ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ (ವಿರಾಟ ಪರ್ವ, ೧೧ ಸಂಧಿ, ೭ ಪದ್ಯ)
ತಾತ್ಪರ್ಯ:
ದೊರೆಯ ಸಿಂಹಾಸನವನ್ನೇರುವ ಗರ್ವಿತರು ಯಾರು ಎಂದು ನೋಡಲು ಬಂದ ದ್ವಾರಪಾಲಕರು, ಅಂತಃಪುರದ ಅಧಿಕಾರಿಗಳು, ಪಾಂಡವರ ಕ್ಷಾತ್ರ ತೇಜಸ್ಸನ್ನು ನೋಡಿ ಬೆದರಿ, ಓಡಿ ಬಂದು ವಿರಾಟನೆದುರು ಈ ವಿಷಯವನ್ನು ತಿಳಿಸಿದರು.
ಅರ್ಥ:
ಅವನಿಪ: ರಾಜ; ಸಿಂಹಾಸನ: ರಾಜನ ಪೀಠ; ಏರು: ಮೇಲೆ ಹತ್ತು; ಗರ್ವ: ದರ್ಪ, ಅಹಂಕಾರ; ನೋಡು: ವೀಕ್ಷಿಸು; ಎವೆ: ಕಣ್ಣುರೆಪ್ಪೆ; ಉರಿ: ಜ್ವಾಲೆ; ಕಂಚುಕಿ: ಅಂತಃಪುರದ ಅಧಿಕಾರಿ; ಐತಂದು: ಬಂದು ಸೇರು; ಈಕ್ಷಿಸು: ನೋದು; ಕ್ಷಾತ್ರ: ಕ್ಷತ್ರಿಯ; ತೇಜ: ಹೊಳಪು; ಅವಗಡಿಸು: ಕಡೆಗಣಿಸು; ಅಂಜು: ಹೆದರು; ಹರಿ: ಚಲಿಸು; ಎಬ್ಬಿಸು: ಮೇಲೇಳಿಸು; ಬಿನ್ನವಿಸು: ಹೇಳು; ಭೂಪತಿ: ರಾಜ;
ಪದವಿಂಗಡಣೆ:
ಅವನಿಪನ +ಸಿಂಹಾಸನವನ್
ಏರುವ +ಸಗರ್ವಿತರ್+ಆರು +ನೋಡಿದಡ್
ಎವೆಗಳ್+ಉರಿವುದು +ಹಾಯೆನುತ +ಕಂಚುಕಿಗಳ್+ಐತಂದು
ಇವರನ್+ಈಕ್ಷಿಸಿ+ ಕ್ಷಾತ್ರ+ತೇಜವನ್
ಅವಗಡಿಸಲ್+ಅಂಜಿದರು+ ಹರಿ+ ತಂದ್
ಅವದಿರ್+ಎಬ್ಬಿಸಿ +ಬಿನ್ನವಿಸಿದರು +ಮತ್ಸ್ಯ+ಭೂಪತಿಗೆ
ಅಚ್ಚರಿ:
(೧) ಪಾಂಡವರ ತೇಜಸ್ಸನ್ನು ಹೇಳುವ ಪರಿ – ಇವರನೀಕ್ಷಿಸಿ ಕ್ಷಾತ್ರತೇಜವನವಗಡಿಸಲಂಜಿದರು