ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆರಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೩೮ ಪದ್ಯ)
ತಾತ್ಪರ್ಯ:
ಘಟೋತ್ಕಚನ ಮುಂದೆ ನಿಂತರೆ ಕರ್ಣನೇ ನಿಲ್ಲಬೇಕು. ಶಿವ ಶಿವಾ, ಕರ್ಣನ ದಾಳಿಯನ್ನು ಸೈರಿಸಿ ನಿಲ್ಲಲು ಘಟೋತ್ಕಚನಿಗೆ ಮಾತ್ರ ಸಾಧ್ಯ, ಉಳಿದ ಮಹಾವೀರರೆನ್ನಿಸಿಕೊಳ್ಳುವವರು ಕೇವಲ ಶಕ್ತಿದರಿದ್ರರು, ವೀರರೆನ್ನಿಸಿಕೊಳ್ಳುವುದಕ್ಕೆ ಅನರ್ಹರು. ಇವರಿಗೆ ಸರಿಯಾದವರು ಉಭಯ ಸೈನ್ಯಗಳಲ್ಲೂ ಇಲ್ಲ.
ಅರ್ಥ:
ನಿಲುವು: ನಿಲ್ಲು; ಅಡ್: ಅಡ್ಡ, ನಡುವೆ; ಅಸುರ: ರಾಕ್ಷಸ; ಮುಂದೆ: ಎದುರು; ಬೇಹುದು: ಬೇಕು; ಉರುಬೆ: ಅಬ್ಬರ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ಒಪ್ಪು: ಒಪ್ಪಿಗೆ, ಸಮ್ಮತಿ; ಉಳಿದ: ಮಿಕ್ಕ; ಭೂರಿ: ಹೆಚ್ಚಾದ, ಅಧಿಕವಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ವೆಗ್ಗಳೆ: ಶ್ರೇಷ್ಠ; ಬಲ: ಸೈನ್ಯ; ಅರಿ: ವೈರಿ;
ಪದವಿಂಗಡಣೆ:
ನಿಲುವಡ್+ಅಸುರನ +ಮುಂದೆ +ಕರ್ಣನೆ
ನಿಲಲು +ಬೇಹುದು +ಕರ್ಣನ್+ಉರುಬೆಗೆ
ನಿಲುವಡ್+ಈ+ ಅಮರಾರಿಗ್+ಒಪ್ಪುವುದೈ +ಮಹಾದೇವ
ಉಳಿದ +ಭೂರಿಯ+ ಬಣಗುಗಳು+ ವೆ
ಗ್ಗಳೆಯವೆರಸರಿಗೆ +ನೋಂತರೇ+ ಕುರು
ಬಲದೊಳ್+ಅರಿಬಲದೊಳಗೆ +ಸರಿಯಿನ್ನಿವರಿಗಿಲ್ಲೆಂದ
ಅಚ್ಚರಿ:
(೧) ಕುರುಬಲ, ಅರಿಬಲ – ಬಲ ಪದದ ಬಳಕೆ
(೨) ನಿಲುವಡ್, ನಿಲಲು – ೧-೩ ಸಾಲಿನ ಮೊದಲ ಪದಗಳು