ಪದ್ಯ ೧೪: ವಂದಿ ಮಾಗಧರು ಕರ್ಣಾದಿಗಳಿಗೆ ಏನು ಹೇಳಿದರು?

ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ (ಕರ್ಣ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ವಂದಿಮಾಗಧರು ಕುರುವೀರರಿಗೆ ಹೀಗೆ ಹೇಳಿದರು, ಲೋಕವನ್ನು ನುಂಗುವ ಯಮನಿಗೆ ದೊಡ್ಡದಾದ ಇರುವೆಗಳು ಲೆಕ್ಕವೇ? ಕತ್ತಲೊಡನೆ ಯುದ್ಧ ಮಾಡಲು ಸೂರ್ಯನು ಕೈದೀವಿಗೆಯ ಹಂಗಿಗೊಳಗಾದಾನೇ? ಕರ್ಣ ಮರೆತೆಯಾ, ಕೃಪ ದೂರನಿಲ್ಲು, ಅಶ್ವತ್ಥಾಮ ನಿನ್ನ ಗರ್ವವನ್ನು ಭೀಮನ ಆಯುಧಗಳು ನಿನ್ನನ್ನು ಹೆರಿಸುತ್ತವೆ ಎಂದು ತಿಳಿಸಿದರು.

ಅರ್ಥ:
ಮುರಿ: ಸೀಳು; ಲೋಕ: ಜಗತ್ತು; ನುಂಗು: ಸ್ವಾಹಮಾಡು; ಕಟ್ಟಿರುವೆ: ದೊಡ್ಡ ಇರುವೆ, ಗೊದ್ದ; ಕಾಲ: ಯಮ; ಕತ್ತಲೆ: ಅಂಧಕಾರ; ಇರಿ: ಚುಚ್ಚು, ಯುದ್ಧ; ಕೈದೀವಿ: ಕೈಯಲ್ಲಿ ಹಿಡಿದಿರುವ ದೀಪ; ಹಂಗು: ಋಣ, ದಾಕ್ಷಿಣ್ಯ; ದಿನಮಣಿ: ಸೂರ್ಯ; ಮರೆ: ನೆನಪಿನಿಂದ ದೂರ; ರಾಧೇಯ: ಕರ್ಣ; ಹೊರಗೆ: ಆಚೆ; ನಿಲು: ನಿಲ್ಲು, ಚಲಿಸದಿರು; ಸುತ: ಮಗ; ಗರ್ವ: ಅಹಂಕಾರ; ಹೆರು: ಗಟ್ಟಿಯಾಗು, ಹೊಂದು; ಅಸ್ತ್ರ: ಆಯುಧ; ವಂದಿ: ಹೊಗಳುಭಟ್ಟರು; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ಮುರಿದು+ ಲೋಕವ +ನುಂಗಿದರೆ +ಕ
ಟ್ಟಿರುವೆಯೇ +ಕಾಲಂಗೆ +ಕತ್ತಲೆ
ಯಿರಿತದಲಿ +ಕೈದೀವಿಗೆಯ +ಹಂಗೇಕೆ +ದಿನಮಣಿಗೆ
ಮರೆದೆಲಾ +ರಾಧೇಯ +ಕೃಪ+ ನಿಲು
ಹೊರಗೆ +ಗುರುಸುತ +ನಿನ್ನ +ಗರ್ವವ
ಹೆರಿಸುವವು+ ಭೀಮಾಸ್ತ್ರವೆಂದುದು +ವಂದಿ +ಸಂದೋಹ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ; ಕತ್ತಲೆ ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ