ಪದ್ಯ ೨೦: ಶಿಶುಪಾಲನು ಭೀಷ್ಮನಿಗೆ ಕೃಷ್ಣನ ಗುಣಗಾನವನ್ನು ನಿಲ್ಲಿಸಲು ಏಕೆ ಹೇಳಿದ?

ಓಡಿ ಕೊಲಿಸಿದ ಕಾಲಯವನನ
ಮೂಡಿದವೆ ಹುಲುಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿ ರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ (ಸಭಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಕೃಷ್ಣನು ಓಡಿಹೋಗಿ ಕಾಲಯವನನನ್ನು ಮುಚುಕುಂದನಿಂದ ಕೊಲ್ಲಿಸಿದನಲ್ಲವೇ? ಜರಾಸಂಧನಿಗೆ ಹೆದರಿ ಓಡಿಹೋದ ದಾರಿಯಲ್ಲಿ ಇನ್ನಾದರೂ ಹುಲ್ಲು ಕಲ್ಲು ಇವೆಯೋ, ಅಥವ ನಿನ್ನ ಕಾಲುಸೋಕಿ ದಾರಿಯೇ ಹಾಳಾಯಿತೋ? ಅದನ್ನು ಹೇಳುವುದಿಲ್ಲ. ಬೇರೆ ಜಾತಿಯ ರತ್ನದ ದೋಷಗಳನ್ನು ಹಳಿಯುವ ಭೀಷ್ಮನೇ ಶ್ರೀಕೃಷ್ಣನ ಗುಣಗಳನ್ನು ತೋಡಿ ತೋಡಿ ಬಡಿಸುತ್ತೀಯೆ? ಕಿವಿಗಳು ಇದನ್ನು ಕೇಳಿ ಕಿವುಡಾಗಿವೆ, ಸಾಕು ನಿಲ್ಲಿಸು ಎಂದು ಶಿಶುಪಾಲನು ಜರೆದನು.

ಅರ್ಥ:
ಓಡು: ಪಲಾಯನ; ಕೊಲಿಸು: ಸಾಯಿಸು; ಮೂಡು: ಉದಯಿಸು, ತುಂಬು; ಹುಲುಕಲು: ಹುಲ್ಲು ಕಲ್ಲು; ಅಕಟ: ಅಯ್ಯೋ; ಓಡುಕುಳಿ: ಅಂಜುಪುರಕ; ಮಗಧ: ಜರಾಸಂಧ; ರಾಜಕಾರ್ಯ: ರಾಜಕಾರಣ; ಅರಿ: ತಿಳಿ; ವಿಜಾತಿ: ಬೇರೆ ಜಾತಿಯಿಂದ ಹುಟ್ಟಿದುದು; ರತ್ನ; ಬೆಲೆಬಾಳುವ ಮಣಿ, ಮಾಣಿಕ್ಯ; ಖೋಡಿ: ದುರುಳತನ; ಹಳಿ: ದೂಷಿಸು, ನಿಂದಿಸು; ಹರಿ: ವಿಷ್ಣು; ತೋಡು: ತೆಗೆ, ಹೊರಕ್ಕೆ ಹೋಗು, ವ್ಯಕ್ತಪಡಿಸು; ಬಡಿಸು: ಉಣಿಸು, ಇಡು; ಕಿವಿ: ಕರ್ಣ; ರೋಚಕ: ರೋಮಾಂಚನ; ತೆಗೆ: ಅತ್ತಸರಿ, ಬಿಡು; ಆಡಲು: ಹೇಳಲು;

ಪದವಿಂಗಡಣೆ:
ಓಡಿ+ ಕೊಲಿಸಿದ +ಕಾಲಯವನನ
ಮೂಡಿದವೆ +ಹುಲುಕಲುಗಳ್+ಅಕಟಾ
ವೋಡುಕುಳಿ+ ಹೋದಲ್ಲಿ +ಮಗಧನ +ರಾಜಕಾರ್ಯದಲಿ
ಆಡಲ್+ಅರಿಯೆ +ವಿಜಾತಿ +ರತ್ನದ
ಖೋಡಿಗಳ +ಹಳಿವಾತನೇ +ಹರಿ
ತೋಡಿ +ಬಡಿಸುವೆ +ಕಿವಿಗ್+ಅರೋಚಕವಾಯ್ತು +ತೆಗೆಯೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ ಸಾಕೆನ್ನುವ ಪರಿ – ಕಿವಿಗರೋಚಕವಾಯ್ತು ತೆಗೆಯೆಂದ