ಪದ್ಯ ೬೦: ಅರ್ಜುನನನ್ನು ಯಾರು ಕೊಂಡಾಡಿದರು?

ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ (ಅರಣ್ಯ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದೇವತೆಗಳು ನನ್ನ ವಿಜಯವನ್ನು ಕೊಂಡಾಡಿದರು, ದೇವರ್ಷಿಗಳು ನನ್ನನ್ನು ಆಶೀರ್ವದಿಸಿದರು, ನಿಮ್ಮ ಕರುಣ ಕಟಾಕ್ಷಗಳ ಬಲದಿಂದ ಶತ್ರುಗಳ ಸಂತೋಷ ಸಾಗರವನ್ನು ನನ್ನ ಬಾಣಗಳು ವಡಬಾಗ್ನಿಯಂತೆ ಕರಿನಾಲಗೆಯಿಂದ ಕುಡಿದು ಹಾಕದೆ ಬಿದುವುದೇ? ಎಂದು ಅರ್ಜುನನು ಯುಧಿಷ್ಠಿರನಿಗೆ ಹೇಳಿದನು.

ಅರ್ಥ:
ಸುರ: ದೇವತೆ; ಕೊಂಡಾಡು: ಹೊಗಳು; ಸುರಮುನಿ: ದೇವರ್ಷಿ; ಆಶೀರ್ವಾದ: ಹರಕೆ, ಶುಭನುಡಿ; ವಿಸ್ತರ; ಹರಹು; ಫಲ: ಪ್ರಯೋಜನ; ಭವತ್: ನಿಮ್ಮ; ಕರುಣ: ದಯೆ; ಅಂಬಕ: ಕಣ್ಣು; ಆಲೋಕ: ನೋಟ; ಅರಿ: ವೈರಿ; ಸುಭಟ: ಸೈನಿಕ; ಸಂತೋಷ: ಹರ್ಷ; ಸಾಗರ: ಸಮುದ್ರ; ಸುರಿ: ವರ್ಷಿಸು; ಸರಳು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಸ್ಫುರಣ: ಹೊಳಪು; ಮೇಘ: ಮೋಡ; ಜ್ವಾಲೆ: ಬೆಂಕಿ; ಜಾಲ: ಬಲೆ; ಕರಾಳ: ಭಯಂಕರ; ಜಿಹ್ವೆ: ನಾಲಗೆ;

ಪದವಿಂಗಡಣೆ:
ಸುರರು +ಕೊಂಡಾಡಿದರು+ ಸುರಮುನಿ
ವರರ +ಪರಮ+ಆಶೀರ್ವಚೋ+ ವಿ
ಸ್ತರಕೆ+ ಫಲವಿದೆಲಾ+ ಭವತ್+ಕರುಣಾಂಬಕ+ಆಲೋಕ
ಅರಿ+ಸುಭಟ+ ಸಂತೋಷಮಯ +ಸಾ
ಗರವ+ ಸುರಿಯವೆ+ ಸರಳು+ ವಡಬ
ಸ್ಫುರಣ+ ಮೇಘಜ್ವಾಲೆ +ಜಾಲ +ಕರಾಳ +ಜಿಹ್ವೆಯಲಿ

ಅಚ್ಚರಿ:
(೧) ಶತ್ರುಗಳ ನಾಶವಾದರು ಎಂದು ಹೇಳುವ ಪರಿ – ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ