ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾಭಾಳಲೋಚನನ (ದ್ರೋಣ ಪರ್ವ, ೯ ಸಂಧಿ, ೪೦ ಪದ್ಯ)
ತಾತ್ಪರ್ಯ:
ಅರ್ಜುನನಾದರೋ ಉರಿಯನ್ನು ಹಿಡಿದು ಗೆಲ್ಲುವ ವೀರ, ಪಾದರಸದಂತೆ ಚುರುಕಾದವನು. ನಿನ್ನ ಮಗನಾದ ದುಶ್ಯಾಸನನು ಅವನಿಗೆ ಯಾವ ಪಾಡು! ದುಶ್ಯಾಸನನು ಜಾರಿ ಹೋದನು. ರಥವಉ ಮಹಾವೇಗದಿಂದ ಬರುತ್ತಿರಲು ಅರ್ಜುನನು ದ್ರೋಣನನ್ನು ಕಂಡನು.
ಅರ್ಥ:
ಉರಿ: ಬೆಂಕಿ; ಬಂದಿ: ಸೆರೆ, ಬಂಧನ; ಹಿಡಿ: ಗ್ರಹಿಸು; ಹೆಚ್ಚು: ಬಹಳ; ದೊರಕು: ಪಡೆ; ದಿಟ: ನಿಜ; ಪಾದರಸ: ಪಾರಜ; ಅರಸ: ರಾಜ; ಏಸು: ಎಷ್ಟು; ಪಾಡು: ರೀತಿ, ಬಗೆ; ತೆರಳು: ಹೋಗು; ಸೂಠಿ: ವೇಗ; ಉರವಣಿಸು: ಉತ್ಸಾಹದಿಂದಿರು; ತೇರು: ರಥ; ಐತರು: ಬಂದು ಸೇರು; ಕಂಡು: ನೋಡು; ಶಸ್ತ್ರ: ಆಯುಧ; ಭಾಳ: ಹಣೆ; ಲೋಚನ: ಕಣ್ಣು;
ಪದವಿಂಗಡಣೆ:
ಉರಿಯ +ಬಂದಿಯ +ಹಿಡಿದು +ಹೆಚ್ಚುವ
ದೊರೆಯಲೇ +ದಿಟ+ ಪಾದರಸವ್+ಎಲೆ
ಅರಸ +ನಿನ್ನ +ಕುಮಾರನ್+ಏಸರ +ಪಾಡು +ಪಾರ್ಥಂಗೆ
ತೆರಳಿದನು +ನಿನ್ನಾತ +ಸೂಠಿಯೊಳ್
ಉರವಣಿಸಿತಾ +ತೇರು +ನರನೈ
ತರಲು +ಕಂಡನು +ಶಸ್ತ್ರವಿದ್ಯಾ+ಭಾಳಲೋಚನನ
ಅಚ್ಚರಿ:
(೧) ದ್ರೋಣನನ್ನು ಶಸ್ತ್ರವಿದ್ಯಾಭಾಳಲೋಚನ ಎಂದು ಕರೆದಿರುವುದು
(೨) ಅರ್ಜುನನನ್ನು ಹೋಲಿಸುವ ಪರಿ – ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ