ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ (ಕರ್ಣ ಪರ್ವ, ೨೫ ಸಂಧಿ, ೧೫ ಪದ್ಯ)
ತಾತ್ಪರ್ಯ:
ಶಲ್ಯನು ಕರ್ಣನಿಗೆ ತನ್ನ ಮಾತನ್ನು ಮುಂದುವರಿಸುತ್ತಾ, ಈ ಅಸ್ತ್ರವೇನೋ ಅತಿ ಶ್ರೇಷ್ಠವಾದುದು, ಇದು ಕುರುರಾಯನ ಅಭ್ಯುದಯಕ್ಕೆ ಸಾಧನವಾಗಿದೆ. ಆದರೆ ನೀನಿಟ್ಟ ಗುರಿ ನನ್ನ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ನೀನು ಈ ಬಾಣವನ್ನು ಮತ್ತೆ ಹೂಡಿದರೆ ಕೌರವನಿಗೆ ನಿಶ್ಚಯವಾಗಿ ರಾಜ್ಯಾಧಿಪತ್ಯ ದೊರಕುತ್ತದೆ ಎಂದನು.
ಅರ್ಥ:
ಆಯಿತು: ತೀರಿತು, ಮುಗಿಯಿತು; ಸರಳು: ಬಾಣ; ರಾಯ: ರಾಜ; ಅಭ್ಯುದಯ: ಅಭಿವೃದ್ಧಿ; ಪ್ರಪಂಚ: ಜಗತ್ತು; ಸಂಧಾನ: ಸಂಯೋಗ, ಹೊಂದಿಸುವುದು; ಒಡಬಡಿಸು: ಒಪ್ಪಿಸು; ಚಿತ್ತ: ಮನಸ್ಸು; ಸಾಯಕ: ಬಾಣ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ತೊಡು: ಧರಿಸು; ನಿರ್ದಾಯದ: ಅಖಂಡ; ನೆಲ: ಭೂಮಿ; ಅಹುದು: ಸಮ್ಮತಿಸು, ಹೌದು; ರಾಧೇಯ: ಕರ್ಣ; ಅವನೀಪಾಲ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಆಯಿತ್+ಇದು +ಸರಳ್+ಒಳ್ಳಿತೈ +ಕುರು
ರಾಯನ್+ಅಭ್ಯುದಯ +ಪ್ರಪಂಚವಿದ್
ಆಯಿತೌ +ಸಂಧಾನವ್+ಒಡಬಡದ್+ಎನ್ನ +ಚಿತ್ತದಲಿ
ಸಾಯಕವ+ ನೀ +ತಿರುಗಿ +ತೊಡು +ನಿ
ರ್ದಾಯದಲಿ +ನೆಲನ್+ಅಹುದಲಾ +ರಾ
ಧೇಯ +ಎಂದನು +ಶಲ್ಯನ್+ಅವನೀಪಾಲ +ಕೇಳೆಂದ
ಅಚ್ಚರಿ:
(೧) ಸಮನಾರ್ಥಕ ಪದ – ರಾಯ, ಆವನೀಪಾಲ; ಸರಳು, ಸಾಯಕ