ಪದ್ಯ ೫೧: ಭೀಮನು ಶಬರನಿಗೆ ಏನು ಹೇಳಿದನು?

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಶಬರನು ಭೀಮನನ್ನು ಕಂಡು ಆತನೊಡನೆ ಏಕಾಂಗಿಯಾಗಿ ಮಾತನಾಡಲು ಬಯಸುತ್ತೇನೆ ಎಂದು ಹೇಳಲು, ಭೀಮನು ಸಂತುಷ್ಟನಾಗಿ ಆಪ್ತ ಪರಿವಾರದವರೊಡನೆ ಆ ಶಬರನನ್ನು ಕರೆಸಿದನು. ಕೌರವನು ಎಲ್ಲಿ ಅಡಗಿದನೆಂಬುದು ಗೊತ್ತೇ? ಈವರೆಗೆ ಆ ವಿಷಯ ತಿಳಿದುಬಂದಿಲ್ಲ. ನೀವು ಹೇಳಿದರೆ ನಿಮಗೆ ಉಡುಗೊರೆಯನ್ನು ಕೊಡುತ್ತೇನೆ ಎಂದು ಭೀಮನು ಹೇಳಲು, ಆ ಶಬರನು ಹೀಗೆಂದು ನುಡಿದನು.

ಅರ್ಥ:
ಎಕ್ಕಟಿ: ಒಬ್ಬಂಟಿಗ, ಏಕಾಕಿ; ಬಿನ್ನಹ: ಕೋರಿಕೆ; ತುಷ್ಟ: ತೃಪ್ತ, ಆನಂದ; ಕರಸು: ಬರೆಮಾಡು; ಪರಿಮಿತ: ಮಿತ, ಸ್ವಲ್ಪ; ಪುಳಿಂದಕ: ಬೇಟೆಗಾರ; ನೆಲೆ: ವಾಸಸ್ಥಾನ; ದುರ್ಭೇದ: ಭೇದಿಸಲಾಗದ; ಮೆಚ್ಚು: ಒಲುಮೆ, ಪ್ರೀತಿ; ದುರಾತ್ಮ: ದುಷ್ಟ; ಅರುಹು: ಹೇಳು; ಆದರ: ಆಸಕ್ತಿ, ವಿಶ್ವಾಸ;

ಪದವಿಂಗಡಣೆ:
ಆದರ್+ಎಕ್ಕಟಿ +ಬಿನ್ನಹವ +ನೀವ್
ಆದರಿಪುದ್+ಎನೆ +ತುಷ್ಟನಾಗಿ +ವೃ
ಕೋದರನು +ಕರಸಿದನು +ಪರಿಮಿತಕ್+ಆ+ ಪುಳಿಂದಕರ
ಆದುದೇ +ನೆಲೆ +ಕುರುಪತಿಗೆ+ ದು
ರ್ಭೇದವಿದು+ ಮೆಚ್ಚುಂಟು +ನಿಮಗ್+ಎನಲ್
ಆ+ ದುರಾತ್ಮಕರ್+ಅರುಹಿದರು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಆದರ್, ಆದರಿಪು – ಪದದ ಬಳಕೆ
(೨) ಕೌರವನೆಲ್ಲಿದ್ದಾನೆ ಎಂದು ಹೇಳುವ ಪರಿ – ಆದುದೇ ನೆಲೆ ಕುರುಪತಿಗೆ

ಪದ್ಯ ೬೪: ಕೃಷ್ಣನು ಧರ್ಮಜನಿಗೆ ಏನನ್ನು ಬೋಧಿಸಿದನು?

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಿಟ್ಟನು ಹಸಾದದ ಮಧುರವಚನದಲಿ (ಶಲ್ಯ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ನಿಮ್ಮ ಸೇನೆಯ ವೀರರ ಸಂಹಾರಕ್ಕೆ ಕೃಷ್ಣಶಕ್ತಿಯ ಸ್ಫುರಣವೇ ಕಾರಣ. ನಿಮ್ಮ ಯುದ್ಧವು ದೈವಹೀನರ ವಿಲಾಸ. ಶ್ರೀಕೃಷ್ಣನು ಯುಧಿಷ್ಠಿರನನ್ನು ಪಕ್ಕಕ್ಕೆ ಕರೆದು ತನ್ನ ಶಕ್ತಿಯ ಪ್ರಯೋಗವನ್ನು ಬೋಧಿಸಿದನು. ಧರ್ಮಜನು ಮಹಾಪ್ರಸಾದ ಎಂದು ಸ್ವೀಕರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲ್ಸಿಉ; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಐಸಲೆ: ಅಲ್ಲವೆ; ಸಂಹರಣ: ನಾಶ; ಬೀಜ: ಮೂಲವಸ್ತು; ದೈವ: ಅಮರ; ವಿಲಾಸ: ವಿಹಾರ; ಹರಿ: ಕೃಷ್ಣ; ನೃಪ: ರಾಜ; ಎಕ್ಕಟಿ: ಒಬ್ಬಂಟಿಗ, ಏಕಾಕಿ, ಗುಟ್ಟು; ಕರೆ: ಬರೆಮಾಡು; ನಿಜ: ನೈಜ, ದಿಟ; ಶಕ್ತಿ: ಬಲ; ಪ್ರಯೋಗ: ಉಪಯೋಗ, ನಿದರ್ಶನ; ಒರೆ: ಶೋಧಿಸಿ; ಹಸಾದ: ಪ್ರಸಾದ, ಅನುಗ್ರಹ; ಮಧುರ: ಹಿತ; ವಚನ: ನುಡಿ;

ಪದವಿಂಗಡಣೆ:
ಅರಸ +ಕೇಳೈ +ಕೃಷ್ಣ+ಶಕ್ತಿ
ಸ್ಫುರಣವ್+ಐಸಲೆ +ನಿಮ್ಮ +ಬಲ +ಸಂ
ಹರಣಕ್+ಆವುದು +ಬೀಜ +ನಿರ್ದೈವರ +ವಿಲಾಸವಿದು
ಹರಿ +ಯುಧಿಷ್ಠಿರ+ ನೃಪನನ್+ಎಕ್ಕಟಿ
ಕರೆದು +ನಿಜಶಕ್ತಿ+ಪ್ರಯೋಗವನ್
ಒರೆದಡ್+ಒಡಬಿಟ್ಟನು +ಹಸಾದದ +ಮಧುರ+ವಚನದಲಿ

ಅಚ್ಚರಿ:
(೧) ಕೌರವರ ಸೋಲಿನ ಮೂಲ ಕಾರಣ – ನಿಮ್ಮ ಬಲ ಸಂಹರಣಕಾವುದು ಬೀಜ ನಿರ್ದೈವರ ವಿಲಾಸವಿದು

ಪದ್ಯ ೨೧: ದುರ್ಯೋಧನನು ಯಾವ ದೇವರಬಳಿ ಹರಕೆ ಮಾಡಿಕೊಂಡನು?

ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ (ಸಭಾ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಕುನಿಯನ್ನು ಕರೆಸಿದನು. ಕರ್ಣನಿಗೆ ತಿಳಿಸಿದನು. ಜಯದ್ರಥನನ್ನು ಏಕಾಂತದಲ್ಲಿ ಕರೆದು ಮೋಸದ ದಾಲಗಳನ್ನು ನಿಮಿಸಿದರು. ಗಣಪತಿ, ಯಕ್ಷೇಶ್ವರಿ, ಕಲಾವತಿ, ದುರ್ಗಾ, ಭುವನೇಶ್ವರಿ ದೇವತೆಗಳಿಗೆ ಬಲಿಯನ್ನು ಕೊಟ್ಟು ವಾಮಮಾರ್ಗದ ಅನೇಕ ಉಪಚಾರಗಳನ್ನು ಮಾಡಿ ಹರಕೆ ಮಾಡಿಕೊಂಡರು.

ಅರ್ಥ:
ಕರೆಸು: ಬರೆಮಾಡು, ಆಮಂತ್ರಿಸು; ಅರುಹು: ಹೇಳು; ಸೈಂಧವ: ಜಯದ್ರಥ; ಎಕ್ಕಟಿ: ಏಕಾಂತವಾದ; ಹೇಳು: ತಿಳಿಸು; ಕೃತ್ರಿಮ: ಮೋಸ; ಹಾಸಂಗಿ: ಜೂಜಿನ ದಾಳ; ರಚಿಸು: ನಿರ್ಮಿಸು; ಹರಸಿ: ಆಶೀರ್ವಾದ, ಸಂಕಲ್ಪ; ವಿವಿಧ; ಹಲವಾರು; ಉಪಚಾರ: ಸತ್ಕಾರ; ಬಲಿ: ಕಾಣಿಕೆ, ಕೊಡುಗೆ; ವಿಧಾನ; ರೀತಿ;

ಪದವಿಂಗಡಣೆ:
ಕರೆಸಿದನು +ಶಕುನಿಯನು +ಕರ್ಣಂಗ್
ಅರುಹಿದನು +ಸೈಂಧವನನ್+ಎಕ್ಕಟಿ
ಕರೆದು +ಹೇಳಿದ +ಕೃತ್ರಿಮದ +ಹಾಸಂಗಿಗಳ +ರಚಿಸಿ
ಹರಸಿಕೊಂಡರು +ಗಣಪ +ಯಕ್ಷೇ
ಶ್ವರಿ+ ಕಳಾವತಿ+ ದುರ್ಗಿ +ಭುವನೇ
ಶ್ವರಿಗಳಿಗೆ +ವಿವಿಧ+ಉಪಚಾರದ+ ಬಲಿ+ ವಿಧಾನದಲಿ

ಅಚ್ಚರಿ:
(೧) ಯಕ್ಷೇಶ್ವರಿ, ಭುವನೇಶ್ವರಿ – ಪ್ರಾಸ ಪದ