ಪದ್ಯ ೩೯: ಯಕ್ಷ ಧರ್ಮಜನ ಸಂವಾದ – ೩

ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬುವನು
ನಿಯತಧೀರನದಾರು ದೇವ
ಪ್ರಿಯನದಾವನು ಕಠಿಣಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಜನೀತಿಯನ್ನು ಬಲ್ಲವನೇ ಹೇಳು, ಕ್ಷತ್ರಿಯನು ಯಾರು? ಬ್ರಾಹಣರಲ್ಲಿ ಶ್ರೋತ್ರಿಯನಾರು? ಸಜ್ಜನರಲ್ಲಿ ಮಹಾಪುರುಷನಾರು? ಧೀರನು ಯಾರು? ದೇವತೆಗಳಿಗೆ ಪ್ರಿಯನಾದವನಾರು ಎಂದು ಕೇಳಿದನು.

ಅರ್ಥ:
ನಯ: ನುಣುಪು, ಮೃದುತ್ವ, ಅಂದ; ಕೇಳು: ಆಲಿಸು; ಕ್ಷತ್ರಿಯ: ನಾಲ್ಕು ವರ್ಣಗಳಲ್ಲಿ ಒಂದು; ವಿಪ್ರ: ಬ್ರಾಹ್ಮಣ; ಶ್ರೋತ್ರಿ: ಬ್ರಾಹ್ಮಣ; ಸುಜನ: ಒಳ್ಳೆಯ ವ್ಯಕ್ತಿ; ಮಹಪುರುಷ: ಶ್ರೇಷ್ಠ; ನಿಯತ: ನಿಶ್ಚಿತವಾದುದು; ಧೀರ: ಪರಾಕ್ರಮಿ; ದೇವ: ದೇವತೆ, ಸುರರು; ಪ್ರಿಯ: ಹಿತವಾದುದು; ಕಠಿಣ: ಬಿರುಸು, ಕಷ್ಟಕರವಾದ; ಆಶ್ರಯ: ಆಸರೆ, ಅವಲಂಬನ; ಹೇಳು: ತಿಳಿಸು; ಖಚರ: ಯಕ್ಷ, ಗಂಧರ್ವ;

ಪದವಿಂಗಡಣೆ:
ನಯವಿದನೆ+ ಕೇಳ್+ಆವನೈ +ಕ್ಷ
ತ್ರಿಯನು +ವಿಪ್ರರೊಳ್+ಆವನೈ+ ಶ್ರೋ
ತ್ರಿಯನು +ಸುಜನರೊಳ್+ಆವನೈ +ಮಹಪುರುಷನ್+ಎಂಬುವನು
ನಿಯತ+ಧೀರನದ್+ಆರು +ದೇವ
ಪ್ರಿಯನದ್+ಆವನು +ಕಠಿಣ+ಕಷ್ಟಾ
ಶ್ರಯನದ್+ಆವನು +ಧರ್ಮಸುತ +ಹೇಳೆಂದನಾ +ಖಚರ

ಅಚ್ಚರಿ:
(೧) ಕ್ಷತ್ರಿಯ, ಶ್ರೋತ್ರಿಯ – ಪ್ರಾಸ ಪದಗಳ ಬಳಕೆ

ಪದ್ಯ ೮೦: ಧೃತರಾಷ್ಟ್ರನು ವಿದುರನಿಗೆ ಯಾವ ಕಾರ್ಯವನ್ನು ನೀಡಿದನು?

ಕರೆದುತಾನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ (ಸಭಾ ಪರ್ವ, ೧೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ವಿದುರ ನೀನು ಪಾಂಡವರನ್ನು ಇಲ್ಲಿಗೆ ಕರೆದುಕೊಂಡು ಬಾ, ನಾನು ಅವರನ್ನು ಉಪಚರಿಸುವ ಬಗೆಯನ್ನು ನೀನೇ ನೋಡುವೆ, ನಿನ್ನ ಕಿವಿಗೆ ನಮ್ಮ ಮಾತುಗಳು ಕಠಿಣವೆನಿಸುತ್ತಿದೆಯೇ? ದುಷ್ಟರು ಏನೇನನ್ನೋ ಆಡುತ್ತಾರೆ ಅವನ್ನು ನಂಬಬೇಡ. ನೀನು ಹೋಗಿ ಪಾಂಡವರನ್ನು ಕರೆದುಕೊಂಡು ಬಾ ಎಂದು ವಿದುರನನ್ನು ಕಳುಹಿಸಿದನು.

ಅರ್ಥ:
ಕರೆ: ಬರೆಮಾಡು; ಉಪಚಾರ: ಸತ್ಕಾರ, ಶುಶ್ರೂಷೆ; ಅಂದವ: ರೀತಿಯ; ನೋಡು: ವೀಕ್ಷಿಸು; ಕರಣ: ಕಿವಿ; ವೃತ್ತಿ: ಕೆಲಸ; ಕಠಿಣ: ಕಷ್ಟ; ಮಾತು: ವಾಣಿ; ದುರುಳ: ದುಷ್ಟ; ಆದರ: ಗೌರವ, ಸತ್ಕಾರ; ಹೋಗು: ತೆರಳು; ಧರಣಿಪ: ರಾಜ; ಒಡಗೊಂಡು: ಜೊತೆ; ಬಾ: ಆಗಮಿಸು; ಅಟ್ಟು: ಕಳುಹಿಸು; ನೃಪತಿ: ರಾಜ;

ಪದವಿಂಗಡಣೆ:
ಕರೆದುತಾ+ ನೀನ್+ಅವರ +ನಾನ್+ಉಪ
ಚರಿಸುವ್+ಅಂದವ +ನೋಡು +ನಿನ್ನಯ
ಕರಣವೃತ್ತಿಗೆ +ಕಠಿಣವಹವೇ+ ನಮ್ಮ+ ಮಾತುಗಳು
ದುರುಳರ್+ಅವರಿವರ್+ಎಂಬರ್+ಅದನ್
ಆದರಿಸದಿರು+ ನೀ +ಹೋಗು +ಪಾಂಡವ
ಧರಣಿಪರನ್+ಒಡಗೊಂಡು +ಬಾ+ಎಂದ್+ಅಟ್ಟಿದನು +ನೃಪತಿ

ಅಚ್ಚರಿ:
(೧) ಕಳುಹಿಸಿದನು ಎಂಬದನ್ನು ಹೇಳಲು – ಅಟ್ಟಿದನು ಪದದ ಬಳಕೆ
(೨) ಕೇಳು ಎಂದು ತಿಳಿಸಲು – ಕರಣವೃತ್ತಿ ಪದದ ಬಳಕೆ