ಪದ್ಯ ೪೯: ಮಂದರ ಪರ್ವತದ ಮೇಲೆ ಅರ್ಜುನನ ಆಕ್ರಮಣ ಹೇಗಿತ್ತು?

ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ಸೋಡಬೇಕೆಂದರ್ಜುನನ ಸೇನೆ
ಒದಗಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ (ಸಭಾ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಂದರ ಪರ್ವತವನ್ನು ನೋಡಲು ಅರ್ಜುನನು ಹೀಗೆ ಯೋಚಿಸಿದನು, “ಈ ಪರ್ವತವಲ್ಲವೇ ಸಮುದ್ರಮಥನದಲ್ಲಿ ಕಡೆಗೋಲಾಗಿದ್ದು, ಇದರ ಸೊಬಗನ್ನು ನೋಡಲೇಬೇಕು”, ಎಂದು ಯೋಚಿಸಿ ಸೈನ್ಯಕ್ಕೆ ಆದೇಶವಿಟ್ಟು ಅವರ ಜೊತೆ ಅವನು ಹತ್ತಿದನು. ಅಲ್ಲಿ ಕೋಟೆಗಳಲ್ಲೂ, ಚಿಕ್ಕ ಬೆಟ್ಟಗಳಲ್ಲೂ ರಾಜರಿದ್ದು, ಅವರೊಂದಿಗೆ ಅರ್ಜುನನು ಯುದ್ಧಮಾಡಿದನು.

ಅರ್ಥ:
ಕಡೆಗೋಲು: ಮಂತು; ಕಡೆ: ಅಲ್ಲಾಡಿಸು, ಮಥಿಸು; ಉದಧಿ: ಸಮುದ್ರ; ಮಹಾ: ಶ್ರೇಷ್ಠ; ಗಿರಿ: ಬೆಟ್ಟ; ಬಿಂಕ: ಜಂಬ; ನೋಡು: ವೀಕ್ಷಿಸು; ಸೇನೆ: ಸೈನ್ಯ; ಒದಗು: ಉಂಟಾಗು, ದೊರಕು; ಹತ್ತು: ಏರು; ನಡು: ಮಧ್ಯೆ; ದುರ್ಗ: ಕೋಟೆ; ಬೆಟ್ಟ: ಗಿರಿ; ನೃಪ: ರಾಜ; ಆಹವ: ಯುದ್ಧ; ಚೂಣಿ: ಮೊದಲು;

ಪದವಿಂಗಡಣೆ:
ಇದುವೆ +ಕಡೆಗೋಲಾಯ್ತು+ ಕಡೆವಂದ್
ಉದಧಿಯನು+ ತಾನಿದು +ಮಹಾ+ಗಿರಿ
ಯಿದರ+ ಬಿಂಕವ +ಸೋಡಬೇಕೆಂದ್+ಅರ್ಜುನನ+ ಸೇನೆ
ಒದಗಿ +ಹತ್ತಿತು +ನಡುವಣರೆ +ದು
ರ್ಗದಲಿ +ಬೆಟ್ಟಂಗಳಲಿ+ ನೃಪರ್+
ಇದ್ದುದು +ಮಹ+ಆಹವವ್ +ಆಯ್ತು +ಪಾರ್ಥನ +ಚೂಣಿ +ಅವರೊಡನೆ

ಅಚ್ಚರಿ:
(೧) ಮಹಾಗಿರಿ, ಮಹಾಹವ – ಮಹಾ ಪದದ ಬಳಕೆ
(೨) ಪರ್ವತಕ್ಕು ಜಂಬವಿರುತ್ತದೆ ಎಂದು ‘ಬಿಂಕ’ ಪದದ ಬಳಕೆ