ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾಯಾರ ಸೋನೆಯಲಿ (ಕರ್ಣ ಪರ್ವ, ೧೧ ಸಂಧಿ, ೨೦ ಪದ್ಯ)
ತಾತ್ಪರ್ಯ:
ಓಹೋ ದೊರೆಗಳ ಮೇಲೇ ಯುದ್ಧವು ಬಿದ್ದಿದೆ, ಅಯ್ಯೋ ಸೈನಿಕರೇ ಯಾರು ಹಿಮ್ಮೆಟ್ಟಬೇಡಿ, ಎದುರಾಗಿರುವವನು ನಮ್ಮ ಭೀಷ್ಮನೂ ಅಲ್ಲ ದ್ರೋಣನು ಅಲ್ಲ. ಹೆದರದಿರಿ ಎಲ್ಲರೂ ಒಟ್ಟಾಗಿ ಇವನನ್ನು ಆವರಿಸಿ ಮುತ್ತಿಗೆ ಹಾಕಿರಿ ಎನ್ನುತ್ತಾ ಕರ್ಣನನ್ನು ಮುತ್ತಿ ಬಾಣಗಳ ಮಳೆಗೆರೆಯಲು ಕರ್ಣನ ದಾರಿಯನ್ನು ತಪ್ಪಿಸಿದರು.
ಅರ್ಥ:
ಎಲೆಲೆ: ಓಹೋ; ರಾಯ: ರಾಜ; ಬಿದ್ದು: ಆಕ್ರಮಣ; ಕಲಹ: ಯುದ್ಧ; ಅಕಟಾ: ಅಯ್ಯೋ; ಹೋಗು: ತೆರಳು; ಇಟ್ಟಳಿಸು: ದಟ್ಟವಾಗು, ಒತ್ತಾಗು; ಹಗೆ: ವೈರಿ; ಅಳುಕು: ಹೆದರು; ಕವಿ: ಆವರಿಸು, ಮುಚ್ಚು; ಹೆಬ್ಬಲ: ದೊಡ್ಡ ಸೈನ್ಯ; ಸಘಾಡ: ರಭಸ, ವೇಗ; ಔಕು: ಒತ್ತು; ಹೊಲಬು: ದಾರಿ, ಮಾರ್ಗ; ಕೆಡಿಸು: ತಪ್ಪಿಸು; ಅಂಬು: ಬಾಣ; ಸಾರಾಯ: ಸಾರವತ್ತಾದ, ರಸವತ್ತಾದ; ಸೋನೆ: ಮಳೆ;
ಪದವಿಂಗಡಣೆ:
ಎಲೆಲೆ +ರಾಯನ +ಮೇಲೆ +ಬಿದ್ದುದು
ಕಲಹವ್+ಅಕಟಾ +ಹೋಗಬೇಡ್
ಇಟ್ಟಳಿಸಿದವ+ ಹಗೆ +ನಮ್ಮ +ಭೀಷ್ಮ +ದ್ರೋಣನಿವನಲ್ಲ
ಅಳುಕದಿರಿ+ ಕವಿಕವಿಯೆನುತ +ಹೆ
ಬ್ಬಲ +ಸಘಾಡದಲ್+ಔಕಿ +ಕರ್ಣನ
ಹೊಲಬುಗೆಡಿಸಿದುದ್+ಅಂಬುಗಳ+ ಸಾಯಾರ +ಸೋನೆಯಲಿ
ಅಚ್ಚರಿ:
(೧) ಎಲೆಲೆ, ಅಕಟಾ, ಕವಿಕವಿ – ಪದಗಳ ಬಳಕೆ
(೨) ಬಾಣಗಳ ಆವರಿಸಿದವು ಎಂದು ಹೇಳಲು – ಅಂಬುಗಳ ಸಾಯಾರ ಸೋನೆಯಲಿ