ಪದ್ಯ ೨೨: ದ್ರೌಪದಿಯು ಯಾರನ್ನು ಭಜಿಸಿದಳು?

ಭೂಸುರರ ಕಳವಳವ ನೃಪನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೇ ಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾಸುರದ ದುಃಖದಲಿ ಮುನಿಯುಪ
ದೇಶ ಮಮ್ತ್ರದ ಬಲದಿ ಭಾವಿಸಿ ನೆನೆದಳಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪರಿವಾರದ ಬ್ರಾಹ್ಮಣರ ಕಳವಳ, ಧರ್ಮಜನ ಸಂಕಟ, ಭೀಮನ ಆಕ್ರೋಶ, ಅರ್ಜುನನ ಸೋಗು, ನಕುಲ ಸಹದೇವರ ಮನಸ್ಸಿನ ಕಿರುಕುಳ ಇವೆಲ್ಲವನ್ನೂ ಕಮಲಮುಖಿಯಾದ ದ್ರೌಪದಿಯು ಬೇಸರದಿಂದ ನೋಡಿ, ಧೌಮ್ಯರು ಉಪದೇಶಿಸಿದ ಮಂತ್ರವನ್ನು ಶ್ರೀಕೃಷ್ಣನ ಸ್ಮರಣೆ ಮಾಡುತ್ತಾ ಜಪಿಸಿದಳು.

ಅರ್ಥ:
ಭೂಸುರ: ಬ್ರಾಹ್ಮಣ; ಕಳವಳ: ಗೊಂದಲ; ನೃಪ: ರಾಜ; ಕ್ಲೇಶ: ದುಃಖ, ಸಂಕಟ; ಪವಮಾನ: ವಾಯು; ಸುತ: ಮಗ; ಆಕ್ರೋಶ: ಕೋಪ; ನರ:ಅರ್ಜುನ; ಉಪಟಳ: ಕಿರುಕುಳ; ಆಟ: ಸೋಗು; ಸರೋಜಾನನೆ: ಕಮಲದಂತ ಮುಖವುಳ್ಳ; ನಿರೀಕ್ಷೆ: ನೋಡುವುದು; ಆಸುರ: ಬೇಸರ; ದುಃಖ: ದುಗುಡ; ಮುನಿ: ಋಷಿ; ಉಪದೇಶ: ಬೋಧಿಸುವುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಲ: ಶಕ್ತಿ; ಭಾವಿಸು: ಧ್ಯಾನಿಸು; ನೆನೆ: ಜ್ಞಾಪಿಸಿಕೊ; ಅಚ್ಯುತ: ನ್ಯೂನ್ಯತೆಯಿಲ್ಲದವ, ಕೃಷ್ಣ;

ಪದವಿಂಗಡಣೆ:
ಭೂಸುರರ +ಕಳವಳವ +ನೃಪನಾ
ಕ್ಲೇಶವನು +ಪವಮಾನ+ಸುತನ
ಆಕ್ರೋಶವನು +ನರನ+ಆಟವನು +ಮಾದ್ರೇಯರ್+ ಉಪಟಳವ
ಆ +ಸರೋಜಾನನೆ +ನಿರೀಕ್ಷಿಸುತ
ಆಸುರದ +ದುಃಖದಲಿ+ ಮುನಿ+ಉಪ
ದೇಶ +ಮಂತ್ರದ+ ಬಲದಿ +ಭಾವಿಸಿ +ನೆನೆದಳ್+ಅಚ್ಯುತನ

ಅಚ್ಚರಿ:
(೧) ಕಳವಳ, ಕ್ಲೇಶ, ಆಟ, ಆಕ್ರೋಶ, ಉಪಟಳಾ, ಆಸುರ – ಕಳವಳವನ್ನು ವಿವರಿಸುವ ಪದಗಳು