ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ (ಗದಾ ಪರ್ವ, ೨ ಸಂಧಿ, ೨೦ ಪದ್ಯ)
ತಾತ್ಪರ್ಯ:
ಎಲೈ ಜನಮೇಜಯ ರಾಜ ಕೇಳು, ಏಳು ನೂರು ರಥಗಳು ಐನೂರು ಕುದುರೆಗಳು, ಐನೂರು ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು ಸತ್ತು ಬಿದ್ದರು. ಕುರುಕ್ಷೇತ್ರದಲ್ಲಿ ಅರ್ಜುನನನ್ನು ಕಡುಬಳಲಿಸಿದ ತ್ರಿಗರ್ತ ದೇಶದ ಪಡೆಯೆಲ್ಲವೂ ನಾಶವಾಯಿತು.
ಅರ್ಥ:
ಕಡಿ: ಸೀಳು; ರಥ: ಬಂಡಿ; ಮುರಿ: ಸೀಳು; ಅಶ್ವಚಯ: ಕುದುರೆಗಳ ಗುಂಪು; ಮುಂಗೆಡೆ: ಮುಂದೆ ಬೀಳು; ಗಜ: ಆನೆ; ಸಾವಿರ: ಸಹಸ್ರ; ಕಡುಗಲಿ: ಮಹಾ ಪರಾಕ್ರಮಿ; ಉದುರು: ಬೀಳು; ತ್ರಿಗರ್ತ: ಒಂದು ದೇಶದ ಹೆಸರು; ಪಡೆ: ಸೈನ್ಯ; ಬಿಡು: ತೊರೆ; ಬಳಲಿಸು: ಆಯಾಸಗೊಳ್ಳು; ಅನಿಬರ್: ಅಷ್ಟು ಜನ; ಅಳಿ: ನಾಶ; ಕೇಳು: ಆಲಿಸು; ಅಡೆ: ಮುಚ್ಚಿಹೋಗಿರು;
ಪದವಿಂಗಡಣೆ:
ಕಡಿವಡೆದವ್+ಏಳ್ನೂರು +ರಥ +ಮುರಿವ್
ಅಡೆದವ್+ಐನೂರ್+ಅಶ್ವಚಯ +ಮುಂ
ಗೆಡೆದವಂದ್+ಐನೂರು +ಗಜವ್+ಇಪ್ಪತ್ತು +ಸಾವಿರದ
ಕಡುಗಲಿಗಳ್+ಉದುರಿತು +ತ್ರಿಗರ್ತರ
ಪಡೆ +ಕುರುಕ್ಷೇತ್ರದಲಿ +ಪಾರ್ಥನ
ಬಿಡದೆ +ಬಳಲಿಸಿ+ಅನಿಬರ್+ಅಳಿದುದು +ಭೂಪ +ಕೇಳೆಂದ