ಪದ್ಯ ೧೦: ದುರ್ಯೋಧನನ ಸ್ಥಿತಿ ಹೇಗಿತ್ತು?

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಲದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ (ಶಲ್ಯ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪನ್ನೀರನ್ನು ದೊರೆಯ ಕಣ್ಣುಗಳಿಗೆ ಚುಮುಕಿಸಿ, ಹಿಡಿದೆತ್ತಿ ಕೂಡಿಸಿದರೆ, ದುರ್ಯೋಧನನು ಏನಪ್ಪಾ ಕರ್ಣ ಎಂದು ಕಣ್ಣುತೆರೆದು, ಥಟ್ಟನೆ ನೀಂತು ಕರ್ಣ, ರಾತ್ರಿಯಾಯಿತು ಸೈನ್ಯವನ್ನು ಪಾಳೆಯಕ್ಕೆ ಕಳುಹಿಸು ಎನ್ನಲು, ಶೋಕವು ಮತ್ತೆ ಹೆಚ್ಚಾಗಿ ಕಣ್ಣುಮುಚ್ಚಿ ಮೂರ್ಛಿತನಾದನು.

ಅರ್ಥ:
ತಳಿ: ಚಿಮುಕಿಸು, ಸಿಂಪಡಿಸು; ಪನ್ನೀರು: ತಂಪಾದ ನೀರು; ಅಕ್ಷಿ: ಕಣ್ಣು; ಚಳೆ: ಸಿಂಪಡಿಸುವುದು, ಚಿಮುಕಿಸುವುದು; ಹಿಡಿದು: ಗ್ರಹಿಸು; ಎತ್ತು: ಮೇಲೆ ತರು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಮಲಗು: ನಿದ್ರಿಸು; ಕಂದೆರೆ: ಕಣ್ಣನ್ನು ಬಿಡು; ಘಳಿಲು: ಒಮ್ಮೆಲೆ; ಎದ್ದು: ಮೇಲೇಳು, ಎಚ್ಚರಗೊಳ್ಳು; ತೆಗೆ: ಹೊರತರು; ದಳ: ಸೈನ್ಯ; ಇರುಳು: ರಾತ್ರಿ; ಶೋಕ: ದುಃಖ; ಕಳವಳ: ಗೊಂದಲ; ಅರೆ: ಅರ್ಧ; ಮುಚ್ಚು: ಮರೆಮಾಡು, ಹೊದಿಸು; ಕಣ್ಣು: ನಯನ; ಮೈಮರೆ: ಎಚ್ಚರತಪ್ಪು;

ಪದವಿಂಗಡಣೆ:
ತಳಿತಳಿದು +ಪನ್ನೀರನ್+ಅಕ್ಷಿಗೆ
ಚಳೆಯವನು +ಹಿಡಿದೆತ್ತಿ +ಗುರುಸುತ
ಮಲಗಿಸಿದಡ್+ಏನಯ್ಯ +ಕರ್ಣ +ಎನುತ್ತ +ಕಂದೆರೆದು
ಘಳಿಲನೆದ್ದನು +ಕರ್ಣ +ತೆಗೆಸೈ
ದಳವನ್+ಇರುಳಾಯ್ತೆಂದು +ಶೋಕದ
ಕಳವಳದಲ್+ಅರೆ+ಮುಚ್ಚುಗಣ್ಣಲಿ +ಮತ್ತೆ +ಮೈಮರೆದ

ಅಚ್ಚರಿ:
(೧) ಅಕ್ಷಿ, ಕಣ್ಣು – ಸಮಾನಾರ್ಥಕ ಪದ
(೨) ಕಂದೆರೆದು, ಮುಚ್ಚುಗಣ್ಣು – ಕಣ್ಣಿನ ಸ್ಥಿತಿಯನ್ನು ತೋರುವ ಪದಗಳು
(೩) ತಳಿತಳಿ, ಕಳವಳ – ಪದಗಳ ಬಳಕೆ

ಪದ್ಯ ೪೦: ಭೀಮನು ಅಣ್ಣನಿಗೆ ಹೇಗೆ ಉತ್ತರಿಸಿದನು?

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯ ನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ಣು ತೆರೆದು ಭೀಮನು ಅಣ್ಣನನ್ನು ನೋಡಿದನು, ಹಾವು ಅವನ ಕಂಠವನ್ನು ಭದ್ರವಾಗಿ ಬಂಧಿಸಿದ್ದುದರಿಂದ ಅವನು ಮಾತನಾಡಲಾರದೆ ಕೇವಲ ಬೆರಳ ಸನ್ನೆಯನ್ನು ಮಾಡಿದನು. ಅಜಾತಶತ್ರುವಾದ ಧರ್ಮಜನು ಹೆದರಿ ಹಾವನ್ನುದೇಶಿಸಿ, ನೀನು ಸಾಮಾನ್ಯ ಹಾವಲ್ಲ, ನೀನಾರು ಎಂದು ಕೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಂದೆರೆದು: ಕಣ್ಣು ಬಿಟ್ಟು; ಕಂಠ: ಕೊರಳು
ಹೂಡು: ಅಣಿಗೊಳಿಸು, ಕಟ್ಟು; ಉರಗ: ಹಾವು; ಘೋರ: ಉಗ್ರ, ಭಯಂಕರ; ಬಂಧ: ಕಟ್ಟು, ಬಂಧನ; ಗಾಢ: ಹೆಚ್ಚಳ, ಅತಿಶಯ; ನುಡಿ: ಮಾತಾಡು; ನೆಗ್ಗು: ಕುಗ್ಗು, ಕುಸಿ; ಬೆರಳು: ಅಂಗುಲಿ; ಸನ್ನೆ: ಗುರುತು; ಖೇಡ: ಹೆದರಿದವನು; ಅಜಾತಶತ್ರು: ಧರ್ಮರಾಯ, ಶತ್ರುವೇ ಇಲ್ಲದವ; ಮಾತಾಡಿಸು: ನುಡಿ; ಅಹಿಪತಿ: ಸರ್ಪರಾಜ; ನೆಲೆ: ಸ್ಥಾನ; ನಾಡಾಡಿ: ಸಾಮಾನ್ಯವಾದುದು; ನಾಟಕ: ಲೀಲೆ, ತೋರಿಕೆ; ಫಣಿ: ಹಾವು; ಹೇಳು: ತಿಳಿಸು; ರಿಪು: ಶತ್ರು, ವೈರಿ;

ಪದವಿಂಗಡಣೆ:
ನೋಡಿದನು +ಕಂದೆರೆದು +ಕಂಠಕೆ
ಹೂಡಿದ್+ಉರಗನ +ಘೋರ +ಬಂಧದ
ಗಾಢದಲಿ +ನುಡಿ +ನೆಗ್ಗಿ+ ನುಡಿದನು +ಬೆರಳ +ಸನ್ನೆಯಲಿ
ಖೇಡನಾದನ್+ಅಜಾತರಿಪು+ ಮಾ
ತಾಡಿಸಿದನ್+ಅಹಿಪತಿಯ +ನೆಲೆ +ನಾ
ಡಾಡಿಗಳ +ನಾಟಕದ +ಫಣಿಯಲ್ಲ್+ಆರು +ಹೇಳೆಂದ

ಅಚ್ಚರಿ:
(೧) ಭೀಮನ ಸ್ಥಿತಿ – ಉರಗನ ಘೋರ ಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
(೨) ನೆಗ್ಗಿ ನುಡಿದನು; ನೆಲೆ ನಾಡಾಡಿಗಳ ನಾಟಕದ – ನ ಕಾರದ ಪದಗಳು