೨) ‘ಕ’ಕಾರದ ನಾಲ್ಕು ಪದಗಳು – ಕುಲಯುತನು, ಕೋವಿದನು, ಕರುಣಾಜಲಧಿ, ಕೌತುಕ