ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ
ದದಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ (ದ್ರೋಣ ಪರ್ವ, ೧೫ ಸಂಧಿ, ೪೬ ಪದ್ಯ)
ತಾತ್ಪರ್ಯ:
ಎಡಗೈಯಿಂದ ವೀಳೆಯವನ್ನು ತೆಗೆದುಕೊಂಡು, ಧರ್ಮಜನಿಗೆ ನಮಸ್ಕರಿಸಿ, ಎಡಬಲಕ್ಕೆ ತಿರುಗಿ ನೋಡಿದನು. ಅಸಂಖ್ಯಾತ ರಾಕ್ಷಸರು ಜೀಯಾ ಎಂದು ಸಿಡಿಲಿನ ಸೆರೆ ಬಿಟ್ಟಂತೆ ತೋಳನ್ನು ತಟ್ಟಿ, ಅಬ್ಬರಿಸಿ ಯುದ್ಧಕ್ಕೆ ನಡೆಯಲು ಆದಿಶೇಷ ಕೂರ್ಮರಿಗೆ ಮೇಲುಸಿರಾಯಿತು.
ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಝೊಂಪಿಸು:ಭಯಗೊಳ್ಳು, ಬೆಚ್ಚಿಬೀಳು; ವೀಳೆ: ತಾಂಬೂಲ; ಕೊಂಡು: ಪಡೆದು; ಕೈ: ಹಸ್ತ; ಎರಗು: ಬೀಳು; ಮದ: ಅಹಂಕಾರ; ಮುಖ: ಆನನ; ನೋಡು: ವೀಕ್ಷಿಸು; ರಕ್ಕಸ: ರಕ್ತ; ಕೋಟಿ: ಅಸಂಖ್ಯಾತ; ಜೀಯ: ಒಡೆಯ; ಸಿಡಿಲು: ಅಶನಿ; ಸೆರೆ: ಬಂಧನ; ಭುಜ: ಬಾಹು; ಹೊಡೆ: ಏಟು, ಹೊಡೆತ; ಮುಂಚೆ: ಮುಂದೆ; ದೈತ್ಯ: ದಾನವ; ಉಲಿ: ಶಬ್ದ; ಅಡಿಯಿಡು: ಹೆಜ್ಜೆಹಾಕು, ಮುಂದುವರಿ; ಉಸುರು: ಮಾತನಾಡು; ಪ್ರಾಣ; ಮಸಗು: ಹರಡು; ಕೆರಳು; ಫಣಿಪ: ಆದಿಶೇಷ; ಕಮಠ: ಕೂರ್ಮ;
ಪದವಿಂಗಡಣೆ:
ಜಡಿದು +ಝೊಂಪಿಸಿ +ವೀಳೆಯವ +ಕೊಂಡ್
ಎಡದ +ಕಯ್ಯಿಂದ್+ಎರಗಿ +ಮದ+ಮುಖನ್
ಎಡಬಲನ +ನೋಡಿದರೆ +ರಕ್ಕಸಕೋಟಿ +ಜೀಯೆನುತ
ಸಿಡಿಲ +ಸೆರೆ +ಬಿಟ್ಟಂತೆ +ಭುಜವನು
ಹೊಡೆದು +ಮುಂಚಿತು +ದೈತ್ಯ+ಬಲವ್+ಉಲಿದ್
ಅಡಿಯಿಡಲು +ಮೇಲುಸುರು +ಮಸಗಿತು +ಫಣಿಪ +ಕಮಠರಿಗೆ
ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಸೆರೆ ಬಿಟ್ಟಂತೆ ಭುಜವನು ಹೊಡೆದು ಮುಂಚಿತು ದೈತ್ಯಬಲ