ಪದ್ಯ ೮: ಅಶ್ವತ್ಥಾಮನ ಕೋಪದ ತೀವ್ರತೆ ಹೇಗಿತ್ತು?

ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ (ದ್ರೋಣ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ತುಂಡು ತುಂಡಾದ ತನ್ನ ತಂದೆಯ ದೇಹವನ್ನು ನೋಡುವ ಮೊದಲೇ ಕಣ್ಣಾಲಿಯಲ್ಲಿ ನೀರುತುಂಬಿ ದೇಹವು ಕಾಣಿಸಲಿಲ್ಲ. ನೋಡಲು ಇಚ್ಛೆ ಬರಲಿಲ್ಲ. ಅದಕ್ಕೆ ಮೊದಲೇ ಅಶ್ವತ್ಥಾಮನ ಕಣ್ಣೂಗಳು ಕೆಂಪಾಗಿ ಕಿಡಿಯುಗುಳಿದವು. ರೋಷದಲ್ಲಿ ಪಾಂಡವರ ಸೈನ್ಯವೇ ಕಾಣಲಿಲ್ಲ.

ಅರ್ಥ:
ಕೂಡು: ಜೊತೆ; ಹರಿ: ಸೀಳು; ಹಂಚು: ಹರಡು; ತಂದೆ: ಪಿತ; ಗೂಡು: ದೇಹ; ನೋಡು: ವೀಕ್ಷಿಸು; ಮುನ್ನ: ಮೊದಲು; ಕಂಬನಿ: ಕಣ್ಣೀರು; ಮೂಡು: ಹೊಮ್ಮು; ಮುಳುಗು: ತೋಯು, ಮಿಂದು; ಆಲಿ: ಕಣ್ಣು; ಕಾಣು: ತೋರು; ಪಿತೃ: ತಂದೆ; ಕಳೇವರ: ಪಾರ್ಥಿವ ಶರೀರ; ಎಳಸು: ಬಯಸು, ಅಪೇಕ್ಷಿಸು; ಮುನ್ನ: ಮೊದಲು; ಕಿಡಿ: ಬೆಂಕಿ; ಝಾಡಿ: ಕಾಂತಿ; ಕಣ್ಣು: ನಯನ; ಮಿಗೆ: ಅಧಿಕವಾಗಿ; ಕಾಣು: ತೋರು; ಪರಬಲ: ವೈರಿ ಸೇನೆ;

ಪದವಿಂಗಡಣೆ:
ಕೂಡೆ +ಹರಿಹಂಚಾದ +ತಂದೆಯ
ಗೂಡ +ನೋಡದ +ಮುನ್ನ +ಕಂಬನಿ
ಮೂಡಿ +ಮುಳುಗಿದವ್+ಆಲಿ +ಕಾಣವು +ಪಿತೃ+ಕಳೇವರವ
ನೋಡಲ್+ಎಳಸದ +ಮುನ್ನ +ಕಿಡಿಗಳ
ಝಾಡಿಯನು +ಕಣ್ಣುಗುಳಿದವು +ಮಿಗೆ
ನೋಡಿದ್+ಅಶ್ವತ್ಥಾಮ +ಕಾಣನು +ಮುಂದೆ +ಪರಬಲವ

ಅಚ್ಚರಿ:
(೧) ದೇಹವೆಂದು ಹೇಳಲು – ಗೂಡು ಪದದ ಬಳಕೆ
(೨) ತಂದೆ, ಪಿತೃ – ಸಮಾನಾರ್ಥಕ ಪದ