ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ (ಕರ್ಣ ಪರ್ವ, ೧ ಸಂಧಿ, ೧೮ ಪದ್ಯ)
ತಾತ್ಪರ್ಯ:
ಆ ರಾತ್ರಿ ದುರ್ಯೋಧನನ ಆಸ್ಥಾನಕ್ಕೆ ಬಂದವರು ತಮ್ಮ ಆಭರಣಗಳನ್ನು ತೆಗೆದಿಟ್ಟಿದ್ದರು. ಕೈಯಲ್ಲಿ ಕತ್ತಿಯನ್ನು ಹಿಡಿದಿರಲಿಲ್ಲ. ದುಃಖದ ಮುಸುಕು ಅವರ ಮುಖಗಳ ಮೇಲಿತ್ತು. ವಿಸ್ಮಯದಿಂದ ಕಣ್ಣುಗಳನ್ನು ಬಿಡುತ್ತಿದ್ದರು. ದೊರೆಯ ಇದಿರಿನಲ್ಲಿ ಕುಳಿತುಕೊಳ್ಳದೆ ದೀವಿಗೆಗಳ ಮರೆಯಲ್ಲಿ ಅವಿತುಕೊಂಡಿದ್ದರು.
ಅರ್ಥ:
ತೊಡರು: ಸಂಬಂಧ, ಸಂಕೋಲೆ; ತೆಗೆ: ಈಚೆಗೆ ತರು, ಹೊರತರು; ಕೈ: ಕರ; ಆಯ್ದವ: ಆಯುಧ, ಶಸ್ತ್ರ; ಜಡಿ: ಗರ್ಜಿಸು; ಹೊತ್ತ: ತೋರಿದ; ದುಗುಡ: ದುಃಖ; ನಿಡು: ದೊಡ್ಡದಾದ, ದೀರ್ಘ; ಮುಸುಕು: ಹೊದ್ದಿಕೆ; ಬಿಗಿದ: ಆವರಿಸಿದ; ಬೆರಗು: ಆಶ್ಚರ್ಯ; ಬಿಟ್ಟ: ತೋರಿದ; ಕಣ್ಣು: ನಯನ; ಒಡೆಯ: ರಾಜ; ಇದಿರು: ಎದುರು; ಕುಳ್ಳೀರು: ಆಸೀನನಾಗು; ಕೆಲ: ಮಿಕ್ಕ; ಕಡೆ: ಕೊನೆ, ಪಕ್ಕ; ಕೈದೀವಿಗೆ: ಸೊಡರು, ದೀಪಿಕೆ; ಮರೆ: ಹಿಂಭಾಗ, ಹಿಂಬದಿ; ಮಿಡುಕು: ಅಲುಗಾಟ, ಚಲನೆ; ರಾಯ: ರಾಜ; ಓಲಗ: ದರ್ಬಾರು; ಪರಿವಾರ: ಸಂಬಂಧಿಕರು;
ಪದವಿಂಗಡಣೆ:
ತೊಡರ +ತೆಗೆದರು +ಕೈಯಡ್+ಆಯ್ದವ
ಜಡಿಯಲಮ್ಮರು +ಹೊತ್ತ +ದುಗುಡದ
ನಿಡು +ಮುಸುಕುಗಳ +ಬಿಗಿದ +ಬೆರಗಿನ +ಬಿಟ್ಟ +ಕಣ್ಣುಗಳ
ಒಡೆಯನ್+ಇದಿರಲಿ +ಕುಳ್ಳಿರದೆ +ಕೆಲ
ಕಡೆಯ +ಕೈದೀವಿಗೆಯ +ಮರೆಯಲಿ
ಮಿಡುಕದಿರ್ದುದು+ ರಾಯನ್+ಓಲಗದೊಳಗೆ+ ಪರಿವಾರ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಳ್ಳಿರದೆ ಕೆಲಕಡೆಯ ಕೈದೀವಿಗೆಯ
(೨) ದುರ್ಯೋಧನನ ಮೇಲಿನ ಅಂಜಿಕೆಯನ್ನು ತೋರುವ ಸಾಲು – ಒಡೆಯನಿದಿರಲಿ ಕುಳ್ಳಿರದೆ ಕೆಲ ಕಡೆಯ ಕೈದೀವಿಗೆಯ ಮರೆಯಲಿ ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ