ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವಿವರಿಸಿದನು?

ಬೀಳುಕೊಂಡನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಹೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ (ಗದಾ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಮ್ನಿಯಿಂದ ಬೀಳ್ಕೊಂಡು ಅರಸನನ್ನು ಹುಡುಕುತ್ತಾ ಹೋಗುವಾಗ ಸಾಲು ಹೆಣಗಳೊಟ್ಟಿಲ ಮೇಲೆ, ತಲೆಯಿಲ್ಲದ ಶರೀರಗಳ ಪಕ್ಕದಲ್ಲಿ ರಕ್ತ ಪೂರಿತವಾದ ಜಾಗದಲ್ಲಿ ಏರುತ್ತಾ, ಬೀಳುತ್ತಾ ನಿಲ್ಲುತ್ತಾ ಬಳಲುತ್ತಾ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಕೌರವನನ್ನು ಕಂಡು ಅವನೊಡನೆ ದ್ವೈಪಾಯನ ಸರೋವರದ ದಡದವರೆಗೆ ಹೋದೆನು.

ಅರ್ಥ:
ಬೀಳುಕೊಂಡು: ತೆರಳು; ಮುನಿ: ಋಷಿ; ಅವನೀಪಾಲಕ: ರಾಜ; ಅರಸು: ಹುಡುಕು; ಕಳ: ಯುದ್ಧಭೂಮಿ; ಸಾಲ: ಗುಂಪು; ಹೆಣ: ಜೀವವಿಲ್ಲದ ಶರೀರ; ಕಬಂಧ: ತಲೆಯಿಲ್ಲದ ದೇಹ, ಮುಂಡ; ರುಧಿರ: ರಕ್ತ; ಪೂರ: ಪೂರ್ಣ; ಬೀಳುತೇಳು: ಹತ್ತು, ಇಳಿ; ನಿಲು: ನಿಲ್ಲು, ತಡೆ; ಬಳಲು: ಆಯಾಸಗೊಳ್ಳು; ಕಾಲುನಡೆ: ಪಾದದಿಂದ ಚಲಿಸುತ್ತಾ; ಸುಳಿ: ಕಾಣಿಸಿಕೊಳ್ಳು; ಭೂಪಾಲಕ: ರಾಜ; ಕಂಡು: ನೋಡು; ಬಂದೆ: ಆಗಮಿಸು; ಕೊಳ: ಸರೋವರ; ತಡಿ: ದಡ;

ಪದವಿಂಗಡಣೆ:
ಬೀಳುಕೊಂಡನು +ಮುನಿಯನ್+ಅವನೀ
ಪಾಲಕನನ್+ಅರಸಿದೆನು +ಕಳನೊಳು
ಸಾಲ +ಹೆಣನೊಟ್ಟಿಲ+ ಕಬಂಧದ +ರುಧಿರ+ಪೂರದಲಿ
ಬೀಳುತೇಳುತ +ನಿಲುತ +ಬಳಲಿದು
ಕಾಲುನಡೆಯಲಿ +ಸುಳಿವ +ಕುರು+ ಭೂ
ಪಾಲಕನ +ಕಂಡೊಡನೆ +ಬಂದೆನು +ಕೊಳನ +ತಡಿಗಾಗಿ

ಅಚ್ಚರಿ:
(೧) ಅವನೀಪಾಲಕ, ಭೂಪಾಲಕ – ಸಮಾನಾರ್ಥಕ ಪದ
(೨) ರಣರಂಗದ ಸ್ಥಿತಿ – ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ

ಪದ್ಯ ೩೭: ಯುದ್ಧವನ್ನು ಮಳೆಗಾಳಕ್ಕೆ ಹೇಗೆ ಹೋಲಿಸಬಹುದು?

ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ (ಭೀಷ್ಮ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕತ್ತಿಗಳ ಹೊಳಪೇ ಮಿಂಚು, ಕತ್ತಿಗಳ ತಾಕಲಾಟ ಸಿಡಿಲು, ರಕ್ತದ ಮಳೆಯಿಂದ ಬಂದ ಪ್ರವಾಹ, ತೋಳು ಆಚಿ ಕುಣಿಯುವ ಮುಂಡಗಳೇ ಗರಿಗೆದರಿದ ನವಿಲುಗಳು, ಮಿದುಗ್ಳುಗಳ ತೆಕ್ಕೆಗಳೇ ಹಂಸಗಳು, ಹೆಣಗಳ ಕಾಡು ಚಿಗುರಿದಂತಿರಲು ಯುದ್ಧವೆಂಬ ಮಳೆಗಾಲ ಶೋಭಿಸಿತು.

ಅರ್ಥ:
ಕಡಿತಲೆ: ಖಡ್ಗ; ಮಿಂಚು: ಹೊಳಪು, ಕಾಂತಿ; ಹೊಯ್ಲು: ಹೊಡೆತ; ಸಿಡಿಲು: ಅಶನಿ; ರಕ್ತ: ನೆತ್ತರು; ಪ್ರವಾಹ: ರಭಸ; ಕಡುವಳೆ: ಜೋರಾದ ಮಲೆ; ನೃತ್ಯ: ನಾಟ್ಯ; ಕಬಂಧ: ತಲೆಯಿಲ್ಲದ ದೇಹ, ಮುಂಡ; ಸೋಗು: ನಟನೆ, ವೇಷ; ನವಿಲು: ಮಯೂರ; ಬಿಡು: ತೊರೆ; ಮಿದುಳು: ತಲೆ; ಹೊರಳಿ: ತಿರುವು, ಬಾಗು; ಹಂಸ: ಮರಾಲ; ನವ: ನವೀನ, ಹೊಸ; ಖಂಡ: ಚೂತು, ತುಂಡು; ಹೆಣ: ಜೀವವಿಲ್ಲದ ಶರೀರ; ಅಡವಿ: ಕಾಡು; ತಳಿತ: ಚಿಗುರಿದ; ಮೆರೆ: ಶೋಭಿಸು; ಸಂಗ್ರಾಮ: ಯುದ್ಧ; ಕಾರ್ಗಾಲ: ಮಳೆಗಾಲ;

ಪದವಿಂಗಡಣೆ:
ಕಡಿತಲೆಯ +ಮಿಂಚುಗಳ +ಹೊಯ್ಲಿನ
ಸಿಡಿಲುಗಳ +ರಕ್ತ+ಪ್ರವಾಹದ
ಕಡುವಳೆಯ +ನೃತ್ಯತ್+ಕಬಂಧದ +ಸೋಗೆ+ನವಿಲುಗಳ
ಬಿಡುಮಿದುಳ +ಹೊರಳಿಗಳ +ಹಂಸೆಯ
ನಡಹುಗಳ+ ನವಖಂಡದೊಳು +ಹೆಣನ್
ಅಡವಿ +ತಳಿತಿರೆ+ ಮೆರೆದುದೈ +ಸಂಗ್ರಾಮ+ ಕಾರ್ಗಾಲ

ಅಚ್ಚರಿ:
(೧) ಯುದ್ಧವನ್ನು ಮಳೆಗಾಲಕ್ಕೆ ಹೋಲಿಸುವ ಕವಿಯ ಕಲ್ಪನೆ – ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ

ಪದ್ಯ ೩೩: ಯುದ್ಧಮಾಡುವವರು ಹೇಗೆ ಕಾಣಿಸಿದರು?

ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳನಿಡುವ ಸಡಿಲದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು (ಭೀಷ್ಮ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ತಲೆ ಉರುಳಿ ಬೀಳುತ್ತಿರುವಾಗ ಅದನ್ನೇ ಹಿಡಿದು ಶತ್ರುಗಳತ್ತ ಎಸೆಯುವ, ರುಂಡ ಕತ್ತರಿಸಿ ಹೋದುದನ್ನು ತಿಳಿಯದೆ, ಮುಂಡದಿಂದಲೇ ಮುನ್ನುಗ್ಗುವ, ಗುರಾಣಿಗಳು ಕತ್ತಿಗಳು ಮುರಿದು ತಲೆ ಕತ್ತರಿಸಿ ಬೀಳುವ ಸೈನಿಕರು, ಕಬಂಧದಿಂದಲೇ ಯುದ್ಧಮಾಡುವವರು ಕಾಣಿಸಿದರು.

ಅರ್ಥ:
ಉರುಳು: ಹೊರಳಾಡು; ಬೀಳು: ಕುಸಿ; ತಲೆ: ಶಿರ; ತಿರುಹು: ತಿರುಗಿಸು; ರಿಪು: ವೈರಿ; ಸಡಿಲ:ಬಿಗಿಯಿಲ್ಲದಿರುವುದು; ಶಿರ: ತಲೆ; ಅರಿ: ತಿಳಿ; ಮುಂಡ: ತಲೆಯಿಲ್ಲದ ದೇಹ; ಇದಿರು: ಎದುರು; ಬೀದಿ: ರಸೆ; ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಹೊಳ್ಳಿಸು: ಟೊಳ್ಳು ಮಾಡು; ಖಡುಗ: ಕತ್ತಿ; ಖಂಡಿಸು: ಕಡಿ, ಕತ್ತರಿಸು; ಕೊರಳು: ಗಂಟಲು; ದೆಸೆ: ದಿಕ್ಕು; ಸೇನೆ: ಸೈನ್ಯ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ತಿವಿ: ಚುಚ್ಚು; ಕಬಂಧ: ತಲೆಯಿಲ್ಲದ ದೇಹ, ಮುಂಡ; ಅತುಳ: ಬಹಳ; ಭುಜಬಲ: ಪರಾಕ್ರಮಿ;

ಪದವಿಂಗಡಣೆ:
ಉರುಳಿ +ಬೀಳುವ +ತಮ್ಮ +ತಲೆಗಳ
ತಿರುಹಿ +ರಿಪುಗಳನ್+ಇಡುವ +ಸಡಿಲದ
ಶಿರವನ್+ಅರಿಯದೆ +ಮುಂಡದ್+ಇದಿರಲಿ+ ಬೀದಿವ್+ಅರಿವರಿವ
ಹರಿಗೆ +ಹೊಳ್ಳಿಸೆ +ಖಡುಗ+ ಖಂಡಿಸೆ
ಕೊರಳರಿಯೆ +ದೆಸೆದೆಸೆಯ +ಸೇನೆಯೊಳ್
ಉರವಣಿಸಿ +ತಿವಿದರು +ಕಬಂಧದೊಳ್+ಅತುಳಭುಜಬಲರು

ಅಚ್ಚರಿ:
(೧) ಚೆಂಡಿನಂತೆ ಶಿರವನ್ನು ಆಡುವ ದೃಶ್ಯ – ಉರುಳಿ ಬೀಳುವ ತಮ್ಮ ತಲೆಗಳ ತಿರುಹಿ ರಿಪುಗಳನಿಡುವ