ಪದ್ಯ ೪೯: ದ್ಯೂತದಾಟದಲ್ಲಿ ಇಬ್ಬರು ಹೇಗೆ ಸಾರಿದರು?

ಹೇಮಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು (ಸಭಾ ಪರ್ವ, ೧೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮರಾಯನು ಬಂಗಾರದ ಭಾರ (ಇಪ್ಪತ್ತು ತೊಲ) ದ ರತ್ನಗಳು ಪಣವೆನ್ನಲು, ಕೌರವನು ಸಹ ಅಷ್ಟು ಹಣವನ್ನು ಹೂಡಿದನು. ಧರ್ಮಜ, ಶಕುನಿಗಳು ಕಾಯಿಗಳನ್ನು ನಡೆಸಿದರು. ಜೂಜಿನ ತಾಮಸದಲ್ಲಿ ಇಬ್ಬರ ಮನಸ್ಸೂ ಕುಣಿದಾಡಿತು.

ಅರ್ಥ:
ಹೇಮ: ಚಿನ್ನ; ಭಾರ: ಹೊರೆ; ವಿಮಲ: ನಿರ್ಮಲ; ರತುನ: ರತ್ನ, ಬೆಲೆಬಾಳುವ ಮಣಿ; ಸ್ತೋಮ: ಗುಂಪು; ಪಣ: ಜೂಜಿಗೆ ಒಡ್ಡಿದ ವಸ್ತು; ಒಡ್ಡು: ನೀಡು, ಜೂಜಿನಲ್ಲಿ ಒಡ್ಡುವ ಹಣ; ಹೆಸರಿಸಿದ: ಹೇಳಿದ; ಧನ: ಐಶ್ವರ್ಯ, ಸಂಪತ್ತು; ಮಹಿಪ: ರಾಜ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಗ್ರಾಮ: ಸಂಗೀತದ ಸಪ್ತಸ್ವರಗಳಲ್ಲಿ ಷಡ್ಜ, ಮಧ್ಯಮ ಮತ್ತು ಗಾಂಧಾರವೆಂಬ ಮೂರು ಗುಂಪು; ಕೆದರು: ಚೆದರು, ಹರಡು; ದ್ಯೂತ: ಜೂಜು; ತಾಮಸ: ಅಂಧಕಾರ; ಉಬ್ಬೆದ್ದು: ಕುತೂಹಲ; ಹುಬ್ಬು: ಕಣ್ಣಿನ ಮೇಲಿರುವ ರೋಮಾವಳಿ; ಎದ್ದು: ಮೇಲೇಳು; ಕರಣ: ಕಿವಿ, ಮನಸ್ಸು, ಜ್ಞಾನೇಂದ್ರಿಯ; ವೃತ್ತಿ: ಸ್ಥಿತಿ;

ಪದವಿಂಗಡಣೆ:
ಹೇಮಭಾರದ +ವಿಮಲ +ರತುನ
ಸ್ತೋಮವಿದೆ+ ಪಣವೆನಲು+ ಕೌರವ
ಭೂಮಿಪತಿ+ಒಡ್ಡಿದನು+ ಧರ್ಮಜ+ ಹೆಸರಿಸದ +ಧನವ
ಆ +ಮಹಿಪ +ಶಕುನಿಗಳು+ ಸಾರಿ
ಗ್ರಾಮವನು+ ಕೆದರಿದರು +ದ್ಯೂತದ
ತಾಮಸದಲ್+ಉಬ್ಬೆದ್ದುದ್+ಇಬ್ಬರ +ಕರಣ +ವೃತ್ತಿಗಳು

ಅಚ್ಚರಿ:
(೧) ಭೂಮಿಪತಿ, ಮಹಿಪ – ಸಮನಾರ್ಥಕ ಪದ
(೨) ದ್ಯೂತದಲ್ಲಿ ತಲ್ಲೀನರಾದರ ಎಂದು ಹೇಳಲು – ಸಾರಿ ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು