ಪದ್ಯ ೪೬: ಅರ್ಜುನನು ಶಬರನನ್ನು ಏನೆಂದು ಎಚ್ಚರಿಸಿದನು?

ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಸುಕಿದರೆ ಶಿವ
ನಾಣೆ ಬಾ ಸುಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ (ಅರಣ್ಯ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶಬರಾ, ನಿನ್ನ ಪ್ರಾಣವು ಈಗ ನನಗೆ ಅಧೀನವಾಗಿದೆ, ಇದನ್ನು ನೀನು ತಿಳಿದಿರುವೆಯಾ? ನನಗೆ ಶಿವನ ಕೃಪೆಯ ಶಕ್ತಿಯು ಬಂದಿದೆ. ಇನ್ನು ನಿನ್ನ ಪ್ರಾಣವನ್ನು ಹಿಂಡುತ್ತೇನೆ. ಸ್ವಲ್ಪ ಮಿಸುಕಿದರೆ ನಿನ್ನ ಕತ್ತನ್ನೇ ಶಿವನಾಣೆ ಮುರಿದುಬಿಡುತ್ತೇನೆ ಹಾಣಾಹಣಿಗೆ ಇನ್ನು ನೀನು ಸಿದ್ಧನಿರು ಎಂದು ವೀರಾಲಾಪವನ್ನು ಮಾಡುತ್ತಾ ಅರ್ಜುನನು ಕಿರಾತನನ್ನು ಕಣ್ಣುರೆಪ್ಪೆ ಮುಚ್ಚದೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದನು.

ಅರ್ಥ:
ಕಾಣು: ತೋರು; ಶಬರ: ಬೇಡ; ಪ್ರಾಣ: ಜೀವ; ಅಧೀನ: ವಶ; ಅರಿ: ತಿಳಿ; ಸ್ಥಾಣು: ಶಿವ; ಬಲುಹು: ಶಕ್ತಿ; ಹಿಂಡು: ಹಿಸುಕು, ಅಮುಕು; ಅಸು: ಪ್ರಾಣ; ಗೋಣು: ಕುತ್ತಿಗೆ, ಗಳ; ಮುರಿ: ಸೀಳು; ಮಿಸುಕು: ಅಲ್ಲಾಟ; ಆಣೆ: ಪ್ರಮಾಣ; ಸಮ್ಮುಖ: ಎದುರು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಅನುವಾಗು: ಸಿದ್ಧವಾಗು; ಎವೆ: ಕಣ್ಣುರೆಪ್ಪೆ; ಇಕ್ಕು:ಮುಚ್ಚು, ಹರಡು; ಈಕ್ಷಿಸು: ನೋಡು;

ಪದವಿಂಗಡಣೆ:
ಕಾಣಬಹುದೋ +ಶಬರ +ನಿನ್ನೀ
ಪ್ರಾಣವ್+ಎನ್ನ+ಅಧೀನವ್+ಅರಿಯಾ
ಸ್ಥಾಣುವಿನ +ಬಲುಹುಂಟು +ಹಿಂಡುವೆನ್+ಇನ್ನು +ನಿನ್+ಅಸುವ
ಗೋಣ +ಮುರಿವೆನು +ಮಿಸುಕಿದರೆ +ಶಿವ
ನಾಣೆ +ಬಾ+ ಸುಮ್ಮುಖಕೆ+ ಹಾಣಾ
ಹಾಣಿಗಿನ್+ಅನುವಾಗ್+ಎನುತಲ್+ಎವೆಯಿಕ್ಕದ್+ಈಕ್ಷಿಸಿದ

ಅಚ್ಚರಿ:
(೧) ಅರ್ಜುನನು ಶಬರನನ್ನು ನೋಡುವ ಪರಿ – ಬಾ ಸುಮ್ಮುಖಕೆ ಹಾಣಾಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ