ಪದ್ಯ ೧೩: ಭೀಷ್ಮನನ್ನು ಎದುರಿಸಲು ಯಾರು ಎದುರಾದರು?

ಸೋಲ ಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ (ಭೀಷ್ಮ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸೋಲನ್ನು ತಪ್ಪಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದ ವೀರರನ್ನು ತನ್ನವರಿಮ್ದ ಹೊಡೆದು ಕೆಡವಿಸಿ, ಕಪಿಧ್ವಜವನ್ನು ರಥಕ್ಕೆ ಕಟ್ಟಿಸಿ ಸುತ್ತಮುತ್ತಲಿದ್ದ ಸಾಮಂತರನ್ನು ಕೈಬೀಸಿ ಬರಲು ಸನ್ನೆ ಮಾಡಿ ಕಣ್ಣಲ್ಲಿ ಕಿಡಿಗೆದರಲು, ಮೀಸೆಯನ್ನು ಮೇಲಕ್ಕೆ ತಿರುವಿ, ಹಲ್ಲನ್ನು ಕಚುತ್ತಾ, ಮಹಾರೋಷಭರಿತನೂ ಭಯಂಕರನೂ ಆದ ವೀರ ಪಾರ್ಥನು ಭೀಷ್ಮನನ್ನು ಎದುರಿಸಿ ನಿಂತನು.

ಅರ್ಥ:
ಸೋಲು: ಪರಾಭವ; ಮಿಗಲು: ಹೆಚ್ಚಾಗಲು; ಒಳಸರಿ: ಹಿಂದೆ ಹೋಗು; ಬಿರುದು: ಗೌರವ ಸೂಚಕ ಹೆಸರು; ಬೀಳು: ಕೆಡೆ, ಕುಸಿ; ಕಪಿ: ಹನುಮಂತ; ಹಳವಿಗೆ: ಬಾವುಟ; ಗೋಲು: ಪಕ್ಕ, ಪಾರ್ಶ್ವ; ಎತ್ತು: ಮೇಲೇರು; ಕೆಲ: ಪಕ್ಕ, ಮಗ್ಗುಲು; ಬಲ: ಸೈನ್ಯ; ಮನ್ನೆಯ: ಮೆಚ್ಚಿನ; ಕೈ: ಹಸ್ತ; ವೀಸು: ತೂಗುವಿಕೆ; ಆಲಿ: ಕಣ್ಣು; ಕಿಡಿ: ಬೆಂಕಿ; ಸೂಸು: ಹರಡು; ಮೇಲು: ಮೇಲಕ್ಕೆ; ತಿರುಹು: ತಿರುಗಿಸು; ಔಡು: ಹಲ್ಲಿನಿಂದ ಕಚ್ಚು; ಕರಾಳ: ಭಯಂಕರ; ರೋಷ: ಕೋಪ; ಮಹೋಗ್ರ: ಬಹಳ ಪ್ರಚಂಡ, ಕೋಪಿಷ್ಠ; ವೀರ: ಪರಾಕ್ರಮಿ; ಇದಿರು: ಎದುರು;

ಪದವಿಂಗಡಣೆ:
ಸೋಲ+ ಮಿಗಲ್+ಒಳಸರಿವ +ಬಿರುದರ
ಬೀಳ+ಕೆಡಹಿಸಿ +ಕಪಿಯ +ಹಳವಿಗೆ
ಗೋಲನೆತ್ತಿಸಿ+ ಕೆಲಬಲದ+ ಮನ್ನೆಯರ +ಕೈವೀಸಿ
ಆಲಿಯಲಿ +ಕಿಡಿ +ಸೂಸೆ +ಮೀಸೆಯ
ಮೇಲು+ತಿರುಹುತಲ್+ಔಡುಗಚ್ಚಿ+ ಕ
ರಾಳರೋಷ+ ಮಹೋಗ್ರ+ವೀರನು+ ಪಾರ್ಥನ್+ಇದಿರಾದ

ಅಚ್ಚರಿ:
(೧) ಅರ್ಜುನನ ಚಿತ್ರಣ – ಆಲಿಯಲಿ ಕಿಡಿ ಸೂಸೆ ಮೀಸೆಯ ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ