ಪದ್ಯ ೩೭: ಮಂತ್ರಿಗಳು ಯಾವ ಅಭಿಪ್ರಾಯ ಪಟ್ಟರು?

ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲ್ಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು (ದ್ರೋಣ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನನ್ನು ತಡೆದು ನಿಲ್ಲಿಸುವವರೇ ಇಲ್ಲ. ಪಾಂಡವ ವೀರರೆಲ್ಲರೂ ಭಂಗಿತರಾದರು. ಯುದ್ಧದ ವಿಜಯಲಕ್ಷ್ಮಿ ಸುಯೋಧನನ ಕಡೆಗೆ ಸಂತೋಷದ ಕುಡಿನೋಟ ಬೀರಿದ್ದಾಳೆ. ಈಗ ಮುಮ್ದೆ ನಿಮ್ತು ಯುದ್ಧಮಾದುವವರಾರು? ನಾವು ಗೆಲ್ಲುವುದಾದರೂ ಹೇಗೆ? ಇದ್ದ ವಿಷಯವನ್ನು ದೊರೆಗೆ ಬಿನ್ನಹಮಾಡಿರೆಂದು ಎಲ್ಲಾ ಮಂತ್ರಿಗಳು ಹೇಳಿದರು.

ಅರ್ಥ:
ಅಂಗವಿಸು: ಬಯಸು; ಭಟ: ಸೈನಿಕ; ಭಂಗ: ಮುರಿಯುವಿಕೆ, ಚೂರು; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಸೊಗಸು: ಎಲುವು; ಕಡೆಗಣ್ಣು: ಓರೆನೋಟ; ಸೂಸು: ಎರಚು, ಚಲ್ಲು, ಚಿಮ್ಮು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಅಂಗ: ಭಾಗ; ಜಯ: ಗೆಲುವು; ಹದ: ಸ್ಥಿತಿ; ಅರಸ: ರಾಜ; ಬಿನ್ನಹ: ಕೋರಿಕೆ; ನಿಖಿಳ: ಎಲ್ಲಾ; ಮಂತ್ರಿ: ಸಚಿವ;

ಪದವಿಂಗಡಣೆ:
ಅಂಗವಿಸುವವರಿಲ್ಲ +ಭಟರಿಗೆ
ಭಂಗವಿಕ್ಕಿತು +ಕೌರವೇಂದ್ರಗೆ
ಸಂಗರದ +ಸಿರಿ +ಸೊಗಸಿನಲಿ +ಕಡೆಗಣ್ಣ+ ಸೂಸಿದಳು
ಮುಂಗುಡಿಯಲ್+ಇನ್ನಾರು +ನಮಗಾ
ವಂಗದಲಿ +ಜಯವೇನು +ಹದನ್+ಅರ
ಸಂಗೆ +ಬಿನ್ನಹ +ಮಾಡಿ+ಎಂದರು +ನಿಖಿಳ +ಮಂತ್ರಿಗಳು

ಅಚ್ಚರಿ:
(೧) ಅಂಗ, ಭಂಗ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸಂಗರದ ಸಿರಿ ಸೊಗಸಿನಲಿ

ಪದ್ಯ ೧೪: ಗಣಿಕೆಯರ ಪ್ರಾಬಲ್ಯವೇನು?

ಬಲುಮೊಲೆಯ ಸೋಂಕಿನಲಿ ಶಾಂತರ
ತಲೆಕೆಳಗ ಮಾಡುವೆವು ಕಡೆಗ
ಣ್ಣಲಗಿನಲಿ ಕೊಯ್ದೆತ್ತುವೆವು ವಿಜಿತೇಂದ್ರಿಯರ ಮನವ
ಎಳೆನಗೆಗಳಲಿ ವೇದ ಪಾಠರ
ಕಲಕಿ ಮಿಗೆ ವೇದಾಂತ ನಿಷ್ಠರ
ಹೊಳಸಿ ದುವ್ವಾಳಿಸುವೆವೆಮಗಿದಿರಾರು ಲೋಕದಲಿ (ಅರಣ್ಯ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಿರಿದಾದ ಮೊಲೆಗಳನ್ನು ಸೋಕಿಸಿ ಶಾಂತರಾದವರನ್ನು ತಲೆಕೆಳಗೆ ಮಾಡುತ್ತೇವೆ, ಜಿತೇಂದ್ರಿಯರ ಮನಸ್ಸನ್ನು ಕಡೆಗಣ್ಣಿನ ನೋಟದ ಕತ್ತಿಯಿಂದ ಕೊಯ್ದು ಎತ್ತುತ್ತೇವೆ, ಎಳೆನಗೆಗಳಿಂದ ವೇದಾಧ್ಯಯನ ಮಾದುವವರ ಮನಸ್ಸನ್ನು ಕಲಕುತ್ತೇವೆ. ವೇದಾಂತ ನಿಷ್ಠರನ್ನು ಚಲಿಸುವಂತೆ ಮಾಡಿ ಅವರ ನಿಷ್ಠೆಯನ್ನು ಓಡಿಸುತ್ತೇವೆ, ಈ ಲೋಕದಲ್ಲಿ ನಮ್ಮೆದುರು ನಿಲ್ಲುವವರಾರು ಎಂದು ತರುಣಿಯರು ಹೇಳಿದರು.

ಅರ್ಥ:
ಬಲು: ದೊಡ್ಡ; ಮೊಲೆ: ಸ್ತನ; ಸೋಂಕು: ತಾಗು, ಮುಟ್ಟು; ಶಾಂತ: ಪಂಚೇಂದ್ರಿಯಗಳನ್ನು ಗೆದ್ದವನು; ತಲೆಕೆಳಗೆ: ಉಲ್ಟ, ಮೇಲು ಕೀಳಾಗಿಸು; ಕಡೆಗಣ್ಣು: ಓರೆನೋಟ; ಅಲಗು: ಕತ್ತಿ; ಕೋಯ್ದು: ಸೀಳು; ಎತ್ತು: ಮೇಲೆ ತರು; ವಿಜಿತೇಂದ್ರಿಯ: ಇಂದ್ರಿಯವನ್ನು ಗೆದ್ದವನು; ಮನ: ಮನಸ್ಸು; ಎಳೆನಗೆ: ಮಂದಸ್ಮಿತ; ವೇದ: ಶೃತಿ; ಪಾಠ: ವಾಚನ; ಕಲಕು: ಅಲುಗಾಡಿಸು; ಮಿಗೆ: ಅಧಿಕ; ವೇದಾಂತ: ಉಪನಿಷತ್ತು; ನಿಷ್ಠ: ಶ್ರದ್ಧೆಯುಳ್ಳವನು; ಹೊಳಸು: ಅತ್ತಿತ್ತ ಓಡಾಡಿಸು; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಇದಿರು: ಎದುರು ಬರುವವ; ಲೋಕ: ಜಗತ್ತು;

ಪದವಿಂಗಡಣೆ:
ಬಲು+ಮೊಲೆಯ +ಸೋಂಕಿನಲಿ +ಶಾಂತರ
ತಲೆಕೆಳಗ +ಮಾಡುವೆವು +ಕಡೆಗ
ಣ್ಣ+ಅಲಗಿನಲಿ +ಕೊಯ್ದ್+ಎತ್ತುವೆವು+ ವಿಜಿತೇಂದ್ರಿಯರ+ ಮನವ
ಎಳೆ+ನಗೆಗಳಲಿ +ವೇದ +ಪಾಠರ
ಕಲಕಿ +ಮಿಗೆ +ವೇದಾಂತ +ನಿಷ್ಠರ
ಹೊಳಸಿ +ದುವ್ವಾಳಿಸುವೆವ್+ಎಮಗಿದಿರಾರು +ಲೋಕದಲಿ

ಅಚ್ಚರಿ:
(೧) ಗಣಿಕೆಯರ ಆಯುಧಗಳು – ಬಲುಮೊಲೆ, ಕಡೆಗಣ್ಣ, ಎಳೆನಗೆ

ಪದ್ಯ ೭: ಗಣಿಕೆಯರು ಯಾವ ಬಲೆಯನ್ನು ಹರಡಿದರು?

ಹೊಕ್ಕರಿವರಾಶ್ರಮದ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ದಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನಲಿ ಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ (ಅರಣ್ಯ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಗಣಿಕೆಯರು ಋಷ್ಯಾಶ್ರಮಗಳನ್ನು ಹೊಕ್ಕು ಅಲ್ಲಿನ ಆಚಾರವಂತರ ಸಮೂಹದ ಮನಸ್ಸಿನ ಕುದುರೆಗೆ ಕಡಿವಾಣವನ್ನು ಹಾಕಿದರು, ಎರಡೂ ಕಡೆ ಲಗಾಮನ್ನೆಳೆದರು. ಆ ಋಷಿಗಳ ಬಲಶಾಲಿಯಾದ ಧೈರ್ಯಕ್ಕೆ ತಮ್ಮ ಕಣ್ನೋಟಗಳೆಂಬ ಬಲೆಗಳನ್ನು ವಿಸ್ತಾರವಾಗಿ ಹರಡಿದರು.

ಅರ್ಥ:
ಹೊಕ್ಕು: ಸೇರು; ಆಶ್ರಮ: ಕುಟೀರ; ತುರುಗು: ಹೆಚ್ಚಾಗು, ಎದುರಿಸು; ಅಂತಃಕರಣ: ಮನಸ್ಸು; ತುರಗ: ಕುದುರೆ; ದುಕ್ಕುಡಿ: ಕಡಿವಾಣ; ತಿರುಹು: ತಿರುಗಿಸು; ವಾಘೆ: ಲಗಾಮು; ಸಿಕ್ಕು: ಪಡೆ; ದಾಳಿ: ಲಗ್ಗೆ; ಧೈರ್ಯ: ಎದೆಗಾರಿಕೆ, ಕೆಚ್ಚು; ದಕ್ಕಡ: ಸಮರ್ಥ, ಬಲಶಾಲಿ; ಮನ: ಮನಸ್ಸು; ಹರಹು: ಹರಡು; ಹಾಯ್ಕು: ಇಡು, ಇರಿಸು; ಕಡೆಗಣ್ಣು: ಕುಡಿನೋಟ; ಬಲೆ: ಜಾಲ; ಮುನಿ: ಋಷಿ; ಮೃಗ: ಪ್ರಾಣಿ; ಆವಳಿ: ಗುಂಪು;

ಪದವಿಂಗಡಣೆ:
ಹೊಕ್ಕರ್+ಇವರ್+ಆಶ್ರಮದ +ತುರುಗಿದ
ತಕ್ಕರ್+ಅಂತಃಕರಣ +ತುರಗಕೆ
ದುಕ್ಕುಡಿಯನ್+ಇಕ್ಕಿದರು +ತಿರುಹಿದರ್+ಎರಡು +ವಾಘೆಯಲಿ
ಸಿಕ್ಕಿದವು +ದಾಳಿಯಲಿ +ಧೈರ್ಯದ
ದಕ್ಕಡರ +ಮನ +ಹರಹಿನಲಿ +ಹಾ
ಯಿಕ್ಕಿದರು +ಕಡೆಗಣ್ಣ+ ಬಲೆಗಳ+ ಮುನಿ +ಮೃಗಾವಳಿಗೆ

ಅಚ್ಚರಿ:
(೧) ಗಣಿಕೆಯರ ಕುಡಿನೋಟದ ವರ್ಣನೆ: ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ

ಪದ್ಯ ೫೪: ಧೀರ, ದಿಟ್ಟ, ಆಚಾರಹೀನನು ಯಾರು?

ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆಯರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರ ಪರನೆ ವಿನೀತನನ್ಯಾ
ಚಾರಯುತನಾಚಾರಹೀನನು ಫಣಿಪ ಕೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ನಹುಷನು ಕೇಳಿದ ಪ್ರಶ್ನೆಗಳಿಗೆ ಯುಧಿಷ್ಠಿರನು ಉತ್ತರಿಸುತ್ತಾ, ಹೆಂಗಳ ಕಡೆಗಣ್ಣಿನ ನೋಟದ ಹೊಡೆತಕ್ಕೆ ಮನಸ್ಸಿನಲ್ಲಿ ಅಳುಕದವನೇ ಧೀರ, ಅವನೇ ಗಟ್ಟಿಗ, ನಾರಿಯರ ಮೋಹದಿಂದ ಉಬ್ಬಿ, ಶಿಷ್ಟರ ನಡತೆಯ ಮೇರೆಯನ್ನು ತಪ್ಪುವವನೇ ವಿಕಾರಿ, ವಿಚಾರವಮ್ತನೇ ವಿನೀತ, ಧರ್ಮಕ್ಕೆ ಸಮ್ಮತವಲ್ಲದ ಬೇರೆಯ ನಡತೆಯುಳ್ಳವನೇ ಆಚಾರಹೀನನೆಂದು ಯುಧಿಷ್ಠಿರ ನಹುಷನಿಗೆ ಹೇಳಿದನು.

ಅರ್ಥ:
ನಾರಿ: ಹೆಣ್ಣು; ಕಡೆಗಣ್ಣು: ಕುಡಿನೋಟ; ಹೊಯ್ಲು: ಹೊಡೆತ; ಧಾರೆ: ರಭಸ; ಅಳುಕು: ಹೆದರು; ಧೀರ: ಶೂರ; ದಿಟ್ಟ: ಗಟ್ಟಿಗ; ಅಬಲೆ: ಹೆಣ್ಣು; ಉಬ್ಬು: ಹಿಗ್ಗು; ಉಬ್ಬುಗವಳ: ದೊಡ್ಡ ತುತ್ತು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ವಿಕಾರಿ:ಮನಸ್ಸಿನ ವಿಕೃತಿ, ಕುರೂಪ; ವಿಚಾರ: ವಿಮರ್ಶೆ, ವಿವೇಕ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಅನ್ಯ: ಬೇರೆ; ಆಚಾರ: ಒಳ್ಳೆಯ ನಡತೆ; ಹೀನ: ಕೆಟ್ಟದು; ಫಣಿಪ: ಹಾವಿನ ಒಡೆಯ; ಕೇಳು: ಆಲಿಸು;

ಪದವಿಂಗಡಣೆ:
ನಾರಿಯರ +ಕಡೆಗಣ್ಣ +ಹೊಯ್ಲಿನ
ಧಾರೆಗ್+ಅಳುಕದನ್+ಆವನ್+ಆತನೆ
ಧೀರನ್+ಆತನೆ +ದಿಟ್ಟನ್+ಅಬಲೆಯರ್+ಉಬ್ಬುಗವಳದಲಿ
ಮೇರೆ+ತಪ್ಪುವನೇ +ವಿಕಾರಿ +ವಿ
ಚಾರ +ಪರನೆ +ವಿನೀತನ್+ಅನ್ಯ
ಆಚಾರಯುತನ್+ಆಚಾರಹೀನನು +ಫಣಿಪ +ಕೇಳೆಂದ

ಅಚ್ಚರಿ:
(೧) ಧೀರ, ದಿಟ್ಟನ ಗುಣಗಳು – ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟ

ಪದ್ಯ ೨: ಸಭೆಯಲ್ಲಿದ್ದ ರಾಜರ ಮುಖಭಾವ ಹೇಗಿತ್ತು?

ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ (ಸಭಾ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಕಿವಿಯಲ್ಲಿ ಮುಖವಿಟ್ಟು ಮೆತ್ತಿಗೆ ಮಾತನಾಡುವ, ಎರದು ಕೈಗಳನ್ನು ಜೋಡಿಸಿ (ಮುಷ್ಟಿ) ಯನ್ನು ತೋರಿಸುವ, ಕಡೆಗಣ್ಣಿನ ಸನ್ನೆಗಳ, ಜೋಡುಗೈಗಳನ್ನು ಹಿಡಿದು ನಂಬಿಸುವ, ಮನಸ್ಸುಗಳು ಕೂಡುವ, ಅವಸರದಿಂದ ಸ್ನೇಹ ಮಾದಿಕೊಳ್ಳುವ, ಮಂತ್ರಿಗಳ ಮಾತನ್ನು ಕಡೆಗಣಿಸುವ ರಾಜರು ಯುದ್ಧಮಾದುವ ತವಕದಿಂದ ಕುದಿಯುತ್ತಿದ್ದರು.

ಅರ್ಥ:
ಕಿವಿ: ಕರ್ಣ; ಮೋರೆ: ಮುಖ; ಮುಷ್ಟಿ: ಕೈ, ಕರ; ಬವರಿ: ಕೆನ್ನೆಯ ಮೇಲಿನ ಕೂದಲು, ತಿರುಗುವುದು; ಬವರ: ಜಗಳ, ಪೈಪೋಟಿ; ಕಡೆಗಣ್ಣ: ಕಣ್ಣಿನ ಕೊನೆ/ಅಂಚು; ಸನ್ನೆ: ಗುರುತು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ನಂಬು: ವಿಶ್ವಾಸವಿಡು, ಭರವಸೆಯನ್ನು ಹೊಂದು, ನೆಚ್ಚು; ಮನ: ಮನಸ್ಸು; ಬೆಸುಗೆ: ; ಅವಸರ: ಬೇಗ; ಮೈತ್ರಿ: ಸ್ನೇಹ; ಮಂತ್ರಿ: ಸಚಿವ; ಪ್ರವರ: ಪ್ರಧಾನ ವ್ಯಕ್ತಿ, ಶ್ರೇಷ್ಠ; ವಚನ: ಮಾತು; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ರಣ: ಯುದ್ಧ; ತವಕ: ಬಯಕೆ, ಆತುರ; ಕಳವಳ:ಗೊಂದಲ; ಕೂಡೆ: ಜೊತೆ; ನೃಪ: ರಾಜ; ಕಟಕ: ಗುಂಪು;

ಪದವಿಂಗಡಣೆ:
ಕಿವಿವಳೆಯ+ ಮೋರೆಗಳ+ ಮುಷ್ಟಿಯ
ಬವರಿಗಳ +ಕಡೆಗಣ್ಣ +ಸನ್ನೆಯ
ಸವಡಿ+ಕೈಗಳ +ನಂಬುಗೆಯ +ಮನಮನದ +ಬೆಸುಗೆಗಳ
ಅವಸರದ +ಮೈತ್ರಿಗಳ +ಮಂತ್ರಿ
ಪ್ರವರ +ವಚನ+ಉಪೇಕ್ಷೆಗಳ +ರಣ
ತವಕದಲಿ +ಕಳವಳಿಸುತ್+ಇರ್ದುದು +ಕೂಡೆ +ನೃಪ+ಕಟಕ

ಅಚ್ಚರಿ:
(೧) ರಾಜರ ಭಾವನೆಗಳನ್ನು ಚಿತ್ರಿಸುವ ಪದ್ಯ