ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಲ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು (ದ್ರೋಣ ಪರ್ವ, ೧೦ ಸಂಧಿ, ೫೯ ಪದ್ಯ)
ತಾತ್ಪರ್ಯ:
ಕೌರವ ಸೈನ್ಯದಲ್ಲಿ ಕೋಲಾಹಲವಾಯಿತು. ವೀರರೆಲ್ಲರೂ ಒಗ್ಗೂಡಿದರು. ಕತ್ತಿ, ಛತ್ರ, ಚಾಮರಗಳು ಒಂದಾದವು. ತುದಿಬೆರಳ ಆಯುಧದ ಸದ್ದು, ಕೆಂಪೇರಿದ ಕಣ್ಣುಗಳು, ಕುಣಿವ ಮೀಸೆಗಳು ಕರ್ಣಾದಿ ಸೇನಾನಾಯಕರು ಅರ್ಜುನನತ್ತ ಹೋರಾಡಲು ಹೊರಟರು.
ಅರ್ಥ:
ಕದಡು: ಕಲಕು; ಬಲ: ಶಕ್ತಿ, ಸೈನ್ಯ; ಜಲಧಿ: ಸಾಗರ; ಸುಭಟ: ಸೈನಿಕರು; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಹೊಳೆ: ಕಾಂತಿ, ಹೊಳಪು; ಆಯುಧ: ಶಸ್ತ್ರ; ಹೊದಕು: ಮುಸುಕು; ಸತ್ತಿಗೆ: ಕೊಡೆ, ಛತ್ರಿ; ಸೂಸು: ಹರಡು; ಚಮರ: ಚಾಮರ; ಸೀಗುರಿ: ಚಾಮರ; ತುದಿ: ಅಗ್ರ, ಮೇಲ್ಭಾಗ; ವೆರಳು: ಬೆರಳು ಕಿರುದನಿ: ಚಿಕ್ಕದಾದ ಶಬ್ದ; ಕೆಂಪು: ರಕ್ತವರ್ಣ; ಕಂಗಳು: ಕಣ್ಣು, ನಯನ; ಕದಡು: ಕಲಕು; ಕುಣಿ: ನರ್ತಿಸು; ಕದನ: ಯುದ್ಧ; ಕಲಿ: ಶೂರ; ಕವಿ: ಆವರಿಸು; ನಾಯಕ: ಒಡೆಯ;
ಪದವಿಂಗಡಣೆ:
ಕದಡಿತೀ +ಬಲಜಲಧಿ+ ಸುಭಟರು
ಹೊದರುಗಟ್ಟಿತು +ಹೊಳೆವಡ್+ಆಯುಧ
ಹೊದಕೆಗಳ +ಸತ್ತಿಗೆಯ +ಸೂಸುವ +ಚಮರ +ಸೀಗುರಿಯ
ತುದಿವೆರಳ +ಕಿರುದನಿಯ +ಕೆಂಪಿನ
ಕದಡುಗಂಗಳ+ ಕುಣಿವ+ಮೀಸೆಯ
ಕದನ+ಕಲಿಗಳು +ಕವಿದರೀ+ ಕರ್ಣಾದಿ +ನಾಯಕರು
ಅಚ್ಚರಿ:
(೧) ಕ ಕಾರದ ಸಾಲು ಪದ – ಕಿರುದನಿಯ ಕೆಂಪಿನ ಕದಡುಗಂಗಲ ಕುಣಿವಮೀಸೆಯ ಕದನಗಲಿಗಳು ಕವಿದರೀ ಕರ್ಣಾದಿ
(೨) ಸೈನ್ಯದ ವಿಸ್ತಾರವನ್ನು ವರ್ಣಿಸುವ ಪರಿ – ಬಲಜಲಧಿ