ಪದ್ಯ ೬೩: ಕೌರವ ವೀರರು ಹೇಗೆ ಹಿಂದಿರುಗಿದರು?

ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತು ವದೆನುತ ತಿರುಗಿದರು (ಭೀಷ್ಮ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಬಿರುದನ್ನು ಹೊಗಳುವ ಭಟ್ಟರ ಬಾಯಿಗೆ ಬಡಿಯಿರಿ, ಧ್ವಜಸ್ತಂಭವನ್ನು ರಥದೊಳಗೇ ಇಡಿರಿ, ಚಲಿಸುತ್ತಿರುವುದು ಗೊತ್ತಾಗದಂತೆ ಕುನ್ನಿಗಳಾದ ಸೂತರು ರಥವನ್ನು ಹಿಂದಕ್ಕೆ ಹೊಡೆಯಲಿ, ತಲೆಗೆ ಮುಸುಕು ಹಾಕಿಕೊಳ್ಳಿ, ಛತ್ರ ಚಾಮರಗಳನ್ನು ನೆಲಕ್ಕೆಸೆಯಿರಿ, ಬಿರುದು ಹೊತ್ತವರನ್ನು ಉಳಿಸದೆ ಕೆಳಕ್ಕೆ ಕೆಡಹಿರಿ ಎನ್ನುತ್ತಾ ಕೌರವ ವೀರರು ಹಿಂದಿರುಗಿದರು.

ಅರ್ಥ:
ಉಲಿ: ಶಬ್ದ; ಭಟ್ಟ: ಹೊಗಳುಭಟ್ಟ; ಹೊಯ್: ಹೊಡೆ; ರಥ: ಬಂಡಿ; ಕೆಡಹು: ನಾಶಮಾಡು; ಧ್ವಜ: ಬಾವುಟ, ಪತಾಕೆ; ಕಂಭ: ಕೋಲು, ಆಧಾರ; ಉಲುಕು:ಅಲ್ಲಾಡು; ಹರಿಸು: ಚಲಿಸು; ಸೂತ: ರಥವನ್ನು ನಡೆಸುವವನು; ಕುನ್ನಿ: ನಾಯಿ; ತಲೆ: ಶಿರ; ಮುಸುಕು: ಹೊದಿಕೆ; ಛತ್ರ: ಕೊಡೆ; ಚಮರ: ಚಾಮರ; ನೆಲ: ಭೂಮಿ; ಬಿಸುಡು: ಹೊರಹಾಕು; ಹೆಸರು: ನಾಮ; ಉಳುಹು: ಕಾಪಾಡು; ಬೀಳು: ಕುಸಿ; ತಿರುಗು: ಅಲೆದಾಡು, ಸುತ್ತು; ಕುತ್ತು: ತೊಂದರೆ, ಆಪತ್ತು;

ಪದವಿಂಗಡಣೆ:
ಉಲಿವ +ಭಟ್ಟರ +ಬಾಯ +ಹೊಯ್ +ರಥ
ದೊಳಗೆ +ಕೆಡಹಲಿ +ಧ್ವಜದ +ಕಂಭವನ್
ಉಲುಕದಂತಿರೆ +ರಥವ+ ಹರಿಸಲಿ +ಸೂತ+ಕುನ್ನಿಗಳು
ತಲೆ+ಮುಸುಕನ್+ಇಡಿ +ಛತ್ರ +ಚಮರವ
ನೆಲಕೆ +ಬಿಸುಡಲಿ +ಹೆಸರುಗೊಂಡರನ್
ಉಳುಹಲಾಗದು +ಬೀಳಗುತ್ತುವದ್+ಎನುತ+ ತಿರುಗಿದರು

ಅಚ್ಚರಿ:
(೧) ಹೊಗಳುವುದನ್ನು ನಿಲ್ಲಿಸಿ ಎಂದು ಹೇಳುವ ಪರಿ – ಉಲಿವ ಭಟ್ಟರ ಬಾಯ ಹೊಯ್