ಪದ್ಯ ೩೪: ಯಾವ ರೀತಿಯ ಕೂಗುಗಳು ಕೇಳಿ ಬಂದವು?

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ತಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದಲ್ಲಿ ಹಾ ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನಾ, ಅಯ್ಯೋ ಅಪ್ಪಾ, ಅಯ್ಯೋ ಅಣ್ಣಾ, ಅಯ್ಯೋ ಮಗನೇ ಎಂಬ ಕೂಗುಗಳು ಕೇಳಿ ಬಂದವು. ಹೋಗಿ ಹೊಕ್ಕೇವೆಂದರೆ ಸಮುದ್ರ ಬಹುದೂರದಲ್ಲಿದೆ, ಭೂಮಿಯಾದರೂ ಬಾಯನ್ನು ಬಿಡಬಾರದೇ? ನಾವೀ ಮಹಾಸ್ತ್ರಕ್ಕೆ ಸಿಕ್ಕು ಹಾಕಿಕೊಂಡೆವು ಎಂಬ ಕೂಗುಗಳು ಕೇಳಿ ಬಂದವು.

ಅರ್ಥ:
ಮುರಾಂತಕ: ಕೃಷ್ಣ; ಮರುತ್ಸುತ: ವಾಯುಪುತ್ರ (ಭೀಮ); ಮಗ: ಸುತ; ತಂದೆ: ಪಿತ; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಭೂಮಿ: ವಸುಧೆ; ತೆರೆ: ಬಿಚ್ಚುವಿಕೆ; ಅಕಟಕಟ: ಅಯ್ಯೋ; ಮಹೋದಧಿ: ಮಹಾ ಸಾಗರ; ದೂರ: ಅಂತರ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಿಕ್ಕು: ಒದಗು; ಬಂಧನ; ಒರಲು: ಅರಚು, ಕೂಗಿಕೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಹಾ+ ಮುರಾಂತಕ +ಹಾ +ಯುಧಿಷ್ಠಿರ
ಹಾ +ಮರುತ್ಸುತ +ಹಾ +ಧನಂಜಯ
ಹಾ +ಮಗನೆ +ಹಾ +ತಂದೆ +ಹಾ +ಒಡವುಟ್ಟಿದನೆ+ಎನುತ
ಭೂಮಿ +ತೆರೆಯಳೆ +ಬಾಯನ್+ಅಕಟಕ
ಟಾ +ಮಹೋದಧಿ+ ದೂರವಿನ್ನೇನ್
ಈ ಮಹಾಸ್ತ್ರಕೆ +ಸಿಕ್ಕಿದೆವೆಂದ್+ಒರಲಿತ್+ಅರಿಸೇನೆ

ಅಚ್ಚರಿ:
(೧) ನೋವನ್ನು ಸೂಚಿಸುವ ಹಾ ಪದದ ಬಳಕೆ
(೨) ಸುತ, ಮಗ – ಸಮಾನಾರ್ಥಕ ಪದ
(೩) ಮಹಾಸ್ತ್ರ, ಮಹೋದಧಿ – ಮಹಾ ಪದದ ಬಳಕೆ