ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ (ದ್ರೋಣ ಪರ್ವ, ೧೨ ಸಂಧಿ, ೭ ಪದ್ಯ)
ತಾತ್ಪರ್ಯ:
ಭೀಮನ ಮುಂದೆ ಮುಂಗುಡಿಯ ಸೈನ್ಯವು ಹೊರಟಿತು. ಎಡಬಲದಲ್ಲಿ ರಾವುತರು ಸಂಭ್ರಮಿಸಿದರು. ಸೈನ್ಯದ ಮದಗರ್ವಿತರು ಮುಂಗುಡಿಯೊಡನಿದ್ದರು. ಖಡ್ಗಗಳ ಕಾಂತಿ ಸೂರ್ಯನನ್ನು ಮುಚ್ಚಿತು. ಕುಂತಗಳ ತುದಿಗಳನ್ನು ಕಂಡು ಸೂರ್ಯಮಂಡಲವು ರಾಹು ಬಂದನೆಂದು ಬೆದರಿತು.
ಅರ್ಥ:
ಒದಗು: ಹೊಂದಿಸು; ಎಡಬಲ: ಅಕ್ಕಪಕ್ಕ; ಒಯ್ಯಾರ: ಅಂದ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮುಂದೆ: ಎದುರು; ತಲೆ: ಶಿರ; ತೋರು: ಪ್ರದರ್ಶಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಚೂಣಿ: ಮುಂದಿನ ಸಾಲು, ಮುಂಭಾಗ; ಹೊಂತಕಾರಿ: ಮೋಸಗಾರ; ಅದಿರು: ಕಂಪಿಸು; ಖಡುಗ: ಕತ್ತಿ; ಕಾಂತಿ: ಪ್ರಕಾಶ; ಸೂರ್ಯ: ರವಿ; ಹೊದೆ: ಬತ್ತಳಿಕೆ, ಪೊದೆ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಕೊಂತು: ದಿಂಡು; ತುದಿ: ಮುಂದಿನ ಭಾಗ; ಭಯ: ಅಂಜಿಕೆ; ರವಿ: ಸೂರ್ಯ; ಮಂಡಲ: ವರ್ತುಲಾಕಾರ;
ಪದವಿಂಗಡಣೆ:
ಒದಗಿತ್+ಎಡಬಲವ್+ಅಂಕದ್+ಒಯ್ಯಾ
ರದಲಿ +ರಾವ್ತರು +ಮುಂದೆ +ತಲೆದೋ
ರಿದರು +ಮುಂಗುಡಿಯವರು +ಚೂಣಿಯ +ಹೊಂತಕಾರಿಗಳು
ಅದಿರ್ವ +ಖಡುಗದ+ ಕಾಂತಿ +ಸೂರ್ಯನ
ಹೊದಿಸಿದುದು +ಹೊದರೆದ್ದು +ಕೊಂತದ
ತುದಿಗಳ್+ಇತ್ತವು +ರಾಹು+ಭಯವನು+ ರವಿಯ +ಮಂಡಲಕೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಅದಿರ್ವ ಖಡುಗದ ಕಾಂತಿ ಸೂರ್ಯನ ಹೊದಿಸಿದುದು
(೨) ಉಪಮಾನದ ಪ್ರಯೋಗ – ಹೊದರೆದ್ದು ಕೊಂತದ ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ